ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಮುಪ್ಪಾನೆ ಮತ್ತು ಹಲ್ಕೆ ನಡುವಿನ ಲಾಂಚ್ (ಜಲಸಾರಿಗೆ ಬೋಟ್) ಸೇವೆ ಪುನಾರಂಭಗೊಂಡಿದೆ.
ಮಳೆ ಕೊರತೆಯಿಂದ ಲಿಂಗನಮಕ್ಕಿ ಡ್ಯಾಂ ಹಿನ್ನೀರು ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಇದರಿಂದ ನೀರಿನ ಆಳದಲ್ಲಿನ ಮರದ ಕಾಂಡಗಳು ಲಾಂಚ್ ತಳಭಾಗಕ್ಕೆ ತಗಲುವ ಸಾಧ್ಯತೆ ಇತ್ತು. ವಾಹನ ಇಳಿಸುವ ಪ್ಲಾಟ್ಫಾರ್ಮ್ ಜಾಗದಲ್ಲೂ ಲಾಂಚ್ ಕೆಳಭಾಗ ನೆಲಕ್ಕೆ ತಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯ ದೃಷ್ಟಿಯಿಂದ ಜೂನ್ 2 ರಂದು ತಾತ್ಕಾಲಿಕವಾಗಿ ಮುಪ್ಪಾನೆ – ಹಲ್ಕೆ ನಡುವಿನ ಲಾಂಚ್ ಸೇವೆ ಸ್ಥಗಿತಗೊಳಿಸಲಾಗಿತ್ತು.
ಈಗ ಹಿನ್ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ಇಂದಿನಿಂದ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಲಾಂಚ್ ಸೇವೆಯನ್ನ ಪುನಾರಂಭ ಮಾಡಿದೆ. ಕರೂರು ಮತ್ತು ಭಾರಂಗಿ ಹೋಬಳಿಯ ಸಂಪರ್ಕದ ಅತಿ ಮುಖ್ಯ ಮಾರ್ಗವಾದ ಮುಪ್ಪಾನೆ ಲಾಂಚ್ ತುಮರಿ, ಸಿಗಂದೂರು ಮತ್ತು ಭಾರಂಗಿ ಹೋಬಳಿ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತದೆ. ಇದನ್ನೂ ಓದಿ : ಬದರಿನಾಥ್ ದೇಣಿಗೆ ಕಳವು – ಪ್ರಮುಖ ಆರೋಪಿ ಡೆಹ್ರಾಡೂನ್ನಲ್ಲಿ ಬಂಧನ..!
