ಮೈಸೂರು : ನಾನು ಮೈಸೂರಿನ ಅಳಿಯ, ರಾಜ್ಯದಲ್ಲಿ ಮತ್ತೊಮ್ಮೆ ಬಲಿಷ್ಠ ಸರ್ಕಾರ ರಚಿಸಲು ಜನರು ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮನವಿ ಮಾಡಿದರು. ಮೈಸೂರು ರೋಡ್ ಶೋ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ರಾಜ್ಯಕ್ಕೆ ಮತ್ತೊಮ್ಮೆ ಬಲಿಷ್ಠ ಸರ್ಕಾರಕ್ಕೆ ನೀವು ಅವಕಾಶ ಮಾಡಿಕೊಡಿ. ನಾನು ನಿಮ್ಮೂರಿನ ಅಳಿಯ. ನನಗೆ ಕನಕಪುರ ಬೇರೆ ಅಲ್ಲ, ಮೈಸೂರು ಬೇರೆ ಅಲ್ಲ. ನಾನು ಮುಖ್ಯಮಂತ್ರಿ ಆದರೂ ಮೈಸೂರು ಅಳಿಯನೇ ಎಂದು ಹೇಳಿದರು.
ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಪ್ರೀತಿ ಮತ್ತು ಅಭಿಮಾನದಿಂದ ಸ್ವಾಗತಿಸಿದ ಎಲ್ಲರಿಗೂ ಧನ್ಯವಾದ, ನಾನು ಮತ್ತು ಸಿದ್ದರಾಮಯ್ಯ ಇಡೀ ರಾಜ್ಯ ಪ್ರವಾಸ ಮಾಡಿ 136 ಸ್ಥಾನಗಳನ್ನು ಗೆದ್ದಿದ್ದೇವೆ. ಚುನಾವಣೆಗೂ ಮುನ್ನ ಚಾಮುಂಡೇಶ್ವರಿ ತಾಯಿಯ ಬಳಿ ದೊಡ್ಡ ಜವಾಬ್ದಾರಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಆ ಆಶೀರ್ವಾದದಿಂದಲೇ ಜನರು ಅವಕಾಶ ನೀಡಿದ್ದಾರೆ. ಬೆಲೆ ಏರಿಕೆಯಿಂದ ಜನರ ಆದಾಯ ಕುಸಿದಿದ್ದ ಸಂದರ್ಭದಲ್ಲಿ ನಾವು ನೀಡಿದ ಗ್ಯಾರಂಟಿ ಯೋಜನೆಗಳು ಇಂದು ದೇಶಕ್ಕೇ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಭೇಟಿ ಹಿನ್ನೆಲೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಭದ್ರತಾ ಕಾರಣಗಳಿಂದ ಸಭೆ ರದ್ದಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸುತ್ತೇವೆ ಎಂದು ತಿಳಿಸಿದರು. 2028ರಲ್ಲಿಯೂ ಇದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ಬರಗಾಲ ಇದ್ದರೂ ವರುಣನ ಕೃಪೆಯಿಂದ ಪರಿಸ್ಥಿತಿ ಸುಧಾರಿಸಿದೆ ಎಂದರು.
ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡುವ ವಿಚಾರದಲ್ಲಿ ಪ್ರತಿಪಕ್ಷದವರ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕೆಂದುಕೊಂಡಿದ್ದೆವು. ಆದರೆ, ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ನೀರು ಬಿಡುವ ಆತಂಕ ದೂರವಾಗಿದೆ. ಆ ತಾಯಿ ಚಾಮುಂಡಿ ದುರ್ಗಾದೇವಿಗೆ ನಮಸ್ಕಾರ ಎಂದು ಹೇಳಿದರು. ಈ ವೇಳೆ ಕಾರಂಜಿ ಕೆರೆ ವೃತ್ತದಿಂದ ಕುರುಬಾರಹಳ್ಳಿ ವೃತ್ತದವರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೆರವಣಿಗೆಯಲ್ಲಿ ಭಾಗಿಯಾದರು. ಇದನ್ನೂ ಓದಿ : ಕಾವೇರಿ ಆತಂಕ; ಕುಡಿಯುವ ನೀರಿನ ಬಳಕೆಗೆ ಹೊಸ ಮಾರ್ಗಸೂಚಿಗೆ ಜಲಮಂಡಳಿ ಸಿದ್ಧತೆ..!
