ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ‘ಆಸ್ತಿ ಆಸ್ತಿ ಗಳಿಕೆ’ ಪ್ರಕರಣದ ವಿಚಾರಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯುವಂತೆ ಅಲಹಾಬಾದ್ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಪ್ರಕರಣದ ತನಿಖೆಗೆ ಸಂಬಂಧಿಸಿದ ಯಾವುದೇ ವರದಿಯನ್ನು ಸಿಬಿಐ ಅಥವಾ ಜಾರಿ ನಿರ್ದೇಶನಾಲಯ ಅಲಹಾಬಾದ್ ಹೈಕೋರ್ಟ್ಗೆ ಸಲ್ಲಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ.
“ಈ ಪ್ರಕರಣ ಅಷ್ಟು ಗಂಭೀರವಾಗಿದ್ದರೆ, ನಿಮ್ಮ ಸಂಸ್ಥೆಗಳು ಯಾಕೆ ಸುಮ್ಮನಿವೆ? ನ್ಯಾಯಾಲಯದ ನಿರ್ದೇಶನಕ್ಕಾಗಿ ಕಾಯುತ್ತಿದ್ದೀರಾ? ನೀವೇ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬಹುದಲ್ಲವೇ?” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ವಕೀಲರ ಮೂಲಕ ತನಿಖಾ ಸಂಸ್ಥೆಗಳನ್ನು ತೀವ್ರವಾಗಿ ಪ್ರಶ್ನಿಸಿದೆ.
ಕರ್ನಾಟಕ ಮೂಲದ ಬಿಜೆಪಿಯ ಎಸ್. ವಿಘ್ನೇಶ್ ಶಿಶಿರ್ ಅವರು ರಾಹುಲ್ ಗಾಂಧಿಯವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಮತ್ತು ವಿದೇಶಿ ಪೌರತ್ವದ ಬಗ್ಗೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಮೇರೆಗೆ ತನಿಖೆ ನಡೆಸುವಂತೆ ಹೈಕೋರ್ಟ್ ಸಿಬಿಐ ಮತ್ತು ಇಡಿಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ರಾಹುಲ್ ಗಾಂಧಿ ಅವರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ಹೈಕೋರ್ಟ್ನಲ್ಲಿ ಹಾಕಲಾಗಿರುವ ಕೇಸ್ ಅನ್ನು ವಿಚ್ ಹಂಟ್ ಎಂದು ಆಪಾದಿಸಿದ್ದಾರೆ. ಕೋರ್ಟ್ಗಳಲ್ಲಿ ಇದೇ ವ್ಯಕ್ತಿ (ಶಿಶಿರ್) ಒಂದಾದ ಮೇಲೊಂದು ಪ್ರಕರಣ ದಾಖಲಿಸುತ್ತಲೇ ಇದ್ದಾರೆ. ಇದು ವಿಚ್ ಹಂಟಿಂಗ್ ಅಲ್ಲದೆ ಮತ್ತೇನಿಲ್ಲ. ಇವರು ಮಾಡಿರುವ ಆರೋಪಗಳನ್ನು ಸಿಬಿಐ ಪರಿಶೀಲಿಸುವ ಕೆಲಸ ಮಾಡುತ್ತಿದೆಯಷ್ಟೆ ಎಂದು ಕಪಿಲ್ ಸಿಬಲ್ ಸರ್ವೋಚ್ಚ ನ್ಯಾಯಪೀಠದ ಮುಂದೆ ವಾದಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಯಮಾಲ ಬಾಗಚಿ, ವಿ ಮೋಹನ ಅವರಿರುವ ನ್ಯಾಯಪೀಠವು, ಈ ಪ್ರಕರಣದಲ್ಲಿ ಮುಂದಿನ ವಿಚಾರಣೆ ಆಗುವವರೆಗೂ ತಾವು ಯಾವ ವಿಚಾರಣೆ ನಡೆಸಬಾರದು ಎಂದು ಅಲಹಾಬಾದ್ ಹೈಕೋರ್ಟ್ಗೆ ನಿರ್ದೇಶನ ನೀಡಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ರಾಹುಲ್ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 20ಕ್ಕೆ ನಿಗದಿ ಮಾಡಿತ್ತು. ಈಗ ಅದನ್ನು ಅನಿರ್ದಿಷ್ಟಾವಧಿಗೆ ಮುಂದೂಡಬೇಕಾಗುತ್ತದೆ. ಇದನ್ನೂ ಓದಿ : RSS ಅಂದ್ರೆ ಸಾವಿರ ಹೆಡೆಗಳಿರುವ ವಿಷದ ನಾಗರ; ಯತೀಂದ್ರ ವಾಗ್ದಾಳಿ
