ಅಗರ್ತಲಾ : ತ್ರಿಪುರ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಅನುರಾಗ್ ಧನಕರ್ ಅವರು ಅಗರ್ತಲಾದಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ತಮ್ಮ ಚೇಂಬರ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಂದು (ಸೋಮವಾರ, ಜುಲೈ 20) ಬೆಳಿಗ್ಗೆ ಡಿಜಿಪಿ ಅನುರಾಗ್ ಧನಕರ್ ಅವರು ತಮ್ಮ ಕಚೇರಿಗೆ ಆಗಮಿಸಿದ್ದರು. ಕೆಲ ಸಮಯದ ನಂತರ ಅವರ ಚೇಂಬರ್ನಿಂದ ಗುಂಡಿನ ಸದ್ದು ಕೇಳಿಬಂದಿದೆ.
ಸಿಬ್ಬಂದಿ ಒಳಗೆ ಹೋಗಿ ನೋಡಿದಾಗ ಧನಕರ್ ಅವರು ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದರು. ಧನಕರ್ ಅವರು ತಮ್ಮ ಸೇವಾ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.
ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರ ತಂಡ ಪ್ರಧಾನ ಕಚೇರಿಗೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಈ ದಿಢೀರ್ ಸಾವು ಇಡೀ ರಾಜ್ಯ ಪೊಲೀಸ್ ಇಲಾಖೆಯಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.
ಸಾವಿಗೆ ನಿಖರ ಕಾರಣವೇನು ಹಾಗೂ ಅವರು ಈ ನಿರ್ಧಾರ ಕೈಗೊಳ್ಳಲು ವೈಯಕ್ತಿಕ ಅಥವಾ ವೃತ್ತಿಪರ ಒತ್ತಡಗಳಿದ್ದವೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. 1984 ರಲ್ಲಿ ಸಿಖ್ ಸಮುದಾಯದ ಹತ್ಯಾಕಾಂಡದ ಬಗ್ಗೆ ಎಸ್ಐಟಿಯನ್ನು ಮುನ್ನಡೆಸಿದ್ದ ಇವರು ಸಿಬಿಐನಲ್ಲಿ ನೀರವ್ ಮೋದಿ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ : ಹೊಳೆನರಸೀಪುರದ ಪ್ರಮುಖ ಗ್ರಾಮಗಳಲ್ಲಿ ಮೆರವಣಿಗೆ; ಚೆನ್ನಮ್ಮ ಅಂತಿಮ ಯಾತ್ರೆ ಆರಂಭ..!
