ಅಥಣಿ : ವಕೀಲರೊಬ್ಬರ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಆರೋಪದಡಿ ಅಥಣಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಥಣಿ ವಕೀಲರ ಸಂಘದ ವತಿಯಿಂದ ಪಟ್ಟಣದ ಹಳ್ಳಾಳ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ದೂರು ನೀಡಿ 24 ಗಂಟೆ ಕಳೆದರೂ ಎಫ್ಐಆರ್ ದಾಖಲಿಸದ ಪೊಲೀಸ್ ಇಲಾಖೆಯ ನಡೆಯನ್ನು ಖಂಡಿಸಿದ ವಕೀಲರು, ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಕಳೆದ 30ನೇ ತಾರೀಕೂ ಸತ್ತಿ ಗ್ರಾಮದ ನಿವಾಸಿ ಹಾಗೂ ವಕೀಲರಾದ ಮಲ್ಲಿಕಾರ್ಜುನ ಕೋರಿ ಅವರು ದೌರ್ಜನ್ಯಕ್ಕೊಳಗಾದವರು. ಮೂರು ದಿನ ಹಿಂದೆ ಸತ್ತಿ ಗ್ರಾಮದಲ್ಲಿ ನಡೆದ ಜಾತ್ರೆಯ ವೇಳೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿತ್ತು. ಗಾಯಾಳುಗಳು ವಕೀಲ ಮಲ್ಲಿಕಾರ್ಜುನ ಅವರ ಮನೆಯ ಎದುರಿನ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ರಾತ್ರಿ ಸುಮಾರು 8:40ಕ್ಕೆ ಸ್ಥಳಕ್ಕೆ ಬಂದ ಅಥಣಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಪೇದೆ ವಿಷ್ಣು ಗಾಯಕವಾಡ ಹಾಗೂ ಸಮವಸ್ತ್ರದಲ್ಲಿರದ ಇತರ ಇಬ್ಬರು ಸಿಬ್ಬಂದಿ, ಜನರನ್ನು ಚದುರಿಸುವ ಭರದಲ್ಲಿ ಲಾಠಿ ಪ್ರಹಾರ ನಡೆಸಿದ್ದರು.
ಈ ಸಂದರ್ಭದಲ್ಲಿ ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ವಕೀಲ ಮಲ್ಲಿಕಾರ್ಜುನ ಅವರ ಬಳಿ ಬಂದ ಪೊಲೀಸರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಎಳೆದಾಡಿದ್ದು. ನಾನು ವಕೀಲನಿದ್ದೇನೆ” ಎಂದು ಹೇಳಿದರೂ ