June 13, 2026
kranthikidi.com
ತಾಜಾಸುದ್ದಿರಾಜ್ಯ

ಅಶೋಕ್ ಕಸ ಮಾಫಿಯಾ ಗ್ಯಾಂಗಿನ ಏಜೆಂಟ್ ಆಗಿ ಮಾತನಾಡುತ್ತಿದ್ದಾರೆ: ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು..!

ನವದೆಹಲಿ : “ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಬೆಂಗಳೂರು ಕಸ ಮಾಫಿಯಾ ಗ್ಯಾಂಗಿನ ಏಜೆಂಟರಾಗಿ ಮಾತನಾಡುತ್ತಿದ್ದಾರೆ. ಈ ಮಾಫಿಯಾ ನಿಯಂತ್ರಿಸಬೇಕು ಎಂದು ನಾನು ಈ ಹಿಂದೆ ಅವರೊಂದಿಗೆ ಚರ್ಚೆ ಮಾಡಿದ್ದೆ. ಈಗ ಅಶೋಕ್ ಅವರು ಮಾಫಿಯಾದ ವಕ್ತಾರರಾಗಿರುವುದು ನನಗೆ ಆಶ್ಚರ್ಯವಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

ಕಸದ ಟೆಂಡರ್ ನಲ್ಲಿ 10 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, “ಅವರಿಗೆ ಏನೇನು ಕಸ ಬೇಕೋ ಲಾರಿಯಲ್ಲಿ ತುಂಬಿ ಕಳುಹಿಸಿಕೊಡೋಣ. ಈ ಹಿಂದೆ ಕುಮಾರಸ್ವಾಮಿ ಅವರು ಇದನ್ನೇ ಮಾತನಾಡಿದ್ದರು. ಬೆಂಗಳೂರಿನಲ್ಲಿ ದೊಡ್ಡ ಕಸದ ಲಾಭಿ ಇದೆ. ಅವರ ಕಾಲದಲ್ಲಿ ಯಾಕೆ ಕಸದ ಟೆಂಡರ್ ಮಾಡಲು ಆಗಲಿಲ್ಲ? ಈ ಹಿಂದೆ 14-15 ಜನರಿಗೆ ಕಸದಿಂದ ಇಂಧನ ಉತ್ಪಾದನೆಗೆ ಅವಕಾಶ ನೀಡಿದ್ದೆವು. ಒಬ್ಬರೂ ಯಶಸ್ವಿಯಾಗಿರಲಿಲ್ಲ. ನಾನು ಈ ನಿರ್ಧಾರ ಕೈಗೊಳ್ಳುವ ಮುನ್ನ ದೆಹಲಿ, ಹೈದರಾಬಾದ್, ಚೆನ್ನೈ ಗೆ ಹೋಗಿ ನೋಡಿದ್ದೇನೆ” ಎಂದು ತಿಳಿಸಿದರು.

ಯಾವ ತನಿಖೆ ಬೇಕಾದರೂ ಮಾಡಿಸಲಿ – “ಈಗ ಕಸ ವಿಲೇವಾರಿಗೆ 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಾರೆ. ನಮ್ಮಲ್ಲಿ ಎಲ್ಲೂ ಜಾಗ ಲಭ್ಯವಾಗಲಿಲ್ಲ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಜಾಗ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಇನ್ನು ನೈಸ್ ಬಿಟ್ಟಿರುವ ಜಾಗ ಪಡೆದಿದ್ದೇವೆ. ಬೇರೆ ಕಡೆ ಯಾರಾದರೂ ಜಾಗ ಕೊಡಲು ಸಿದ್ಧರಿದ್ದರೆ ಮುಂದೆ ಬನ್ನಿ ಎಂಬ ಕರೆಯನ್ನು ನೀಡಿದ್ದೇನೆ. ಲಿಂಬಾವಳಿ ಅವರು ಕಸ ಸಾಗಿಸುವುದನ್ನೇ ನಿಲ್ಲಿಸಿದ್ದರು. ನಾವು ಶಾಸಕರ ಒತ್ತಡದ ಮೇರೆಗೆ 800 ಕೋಟಿ ಅನುದಾನ ನೀಡಿದ್ದೇವೆ. ಕಸದಿಂದ ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಆಗಬೇಕು. ಅವರು ಯಾವ ತನಿಖೆ ಬೇಕಾದರೂ ಮಾಡಲಿ. ಎಲ್ಲಾದರೂ ವರದಿ ನೀಡಲಿ. 36 ಸಾವಿರ ಕೋಟಿ ಅಲ್ಲ, ಕೇವಲ 10 ಕೋಟಿ ಹಣ ದುರ್ಬಳಕೆಯಾದರೂ ತನಿಖೆ ಮಾಡಿಸಲಿ, ಎದುರಿಸಲು ನಾನು ಸಿದ್ಧ” ಎಂದರು.

ನಾನು ಸಿಎಂ ಆಗಿರುವುದನ್ನು ಸಹಿಸಲಾಗದೇ ಅಸೂಯೆ ರಾಜಕೀಯ – ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ ಎಂದು ಕೇಳಿದಾಗ, “ನಾನು ಮುಖ್ಯಮಂತ್ರಿಯಾಗಿರುವುದನ್ನು ಅವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಅವರ ಪಕ್ಷ, ಬೇರೆ ಪಕ್ಷಗಳಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಏನು ಒತ್ತಡವಿದೆಯೋ ಮಾತನಾಡಿಸುತ್ತಿದ್ದಾರೆ. ಮಾತನಾಡಿಸಲಿ ಯಾವ ತೊಂದರೆಯೂ ಇಲ್ಲ. ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಕಸದ ಟೆಂಡರ್ ಕರೆಯಲು ಬಿಟ್ಟಿಲ್ಲ ಎಂದು ಅವರ ಶಾಸಕರುಗಳೇ ನಮಗೆ ಹೇಳಿದ್ದಾರೆ. ಇದನ್ನೂ ಓದಿ : ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಸಾಧ್ಯತೆ..!

ಪ್ರತಿಯೊಂದಕ್ಕೂ ನ್ಯಾಯಾಲಯದ ಮೆಟ್ಟಿಲೇರಲಾಗುತ್ತಿತ್ತು. ಕೊನೆಗೆ ನ್ಯಾಯಾಲಯ ಸರ್ಕಾರದ ತೀರ್ಮಾನ ಸರಿಯಾಗಿದೆ ಎಂದು ತೀರ್ಮಾನ ಮಾಡಿದೆ. ಈಗ ಕೋರ್ಟ್ ತೀರ್ಮಾನ ಆಗಿದ್ದರೂ ನಾನು ಒಂದು ಸಮಿತಿ ರಚನೆ ಮಾಡಿಸಿ ತನಿಖೆ ಮಾಡಿಸಿದ್ದೆ. ಅವರು ಅಸೂಯೆ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಪಾರದರ್ಶಕತೆ, ಕಾರ್ಯವೈಖರಿ ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ” ಎಂದು ಹರಿಹಾಯ್ದರು.

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, “ನಾಳೆ ನೀತಿ ಆಯೋಗದ ಸಭೆ ಇದೆ. ಎಲ್ಲಾ ರಾಜ್ಯಗಳ ಸಿಎಂ ಕರೆಯಲಾಗಿದ್ದು, ನಾನು ಮೊದಲ ಬಾರಿಗೆ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವೆ. ಇಂದು ನಮ್ಮ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ಅಲ್ಲದೇ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಕಚೇರಿಗೆ ಭೇಟಿ ನೀಡಿದ್ದೆ. ಅವರೆಲ್ಲ ನಮ್ಮ ಪಕ್ಷದ ಆಧಾರಸ್ತಂಭಗಳು. ನಾನು ರಾಜಕೀಯವಾಗಿ ಬೆಳೆದಿದ್ದು ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ಮೂಲಕ” ಎಂದು ತಿಳಿಸಿದರು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಭೇಟಿ ವೇಳೆ ಮಾಡಲಾದ ಚರ್ಚೆ ಬಗ್ಗೆ ಕೇಳಿದಾಗ, “ನಾನು ಎಲ್ಲವನ್ನು ಹೇಳಲು ಆಗುವುದಿಲ್ಲ. ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ, ರಾಜ್ಯದ ಮುಖ್ಯಮಂತ್ರಿ. ನಾನು ಏನು ಮಾತನಾಡಬೇಕೋ ಮಾತನಾಡಿದ್ದೇನೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

ರಾಜ್ಯದ ಯೋಜನೆಗಳಿಗೆ ಅನುಮತಿ ನೀಡುವ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚೆ – “ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿ ಮಾಡಿ, ನಮ್ಮ ರಾಜ್ಯದ ಯೋಜನೆಗಳಿಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿರುವೆ. ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಈ ವಿಚಾರವನ್ನು ಅವರಿಗೆ ವಿವರಿಸಿ, ಯೋಜನೆಗೆ ಅನುಮತಿ ನೀಡುವಂತೆ ಕೇಳಿದೆ. ಇನ್ನು ಕೇಂದ್ರ ಸರ್ಕಾರದ ಅರ್ಬನ್ ಚಾಲೆಂಜ್ ಫಂಡ್ ಮೂಲಕ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ” ಎಂದು ವಿವರಿಸಿದರು.

