ಬೆಂಗಳೂರು : ತೀವ್ರ ಉಸಿರಾಟದ ಸಮಸ್ಯೆಯಿಂದ ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ದರ್ಶನಕ್ಕೆ ಗಣ್ಯರು ಹಾಗೂ ಸಿನಿ ತಾರೆಯರ ದಂಡು ಹರಿದುಬರುತ್ತಿದೆ. ನಗರದ ಕಾರ್ಮೆಲ್ ಶಾಲಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿರಿಯ ನಟ ದೊಡ್ಡಣ್ಣ, ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ್, ನಟಿ ಪೂಜಾ ಗಾಂಧಿ ಆಗಮಿಸಿ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದರು.
ನಟಿ ಪೂಜಾಗಾಂಧಿ ಮಾತನಾಡಿ, ಚನ್ನಮ್ಮ ಅವರ ನಿಧನದಿಂದ ಮನಸ್ಸಿಗೆ ತುಂಬಾ ನೋವಾಗ್ತಿದೆ. ದೇವೇಗೌಡರ ಮನೆಗೆ ಬಂದಾಗ ಪ್ರೀತಿಯಿಂದ ಮಾತಾಡಿಸ್ತಾ ಇದ್ದರು. ಊಟ ಮಾಡಲು ಹೇಳ್ತಿದ್ದರು. ಅವರಲ್ಲಿ ಮಾತೃಭಾವ ಇತ್ತು. ದೇವೇಗೌಡರ ಕುಟುಂಬಕ್ಕೆ ಅವರ ಅಗಲಿಕೆ ನೋವು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ದೈವಾಧೀನರಾಗಿದ್ದಾರೆ. ನಿಜವಾಗಿಯೂ ಇದು ಮುತ್ತೈದೆ ಸಾವು. ಎಲ್ಲರಿಗೂ ಸಿಗಲ್ಲ ಈ ಸಾವು. ದೇವೇಗೌಡರು ಹಾಗೂ ನಾನು ಒಂದೇ ಜಿಲ್ಲೆಯವರು. ಹೇಳಿಕೊಳ್ಳಲು ಹೆಮ್ಮೆ ಆಗುತ್ತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಿರಿಯ ನಟ ದೊಡ್ಡಣ್ಣ ಸಂತಾಪ ಸೂಚಿಸಿದರು.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಚನ್ನಮ್ಮ ದೊಡ್ಡ ಬೇರು. ಅವರನ್ನ ಕಳೆದುಕೊಂಡರೆ ಎಷ್ಟು ಕಷ್ಟ ಅಂತ ಗೊತ್ತಾಗುತ್ತದೆ. ಅವರ ಕುಟುಂಬಕ್ಕೆ ಅವರ ಅಗಲಿಕೆ ಶಕ್ತಿ ದೇವರು ಕೊಡಲಿ ಎಂದು ಸಂತಾಪ ವ್ಯಕ್ತಪಡಿಸಿದರು. ಇದನ್ನೂ ಓದಿ : ಬೆಂಗಳೂರಿಂದ ಹೊಳೆನರಸೀಪುರಕ್ಕೆ ಚೆನ್ನಮ್ಮ ಪಾರ್ಥಿವ ಶರೀರ ಅಂತಿಮ ಯಾತ್ರೆ..!
