ನೀಟ್-ಯುಜಿ ಪರೀಕ್ಷೆಯ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬಳಕೆಯಾದ ನಿಂದನೀಯ ಭಾಷೆಯನ್ನು ಖಂಡಿಸಿದ ನಟಿ ಭೂಮಿ ಪೆಡ್ನೇಕರ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ಎದುರಾಗಿದೆ. ಪ್ರತಿಭಟನಾಕಾರರ ಭಾಷೆಯನ್ನು ಪ್ರಶ್ನಿಸಿದ ನಟಿ, ವಿದ್ಯಾರ್ಥಿಗಳ ಮೇಲಾದ ಪೊಲೀಸ್ ಲಾಠಿಚಾರ್ಜ್ ಹಾಗೂ ಹಿಂಸಾಚಾರದ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದ ಭೂಮಿ ಪೆಡ್ನೇಕರ್, ‘ಪ್ರತಿಭಟನಾ ನಿರತ ಯುವಕರು ಬಳಸಿರುವ ಕೆಟ್ಟ ಪದಗಳು ಭಾರತೀಯ ಸಂಸ್ಕೃತಿಗೆ ತಕ್ಕುದಾದ್ದಲ್ಲ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿಯವರ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯ ಇರಬೇಕು. ನಮ್ಮ ಮನೆಗಳ ಹಿರಿಯರ ಜೊತೆ ನಾವು ಹೀಗೆ ಮಾತನಾಡುತ್ತೇವೆಯೇ?’ ಎಂದು ಪ್ರಶ್ನಿಸಿದ್ದರು. ಅಲ್ಲದೆ ಯುವಜನತೆ ತಮ್ಮ ಆಕ್ರೋಶವನ್ನು ಸಭ್ಯ ರೀತಿಯಲ್ಲಿ ವ್ಯಕ್ತಪಡಿಸಬೇಕೆಂದು ಮನವಿ ಮಾಡಿದ್ದರು.
ಆದರೆ, ಭೂಮಿ ಪೆಡ್ನೇಕರ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಟಿಯ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. ಜುಲೈ 20ರಂದು ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ, ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗದ ಕುರಿತು ಭೂಮಿ ಪೆಡ್ನೇಕರ್ ಮೌನ ವಹಿಸಿದ್ದನ್ನು ಬಳಕೆದಾರರು ಬೆಟ್ಟು ಮಾಡಿ ತೋರಿಸಿದ್ದಾರೆ.
‘ಬೈಗುಳ ಕೇಳುವುದು ದೊಡ್ಡದೋ ಅಥವಾ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡುವುದು ದೊಡ್ಡದೋ? ನೀವು ಹಿಂಸಾಚಾರವನ್ನು ಖಂಡಿಸದೇ ಭಾಷೆಯನ್ನು ಮಾತ್ರ ಟೀಕಿಸುತ್ತಿರುವುದು ಸರಿಯಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ರಾಜಕಾರಣಿಗಳು ಇಂತಹ ಕೆಟ್ಟ ಭಾಷೆ ಬಳಸಿದಾಗಲೂ ನೀವು ಹೀಗೆಯೇ ಧ್ವನಿ ಎತ್ತುತ್ತೀರಾ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
‘ಎಸಿ ಕಾರಿನಲ್ಲಿ ಕುಳಿತು ಮೇಕಪ್ ಹಾಕಿಕೊಂಡು ಜ್ಞಾನ ನೀಡುವುದು ಸಖತ್ ಸುಲಭ’ ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ. ಗೌರವವನ್ನು ಯಾರೂ ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ, ಅದನ್ನು ಸಂಪಾದಿಸಬೇಕು ಎಂದು ಹೇಳಿರುವ ನೆಟ್ಟಿಗರು, ಭೂಮಿ ಪೆಡ್ನೇಕರ್ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : ನಟಿ ಸಮಂತಾ ಪ್ರೆಗ್ನೆನ್ಸಿ ಗ್ಲೋ ನೋಡಿ ನೆಟ್ಟಿಗರು ಫಿದಾ..!