“ಸಂಜೆ ದೆಹಲಿಯಲ್ಲಿರುವ ಕರ್ನಾಟಕ ರಾಜ್ಯದ ಅಧಿಕಾರಿಗಳ ಜೊತೆ ಸಭೆ ಮಾಡಿ ರಾಜ್ಯದ ಹಿತಕ್ಕೆ ಅವರ ಸಲಹೆ ಮಾರ್ಗದರ್ಶನ ಪಡೆಯಲಾಗಿದೆ. ಬೇರೆ ರಾಜ್ಯಗಳು ಕೇಂದ್ರ ಸರ್ಕಾರ ಯೋಜನೆಗಳ ಪ್ರಯೋಜನವನ್ನು ಹೆಚ್ಚಾಗಿ ಪಡೆಯುತ್ತಿದ್ದು, ಯಾವ ಯೋಜನೆಗಳಿಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದು ಚರ್ಚೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿವೃತ್ತಿ ಹೊಂದಿರುವ ಅದಿಕಾರಿಗಳ ಸಭೆಯನ್ನು ಮಾಡಲಾಗುವುದು. ಅವರ ಅನುಭವ ಹಾಗೂ ಸೇವೆ ಬಳಸಿಕೊಳ್ಳುವುದು ನಮ್ಮ ಸರ್ಕಾರದ ಚಿಂತನೆ” ಎಂದು ಹೇಳಿದರು. ಇದನ್ನೂ ಓದಿ : ಕಮಿಶನ್‌ ವಸೂಲಿ ಮಾಡಲು ಟೆಂಡರ್‌ ನೀಡಿದ ಸರ್ಕಾರ, ಲೋಕಾಯುಕ್ತರಿಗೆ ದೂರು ಸಲ್ಲಿಸಿದ ಆರ್‌.ಅಶೋಕ್‌

ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಮತದಾರರಿಗೆ, ಅರ್ಹ ಫಲಾನುಭವಿಗಳಿಗೆ, ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಬಗ್ಗೆ ಕೇಳಿದಾಗ, “ಮೃತಪಟ್ಟಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಬೇರೆಯವರು ಹಣ ಪಡೆಯುತ್ತಿದ್ದಾರೆ. ಬೇರೆಯವರ ದೂರವಾಣಿ ಸಂಖ್ಯೆ ನೀಡಿದ್ದಾರೆ. ಹೀಗಾಗಿ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಯೋಜನೆ ಫಲಾನುಭವಿಗಳನ್ನು ಕಡಿತಗೊಳಿಸುವ ಯಾವ ಉದ್ದೇಶವೂ ಇಲ್ಲ. ಅರ್ಹರಿಗೆ ಯೋಜನೆ ತಲುಪಬೇಕು ಎಂಬುದು ನಮ್ಮ ಉದ್ದೇಶ” ಎಂದು ತಿಳಿಸಿದರು.

“ಕೆಲವರು ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಪಡೆಯುತ್ತಿದ್ದು, ಅಂಗಡಿಗೆ ಬಳಸುತ್ತಿದ್ದಾರೆ. ಒಬ್ಬರ ಹೆಸರಿನಲ್ಲಿ ಆರು ಮೀಟರ್ ಗಳಿವೆ. ವಾಸದ ಮನೆಗಳಿಗೆ ಈ ಯೋಜನೆ ಪಡೆದರೆ ಅಭ್ಯಂತರವಿಲ್ಲ. ಬಾಡಿಗೆ ಮನೆಯಲ್ಲಿ ಇರುವವರು ಒಂದು ಅಫಿಡವಿಟ್ ಸಲ್ಲಿಸಲಿ. ನಾವು ಈ ಯೋಜನೆ ಜಾರಿಗೆ ತಂದಿರುವುದು ಕರ್ನಾಟಕ ರಾಜ್ಯದ ಮತದಾರರಿಗೆ” ಎಂದು ಸ್ಪಷ್ಟಪಡಿಸಿದರು.

