August 26, 2026
kranthikidi.com
ತಾಜಾಸುದ್ದಿರಾಜ್ಯ

ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್..!

ಬೆಂಗಳೂರು : ಬೆಂಗಳೂರಿನ ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪಾರ್ಸೆಲ್ ನೀಡಲು ಬಂದ ಇ-ಕಾಮರ್ಸ್ ಸಂಸ್ಥೆಯೊಂದರ ಡೆಲಿವರಿ ಏಜೆಂಟ್, ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ತಮಗಾದ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಂತ್ರಸ್ತ ಮಹಿಳೆಯ ಹೇಳುವಂತೆ ಪಾರ್ಸೆಲ್ ತಲುಪಿಸಲು ಬಂದ ಡೆಲಿವರಿ ಬಾಯ್ ತುರ್ತಾಗಿ ಶೌಚಾಲಯ ಬಳಸಬೇಕೆಂದು ಅನುಮತಿ ಕೇಳಿದ್ದಾನೆ. ಅಪರಿಚಿತರನ್ನು ಮನೆಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಮಹಿಳೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತುರ್ತು ಪರಿಸ್ಥಿತಿ ಇದ್ದರೆ ಪಕ್ಕದ ಮನೆಯ ಪುರುಷರ ಸಹಾಯ ಕೇಳುವಂತೆ ಮಹಿಳೆ ಸಲಹೆ ನೀಡಿದ್ದಾರೆ. ಆದರೆ, ಮಹಿಳೆಯ ಮಾತನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಆತ, ಬಲವಂತವಾಗಿ ತನ್ನ ಪಾದರಕ್ಷೆಗಳನ್ನು ಬಿಚ್ಚಿ ಅನುಮತಿಯಿಲ್ಲದೆ ಫ್ಲಾಟ್‌ ಒಳಗೆ ನುಗ್ಗಿದ್ದಾನೆ.

ಮಹಿಳೆ ವಿರೋಧಿಸಿದರೂ ಶೌಚಾಲಯಕ್ಕೆ ಹೋದ ಆತ, ಅಲ್ಲಿಂದ ಹೊರಬಂದ ಬಳಿಕ ಮಹಿಳೆಯ ಎದುರು ಅತ್ಯಂತ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಹಾಗೂ ವಿಕೃತವಾಗಿ ವರ್ತಿಸಿದ್ದಾನೆ. ಈ ವರ್ತನೆಯಿಂದ ಮಹಿಳೆ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಮಹಿಳೆಯೊಬ್ಬಳು ಬೇಡ ಎಂದ ಮೇಲೆ ಅಲ್ಲಿಗೆ ಆ ಚರ್ಚೆ ಮುಗಿಯಬೇಕಿತ್ತು. ಆದರೆ ಆತ ತನ್ನ ಮಿತಿಗಳನ್ನು ಮೀರಿ ಮನೆಗೆ ನುಗ್ಗಿ ಸುರಕ್ಷತೆಗೆ ಧಕ್ಕೆ ತಂದಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂಬ ಭಯದಿಂದ ಮಹಿಳೆ ತಕ್ಷಣವೇ ತನ್ನ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿ, ಮುಖ್ಯ ಬಾಗಿಲನ್ನು ತೆರೆದು ಸಹಾಯಕ್ಕಾಗಿ ಓಡಲು ಸಿದ್ಧವಾಗಿ ನಿಂತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಹಿಳೆಯಿಂದ ಅಗತ್ಯ ವಿವರಗಳನ್ನು ಪಡೆದುಕೊಂಡು, ಆರೋಪಿ ಡೆಲಿವರಿ ಏಜೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇತ್ತ ಇ-ಕಾಮರ್ಸ್ ಸಂಸ್ಥೆಯಾದ ಫ್ಲಿಪ್‌ಕಾರ್ಟ್ ಕೂಡ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ನಮ್ಮ ಸಿಬ್ಬಂದಿಯ ಇಂತಹ ನಡವಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಬಗ್ಗೆ ಆಂತರಿಕ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ. ಈ ಘಟನೆಯು ಸ್ವಂತ ಮನೆಯಲ್ಲೇ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿದೆ. ಇದನ್ನೂ ಓದಿ : ಮಾರುವೇಷ ಧರಿಸಿ, ಬಸ್‌ಗಳಲ್ಲಿ ಸಚಿವ ಬೈರತಿ ಸುರೇಶ್‌ ಚೆಕ್ಕಿಂಗ್‌..!

Related posts

ರಾಜ್ಯಾದ್ಯಂತ ಥಿಯೇಟರ್‌ಗಳಿಂದ ಜನ ನಾಯಗನ್ ಹಲವು ಪ್ರದರ್ಶನ ರದ್ದು..!

Kalpana Editor

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ: ಈಶ್ವರ ಖಂಡ್ರೆ

Kalpana Editor

ಪೋಕ್ಸೋ ಪ್ರಕರಣ; ವಚನಾನಂದ ಶ್ರೀಗಳಿಗೆ ನೀಡಿದ್ದ, ನಿರೀಕ್ಷಣಾ ಜಾಮೀನು ರದ್ದು..!

Kalpana Editor