June 13, 2026
kranthikidi.com
ತಾಜಾಸುದ್ದಿದೇಶ

ಆನ್-ಸ್ಕ್ರೀನ್ ಮಾರ್ಕಿಂಗ್ ವಿವಾದ; ಹೊಣೆ ಹೊತ್ತ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ನವದೆಹಲಿ : ಸಿಬಿಎಸ್‌ಇಯ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯಲ್ಲಿ ಉಂಟಾಗಿರುವ ಲೋಪದ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಯಾರನ್ನೂ ಬಿಡುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಚ್ಚರಿಕೆ ಕೊಟ್ಟಿದ್ದಾರೆ.

ಸಿಬಿಎಸ್‌ಇಯ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಸುಕಾದ ಸ್ಕ್ಯಾನ್ ಮಾಡಿದ ಪ್ರತಿಗಳು, ಪರಿಶೀಲಿಸದ ಉತ್ತರಗಳು, ಪೋರ್ಟಲ್ ಕ್ರ‍್ಯಾಶ್‌ಗಳು, ಪಾವತಿ ಸಮಸ್ಯೆಗಳು ಮತ್ತು ಗೊಂದಲಗಳ ಕುರಿತು ವಿದ್ಯಾರ್ಥಿಗಳಿಂದ ಸಾಲು ಸಾಲು ದೂರುಗಳು ಬಂದಿದ್ದವು. ಈ ನಡುವೆ ಕೇಂದ್ರ ಶಿಕ್ಷಣ ಸಚಿವ ಮಂಡಳಿಯ ಹೊಸ ಡಿಜಿಟಲ್ ಮೌಲ್ಯಮಾಪನ ಮಾದರಿಯನ್ನು ಸಮರ್ಥಿಸಿಕೊಂಡಿದ್ದು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಒಪ್ಪಿಕೊಂಡಿದ್ದಾರೆ.

ದೆಹಲಿಯ ಸಿಬಿಎಸ್‌ಇ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಾನು ಈ ಜವಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಅದನ್ನು ಸರಿಪಡಿಸಿ ಪರಿಹಾರ ಕಂಡುಕೊಳ್ಳಲಾಗುವುದು. ನಾವೆಲ್ಲರೂ ಆ ಕೆಲಸ ಮಾಡುತ್ತೇವೆ. ಪರೀಕ್ಷೆ ಬರೆದ 17 ಲಕ್ಷ ವಿದ್ಯಾರ್ಥಿಗಳಲ್ಲಿ, ನಾವು 98 ಲಕ್ಷ ಪ್ರತಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆದಿದೆ. ಪ್ರತಿ ಉತ್ತರ ಪತ್ರಿಕೆ ಸುಮಾರು 40 ಪುಟಗಳನ್ನು ಹೊಂದಿದ್ದು, ಒಟ್ಟು ಸ್ಕ್ಯಾನ್ ಮಾಡಿದ ಪುಟಗಳ ಸಂಖ್ಯೆಯನ್ನು ಸುಮಾರು 40 ಕೋಟಿ ಎಂದು ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಆನ್-ಸ್ಕ್ರೀನ್ ಮಾರ್ಕಿಂಗ್ ಸಿಸ್ಟಮ್ ಒಂದು ಪ್ರಗತಿಪರ ಸಾಧನ, ಇದನ್ನು ಈಗಾಗಲೇ ಜಾಗತಿಕವಾಗಿ ಪ್ರಮುಖ ಸಂಸ್ಥೆಗಳು ಅಳವಡಿಸಿಕೊಂಡಿವೆ. ಇದು ವಿದ್ಯಾರ್ಥಿ ಕೇಂದ್ರಿತವಾಗಿದ್ದು, ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಅವರು ತಮ್ಮ ಅಂಕಗಳ ಬಗ್ಗೆ ಪಾರದರ್ಶಕ ಮಾಹಿತಿಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ವ್ಯವಸ್ಥೆಯ ಲೋಪದ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿ, ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಇದರ ಸಂಪೂರ್ಣ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿಯವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಧರ್ಮೇಂದ್ರ ಪ್ರಧಾನ್, ಸಿಬಿಎಸ್‌ಇ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸರ್ಕಾರಿ ನಿಯಮಗಳನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ. ಯಾವುದೇ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ಕಂಡಬಂದಲ್ಲಿ ಯಾರೇ ಆಗಿರಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆದ ನಂತರ ಮೌಲ್ಯಮಾಪನದಲ್ಲಿ ಸಮಸ್ಯೆಗಳು ಕಂಡು ಬಂದಿದ್ದವು. ಇದಾದ ಬಳಿಕ ವಿವಾದ ಭುಗಿಲೆದ್ದಿತು. ಹಲವು ಉತ್ತರ ಪತ್ರಿಕೆಗಳು ಮಸುಕಾಗಿ ಕಂಡು ಬಂದ ಕಾರಣ ಮೌಲ್ಯಮಾಪನದಲ್ಲಿ ಸಮಸ್ಯೆ ಉಂಟಾಗಿದ್ದವು. ಇದಕ್ಕೆ ಹಲವು ವಿದ್ಯಾರ್ಥಿಗಳು ಮತ್ತು ಪೋಷಕರು ಪೋರ್ಟಲ್ ವೈಫೈಲ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಸಿಬಿಎಸ್‌ಇ ಈ ಬಗ್ಗೆ ಪ್ರತಿಕ್ರಿಯಿಸಿ ಸ್ಕ್ಯಾನ್ ಮಾಡಿದ ಪ್ರಶ್ನೆ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಗಡುವು ನೀಡಿತ್ತು. ವಿದ್ಯಾರ್ಥಿಗಳು ಆತಂಕ ಪಡಬೇಡಿ. ಈ ಬಗ್ಗೆ ತಜ್ಞರು ಪರಿಶೀಲಿಸುತ್ತಾರೆ ಎಂದು ಸಿಬಿಎಸ್‌ಸಿ ಸಂಸ್ಥೆ ಭರವಸೆ ನೀಡಿತ್ತು.

Related posts

ದೇವೇಗೌಡ, ಹೆಚ್​​ಡಿಕೆ ಬಗ್ಗೆ ನಾಲಿಗೆ ಹರಿಬಿಟ್ರೆ ಕತ್ತರಿಸುತ್ತೇವೆ – ಸುರೇಶ್ ಗೌಡ

Kalpana Editor

ಭಗವಂತನ ದಯೆಯಿಂದ ಒಳ್ಳೆ ಕಾಲ; ಕೋಟಿ ಕೋಟಿ ನಮಸ್ಕಾರಗಳು – ಇಕ್ಬಾಲ್ ಹುಸೇನ್

Kalpana Editor

ಭಾರತೀಯ ಸಿಬ್ಬಂದಿ ಇದ್ದ, ಹಡಗಿನ ಮೇಲೆ ಅಮೆರಿಕ ದಾಳಿ; ಭಾರತ ತೀವ್ರ ಖಂಡನೆ..!

Kalpana Editor