ಕಳೆದ ಬಾರಿ ನೀತಿ ಆಯೋಗದ ಸಭೆ ವಿವಾದಕ್ಕೆ ಕಾರಣವಾಗಿತ್ತು ಎಂದು ಕೇಳಿದಾಗ, “ನಾವು ಈ ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ. ನಾನು ನಾಳೆ ನಮ್ಮ ರಾಜ್ಯದ ಹಿತಾಸಕ್ತಿ ವಿಚಾರಗಳನ್ನು ಪ್ರಸ್ತಾಪ ಮಾಡುತ್ತೇನೆ. ಪ್ರಧಾನಮಂತ್ರಿಗಳು ನಾನು ಅಧಿಕಾರ ಸ್ವೀಕರಿಸಿದ ದಿನವೇ ನನಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ನಾವು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು. ಪ್ರಧಾನಮಂತ್ರಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ಪ್ರಧಾನಮಂತ್ರಿಗಳು ಸೇರಿದಂತೆ ಪ್ರಮುಖ ಕೇಂದ್ರ ಸಚಿವರುಗಳ ಭೇಟಿಗೆ ಸಮಯ ಕೇಳಿರುವೆ. ಪ್ರಧಾನಮಂತ್ರಿಗಳು ನಾಳೆ ಸಮಯ ನೀಡಿದ್ದಾರೆ. ಯಾರೆಲ್ಲಾ ಸಮಯ ನೀಡುತ್ತಾರೋ ಭೇಟಿ ಮಾಡುವೆ” ಎಂದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, “ಈಗ ಯಾವುದೇ ಚರ್ಚೆ ಇಲ್ಲ” ಎಂದರು. ಇದನ್ನೂ ಓದಿ : ಭಾರತೀಯ ಸಿಬ್ಬಂದಿ ಇದ್ದ, ಹಡಗಿನ ಮೇಲೆ ಅಮೆರಿಕ ದಾಳಿ; ಭಾರತ ತೀವ್ರ ಖಂಡನೆ..!

ಮಧ್ಯಪ್ರದೇಶದ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸುವಂತದ್ದು, ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭೆ ಚುನಾವಣೆ ನಾಮಪತ್ರ ತಿರಸ್ಕೃತ ಬಗ್ಗೆ ಕೇಳಿದಾಗ, “ಇದು ದೇಶಕ್ಕೆ ಆಘಾತಕಾರಿ ಸುದ್ದಿ. ನಾನು ಕೂಡ ಅನೇಕ ಚುನಾವಣೆಗಳನ್ನು ಎದುರಿಸಿದ್ದೇನೆ. ಚುನಾವಣಾಧಿಕಾರಿ ಅಥವಾ ರಿಟರ್ನಿಂಗ್ ಅಫಿಸರ್ ಗೆ ನಾಮಪತ್ರ ತಿರಸ್ಕೃತಗೊಳಿಸುವ ಅಧಿಕಾರವಿರುವುದಿಲ್ಲ. ಅಲ್ಲಿ ಏನಾದರೂ ಸಮಸ್ಯೆ ಇದ್ದರೆ ಚುನಾವಣೆ ಬಳಿಕ ನ್ಯಾಯಾಲಯದ ಮೊರೆ ಹೋಗಬಹುದಿತ್ತು. ನಮ್ಮಗೆ ಗೊತ್ತಿಲ್ಲದಂತೆ ನಮ್ಮ ಹೆಸರಿನಲ್ಲಿ ಬೇರೆಲ್ಲೋ ಎಫ್ಐಆರ್ ದಾಖಲಿಸಿದ್ದರೆ, ಅದು ನಮಗೆ ಹೇಗೆ ತಿಳಿಯುತ್ತದೆ..?

ಆಕೆ ನಮ್ಮ ಪಕ್ಷದ ನಾಯಕಿ. ನನ್ನ ನಾಮಪತ್ರ ಸಲ್ಲಿಕೆ ವೇಳೆ ಈ ರೀತಿ ಆದಾಗ ತಿದ್ದುಕೊಳ್ಳಲು ಅವಕಾಶ ನೀಡಿದ್ದರು. ಇದು ರಾಜಕೀಯ ಪಿತೂರಿಯಾಗಿದ್ದು, ನಮ್ಮಲ್ಲಿ ಹೆಚ್ಚು ಮತಗಳಿದ್ದರೂ ಬಿಜೆಪಿ ಚುನಾವಣೆಗೂ ಮುನ್ನವೇ ಎಲ್ಲಾ ಸೀಟು ಗೆಲ್ಲುತ್ತೇವೆ ಎಂದು ಹೇಳಲು ಹೇಗೆ ಸಾಧ್ಯ? ಮಧ್ಯಪ್ರದೇಶದಲ್ಲಿ ನಡೆದಿರುವು ಅನ್ಯಾಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸುವ ಪ್ರಕರಣ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Related posts

ಸಚಿವ ಸ್ಥಾನಕ್ಕಾಗಿ ದಿಲ್ಲಿಯಲ್ಲಿ ಕೋಲಾರ ಜಿಲ್ಲೆಯ ಶಾಸಕರಿಂದ ಲಾಬಿ

Kalpana Editor

ಸ್ನೇಹಿತರಿಗೆ ಪತ್ನಿಯನ್ನೇ ಮಾರಾಟ ಮಾಡಿದ ಪತಿ; 7 ಮಂದಿ ಬಂಧನ..!

Kalpana Editor

ನಟ ಅಜಿತ್ ತಾಯಿ ಮೋಹಿನಿ ಮಣಿ ನಿಧನ; ಅಂತಿಮ ದರ್ಶನಕ್ಕೆ ವ್ಯವಸ್ಥೆ..!

Kalpana Editor