ಕಲಬುರಗಿ : ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸಂಭ್ರಮ ಮನೆಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಗೆ ಈ ಬಾರಿ ಸಚಿವ ಸಂಪುಟದಲ್ಲಿ ದೊಡ್ಡ ಪ್ರತಿನಿಧಿತ್ವ ಸಿಕ್ಕಿದೆ.
ಈಗಾಗಲೇ ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿದ್ದು, ಡಾ. ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಡಾ. ಅಜಯ್ ಸಿಂಗ್ ಕೂಡ ಸಚಿವರಾಗಿರುವುದರಿಂದ ಸುಮಾರು ಎರಡು ದಶಕಗಳ ಬಳಿಕ ಕಲಬುರಗಿ ಜಿಲ್ಲೆಗೆ ಮೂರು ಸಚಿವ ಸ್ಥಾನಗಳು ಸಿಕ್ಕಂತಾಗಿದೆ.
ಡಾ. ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಖಚಿತವಾದ ಸುದ್ದಿ ಹೊರಬಿದ್ದ ತಕ್ಷಣವೇ ಬೆಂಗಳೂರಿನ ಅವರ ನಿವಾಸದಲ್ಲಿ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ, ಅವರನ್ನು ಹೆಗಲ ಮೇಲೆ ಹೊತ್ತು ಕುಣಿದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಪುತ್ರ ಸಚಿವರಾಗುತ್ತಿರುವ ಕ್ಷಣವನ್ನು ಕಂಡ ತಾಯಿ ಪ್ರಭಾವತಿ ಧರ್ಮಸಿಂಗ್ ಭಾವುಕರಾದರು. ಮಗನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ ದೃಶ್ಯ ಅಲ್ಲಿದ್ದವರ ಮನ ಮುಟ್ಟಿತು. ಹಲವು ವರ್ಷಗಳ ರಾಜಕೀಯ ಪಯಣದ ಬಳಿಕ ಪುತ್ರನಿಗೆ ಸಚಿವ ಸ್ಥಾನ ಸಿಕ್ಕ ಸಂತೋಷದಲ್ಲಿ ಅವರು ಭಾವುಕರಾಗಿದ್ದರು. ಬೆಂಬಲಿಗರು ಕೂಡ ಅಜಯ್ ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿರು. ಇದನ್ನೂ ಓದಿ : ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ತಾಳ್ಮೆಯಿಂದ ಇರಿ: ಸಿಎಂ ಡಿ ಕೆ ಶಿವಕುಮಾರ್
