ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಯಾಣ ಪ್ರವಾಸಿ ತಾಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾರವಾರದಲ್ಲಿ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಕರಾವಳಿಯ ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲೂ ಮಳೆ ಸುರಿದಿದೆ. ಈ ಹಿನ್ನೆಲೆ ಕುಮಟಾ ತಾಲೂಕಿನ ಪ್ರಸಿದ್ಧ ಯಾಣ ಪ್ರವಾಸಿ ಸ್ಥಳಕ್ಕೆ ಭೂಕುಸಿತ ಆತಂಕ ಹಾಗೂ ಚಂಡಿಕಾ ನದಿಯ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಪ್ರವಾಸಿಗರಿಗೆ ಯಾಣಕ್ಕೆ ತೆರಳದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ಕಳೆದ ಎರಡು ವರ್ಷದ ಹಿಂದೆ ಯಾಣದ ಬಳಿ ಭೂ ಕುಸಿತವಾಗಿತ್ತು. ಇದಲ್ಲದೇ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಸಹ ಮತ್ತೆ ಈ ಭಾಗದಲ್ಲಿ ಹೆಚ್ಚಿನ ಮಳೆಯಾದರೆ ಭೂಕುಸಿತವಾಗುವ ಎಚ್ಚರಿಕೆ ಸಹ ನೀಡಿತ್ತು. ನಿರಂತರ ಮಳೆ ಹಾಗೂ ಪ್ರಾಕೃತಿಕ ವಿಕೋಪದ ಹಿನ್ನೆಲೆ ಚಂಡಿಕಾ ನದಿ ತುಂಬಿ ಹರಿಯುತ್ತಿರುವ ಕಾರಣ, ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸಿದ್ಧ ಯಾಣ ಪ್ರವಾಸಿ ತಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ಹೊನ್ನಾವರ ಅರಣ್ಯ ವಿಭಾಗದ ಕುಮಟಾ ಉಪ ವಿಭಾಗದ ಕತಗಾಲ ವಲಯ ವ್ಯಾಪ್ತಿಯ ಯಾಣ ಪ್ರದೇಶದಲ್ಲಿ ಸುರಕ್ಷತಾ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಈ ಪರಿಸ್ಥಿತಿ ಸುಧಾರಿಸುವವರೆಗೆ ಸಾರ್ವಜನಿಕರು ಯಾಣಕ್ಕೆ ಭೇಟಿ ನೀಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ : ಕಾವೇರಿ ಒಡಲು ಖಾಲಿ, ಕೃಷ್ಣಾ ಕೊಳ್ಳದಲ್ಲೂ ಆತಂಕ, ಬರಿದಾಗುತ್ತಿವೆ ಡ್ಯಾಂಗಳು
ಅರಣ್ಯ ಇಲಾಖೆ ಹಾಗೂ ಶ್ರೀ ಮಹಾಗಣಪತಿ ಗ್ರಾಮ ಅರಣ್ಯ ಸಮಿತಿ ಯಾಣದ ವತಿಯಿಂದ ಹೊರಡಿಸಿರುವ ಸೂಚನೆಯಲ್ಲಿ, ನಿಷೇಧದ ಅವಧಿಯಲ್ಲಿ ಅಕ್ರಮವಾಗಿ ಪ್ರವೇಶಿಸುವವರ ವಿರುದ್ಧ ಅರಣ್ಯ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
