ಚೆನ್ನೈ : ತಮಿಳುನಾಡು ಸಿಎಂ ಹಾಗೂ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ವಿರುದ್ಧ ದಾಖಲಿಸಿದ್ದ ವಿಚ್ಛೇದನ ಪ್ರಕರಣ ಅರ್ಜಿಯನ್ನು ಪತ್ನಿ ಸಂಗೀತ ಅವರು ಹಿಂದಕ್ಕೆ ಪಡೆದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಪತ್ನಿ ಸಂಗೀತ ಅವರು ತಮಿಳುನಾಡಿನ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಲು ಕೋರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ತಮ್ಮ ಅರ್ಜಿಯಲ್ಲಿ ಪರಸ್ಪರ ಹೊಂದಾಣಿಕೆಯಾಗದ ಭಿನ್ನಾಭಿಪ್ರಾಯಗಳನ್ನು ಕಾರಣವಾಗಿ ನೀಡಿದ್ದ ಅವರು, ಜೀವನಾಂಶ ಹಾಗೂ ಚೆನ್ನೈನ ನೀಲಂಕರೈನಲ್ಲಿರುವ ದಂಪತಿಯ ಜಂಟಿ ನಿವಾಸದಲ್ಲಿ ಮುಂದುವರಿಯಲು ಅನುಮತಿ ಕೋರಿದ್ದರು. ಈ ವರ್ಷ ವಿಜಯ್ ಹಾಗೂ ಸಂಗೀತ ನಡುವಿನ ದಾಂಪತ್ಯ ವಿವಾದದ ವಿಚಾರಣೆ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಕಳೆದ ತಿಂಗಳು ನಡೆದ ವಿಚಾರಣೆ ವೇಳೆ ಇಬ್ಬರೂ ಪತಿಯು ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆ ಕಲಾಪವನ್ನು ಆಗಸ್ಟ್ 7 ಕ್ಕೆ ಮುಂದೂಡಿದ್ದರು.
ಹಿಂದಿನ ವಿಚಾರಣೆಗಳಲ್ಲೂ ವಿಜಯ್ ಅಥವಾ ಸಂಗೀತ ನೇರವಾಗಿ ಕೋರ್ಟ್ಗೆ ಹಾಜರಾಗಿರಲಿಲ್ಲ. ಪ್ರತಿ ಬಾರಿಯೂ ಅವರ ಪರ ವಕೀಲರೇ ಹಾಜರಾಗಿ, ಕಲಾಪಕ್ಕೆ ವೈಯಕ್ತಿಕವಾಗಿ ಹಾಜರಾಗಲು ಇರುವ ಅಡಚಣೆಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಿದ್ದರು. ಇದೀಗ ಪತ್ನಿ ಸಂಗೀತ ಅವರೇ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದುಕೊಂಡಿರುವುದರಿಂದ ಈ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ. ಇದನ್ನೂ ಓದಿ : ನೇಕಾರರಿಗೆ ಆರ್ಥಿಕ ಶಕ್ತಿ ತುಂಬಿದ ಮೋದಿ ಜೀ ಸರ್ಕಾರ – ಬಿ.ವೈ.ವಿಜಯೇಂದ್ರ
