22.2 C
ಬೆಂಗಳೂರು
August 7, 2026
kranthikidi.com
ತಾಜಾಸುದ್ದಿರಾಜ್ಯ

ಡಮ್ಮಿ ಸಿಎಂ; ವಿಜಯ್, ಟಿವಿಕೆ ವಿರುದ್ಧ ನಟ ಉದಯನಿಧಿ ಸ್ಟಾಲಿನ್ ವಾಗ್ದಾಳಿ..!

ಚೆನ್ನೈ : ನಟಿ ತ್ರಿಷಾ ಕೃಷ್ಣನ್ ಕುರಿತು ನೀಡಿದ ಹೇಳಿಕೆ ಸಂಬಂಧ ತಂಜಾವೂರಿನಲ್ಲಿ ಪೊಲೀಸರ ವಿಚಾರಣೆಯನ್ನು ಎದುರಿಸಿದ ಬಳಿಕ ಮಂಗಳವಾರ ತಡರಾತ್ರಿ ಬಿಡುಗಡೆಗೊಂಡ ಡಿಎಂಕೆ ಹಿರಿಯ ನಾಯಕ ಹಾಗೂ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಬಿಡುಗಡೆಯಾದ ತಕ್ಷಣವೇ ಟಿವಿಕೆ ಸರ್ಕಾರ ಮತ್ತು ಸಿಎಂ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸ್ ಠಾಣೆಯಿಂದ ಹೊರಬಂದ ಉದಯನಿಧಿ ಸ್ಟಾಲಿನ್ ಅವರಿಗೆ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಮಾತನಾಡಿದ ಅವರು, ತಮ್ಮ ಬಂಧನವನ್ನು ಸರ್ಕಸ್ ಕ್ಯಾಂಪ್’ ಎಂದು ವ್ಯಂಗ್ಯವಾಡಿ, ಮುಖ್ಯಮಂತ್ರಿ ವಿಜಯ್ ಅವರನ್ನುಡಮ್ಮಿ ಮುಖ್ಯಮಂತ್ರಿ’ ಎಂದು ಟೀಕಿಸಿದರು. ರಾಜ್ಯದ ರೈತರ ನೈಜ ಸಮಸ್ಯೆಗಳನ್ನು ಈಡೇರಿಸಲು ಸಾಧ್ಯವಾಗದ ಸರ್ಕಾರ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಈ ಬಂಧನದ ನಾಟಕವಾಡಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ತರಲು ವಿಫಲವಾಗಿರುವ ಟಿವಿಕೆ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಈ ಕ್ರಮ ಕೈಗೊಂಡಿದೆ ಎಂದು ಕಿಡಿಕಾರಿದರು.

ನನ್ನನ್ನು ಭಯೋತ್ಪಾದಕನಂತೆ ಕರೆದುಕೊಂಡು ಹೋದರು. ನಾನು ರೈತರ ಸಮಸ್ಯೆಗಳು, ಮೇಕೆದಾಟು ಅಣೆಕಟ್ಟು ಯೋಜನೆ ಮತ್ತು ಕಾವೇರಿ ನೀರಿನ ವಿವಾದದಲ್ಲಿ ಟಿವಿಕೆ ಸರ್ಕಾರದ ವೈಫಲ್ಯಗಳನ್ನು ಮಾತ್ರ ಪ್ರಸ್ತಾಪಿಸಿದ್ದೆ. ನಮ್ಮ ನಾಯಕ ಮುಖ್ಯಮಂತ್ರಿ ಆಗಿದ್ದಾಗ ಪ್ರತಿವರ್ಷ ಜೂನ್ 12ರಂದು ಮೆಟ್ಟೂರು ಅಣೆಕಟ್ಟಿನಿಂದ ರೈತರಿಗೆ ನಿರಂತರವಾಗಿ ನೀರು ಬಿಡಲಾಗುತ್ತಿತ್ತು. ಆದರೆ ಈಗ ಐದು ತಿಂಗಳು ಕಳೆದರೂ ರೈತರಿಗೆ ನೀರು ಒದಗಿಸಲು ಟಿವಿಕೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕರ್ನಾಟಕ ಕಾಂಗ್ರೆಸ್ ವಿರುದ್ಧ ಮಾತನಾಡುವ ಅರ್ಹತೆ ಟಿವಿಕೆಗೆ ಇಲ್ಲ ಎಂದು ಹರಿಹಾಯ್ದರು.

ತಮ್ಮ ಭಾಷಣವನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಉದಯನಿಧಿ ಸ್ಟಾಲಿನ್ ಆರೋಪಿಸಿದ್ದಾರೆ. ನನ್ನ ಭಾಷಣವನ್ನು ಕಟ್, ಕಾಪಿ, ಪೇಸ್ಟ್ ಮಾಡಿ ನಾನು ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದೇನೆ ಎಂದು ಬಿಂಬಿಸಲಾಗಿದೆ. ಕೆಲವರು ನಾನು ದ್ವಂದ್ವಾರ್ಥದಲ್ಲಿ ಮಾತನಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ ನಾನು ಒಂದೇ ಅರ್ಥದಲ್ಲಿ ಮಾತನಾಡಿದ್ದೆ. ರೈತರಿಗೆ ನೀರು ಬೇಕು ಎಂಬುದೇ ನನ್ನ ಉದ್ದೇಶವಾಗಿತ್ತು. ಮಹಿಳೆಯರನ್ನು ಅವಮಾನಿಸುವ ಯಾವುದೇ ಉದ್ದೇಶ ನನಗಿರಲಿಲ್ಲ. ತಮಿಳುನಾಡಿನ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯನ್ನು ನನ್ನ ಕುಟುಂಬದ ಸದಸ್ಯರಂತೆ ಗೌರವಿಸುತ್ತೇನೆ. ಪೂರ್ಣ ಭಾಷಣವನ್ನು ಪರಿಶೀಲಿಸದೆ ತಮ್ಮ ಮೈತ್ರಿ ಪಕ್ಷಗಳ ಕೆಲವು ನಾಯಕರು ಕೂಡ ಟೀಕಿಸಿರುವುದು ಬೇಸರ ತಂದಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಉದಯನಿಧಿ ಸ್ಟಾಲಿನ್, ಸುಳ್ಳು ಪ್ರಕರಣಗಳು ಅಥವಾ ಬೆದರಿಕೆಗಳಿಗೆ ತಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ. ನಾನು ಕಲೈನಾರ್ ಅವರ ಮೊಮ್ಮಗ, ಎಂ.ಕೆ. ಸ್ಟಾಲಿನ್ ಅವರ ಪುತ್ರ. ನಾನು ಡಿಎಂಕೆಯ ಕಾರ್ಯಕರ್ತ. ಇಂತಹ ತಂತ್ರಗಳಿಗೆ ನಾವು ಹೆದರುವುದಿಲ್ಲ. ಕಾನೂನು ಹೋರಾಟಕ್ಕೆ ನಾನು ಸಿದ್ಧನಿದ್ದೇನೆ. ರೈತರ ಪರವಾಗಿ ನೂರು ಬಾರಿ ಬೇಕಾದರೂ ಮಾತನಾಡುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ತಮ್ಮ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಡಿಎಂಕೆ ಕಾರ್ಯಕರ್ತರು ಹಾಗೂ ಮೈತ್ರಿ ಪಕ್ಷಗಳ ನಾಯಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಪ್ರತಿಭಟನೆ ವೇಳೆ ಬಂಧಿತರಾದವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಉದಯನಿಧಿ ಸ್ಟಾಲಿನ್ ಅವರ ಆರೋಪಗಳಿಗೆ ಟಿವಿಕೆ ನಾಯಕ ಅಧವ ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ರಾಜಕೀಯ ದ್ವೇಷದಿಂದ ಕೆಲಸ ಮಾಡುವುದಿಲ್ಲ. ನಮ್ಮ ನಾಯಕ 60 ವರ್ಷಗಳ ರಾಜಕೀಯ ಇತಿಹಾಸವನ್ನು ಮುರಿದು ಏಕಾಂಗಿಯಾಗಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ನಿಮ್ಮನ್ನು ನಾವು ನಮ್ಮ ರಾಜಕೀಯ ಎದುರಾಳಿಯೆಂದು ಕೂಡ ಪರಿಗಣಿಸುತ್ತಿಲ್ಲ ಎಂದು ತಿರುಗೇಟು ನೀಡಿದರು.

ನಮ್ಮ ನಾಯಕನನ್ನು ಎದುರಿಸಲು ಅರ್ಹತೆ ಬೇಕು. ಉದಯನಿಧಿ ಸ್ಟಾಲಿನ್ ಅವರು ತಮ್ಮ ತಾತನ ಹೆಸರಿನ ಪ್ರಭಾವ ಮತ್ತು ಡಿಎಂಕೆ ಗುರುತನ್ನು ಬದಿಗಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಮ್ಮ ನಾಯಕ ಒಬ್ಬ ಸಾಮಾನ್ಯ ಮಹಿಳೆಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಾರೆ. ಚುನಾವಣಾ ಪ್ರಚಾರಕ್ಕೆ ನಮ್ಮ ನಾಯಕ ಕೇವಲ ಒಮ್ಮೆ ಬಂದರೂ ಸಾಕು. ಇಂದು ಚುನಾವಣೆ ನಡೆದರೆ ಉದಯನಿಧಿ ಸ್ಟಾಲಿನ್ ಅವರಿಗೆ ಠೇವಣಿಯೂ ಉಳಿಯುವುದಿಲ್ಲ ಎಂದು ಸವಾಲು ಹಾಕಿದರು. ಇದನ್ನೂ ಓದಿ : ಕಾವೇರಿ/ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ; 105 ಅಡಿಗೆ ತಲುಪಿದ ನೀರಿನ ಮಟ್ಟ

Related posts

ವಿಚ್ಛೇದನ ಅರ್ಜಿ ವಿಚಾರಣೆ ಹಂತದಲ್ಲೇ ‘ಶುಭ’ ಸುದ್ದಿ ಕೇಳಿಬಂತು..!

Kalpana Editor

ಇಂದು ಡಿಕೆ ಶಿವಕುಮಾರ್‌ಗೆ ಪಟ್ಟಾಭಿಷೇಕ – ಶಕ್ತಿಶಾಲಿ ಮಾಲವ್ಯ ಯೋಗದ ಮುಹೂರ್ತ..!

Kalpana Editor

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ- ಸಿಎಂ ಸಿದ್ದರಾಮಯ್ಯ

Kalpana Editor