ಬೆಂಗಳೂರು : ಭಗವಂತನ ದಯೆಯಿಂದ ಒಳ್ಳೆ ಕಾಲ ಕೂಡಿ ಬಂದಿದ್ದು, ನಮ್ಮ ನಾಯಕರಿಗೆ ಇಡೀ ರಾಜ್ಯದ ಜನರು ಬಯಸಿದ್ದನ್ನು ನೆರವೇರಿಸಿದ್ದಾನೆ. ಭಗವಂತನಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಪಟ್ಟದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲದಕ್ಕೂ ಇತಿಮಿತಿ ಇದ್ದೇ ಇರುತ್ತದೆ. ಪಕ್ಷದ ವರಿಷ್ಠರು ಶಿಸ್ತಿನಿಂದ ಇರಿ ಎಂದಿದ್ದರು. ಕಾಲ ಬಂದಾಗ ಮಾತನಾಡಿ ಅಂದಿದ್ದರು. ಈಗ ಆ ಕಾಲ ಬಂದಿದೆ. ಹೈಕಮಾಂಡ್ ಅವಕಾಶ ಕೊಟ್ಟಿದ್ದಾರೆ. ನಾಯಕರು ಬೆಂಗಳೂರಿಗೆ ಬರಲಿ, ಅವರ ಜೊತೆ ಮಾತನಾಡುತ್ತೇನೆ. ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆ ಎಂದರು.
ನಾವೆಲ್ಲಾ ಪಕ್ಷದ ಶಿಸ್ತನ್ನ ಕಾಪಾಡಿಕೊಳ್ಳಬೇಕು. ರಾತ್ರಿ ಎಲ್ಲ ನನಗೆ ನಿದ್ದೆ ಬರಲಿಲ್ಲ. ದೆಹಲಿಯಲ್ಲಿ ಯಾರ ಜೊತೆ ಮಾತನಾಡಬೇಕೋ ಅವರ ಜೊತೆ ಮಾತನಾಡುತ್ತಿದ್ದೆ. ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದೆ. ಭಗವಂತ ನನ್ನ ಆಸೆ ಈಡೇರಿಸುವ ಕೆಲಸ ಮಾಡಿದ್ದಾನೆ. ಅವನಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಭಗವಂತನಿಗೆ ಧನ್ಯವಾದ ತಿಳಿಸಿದ್ದಾರೆ.
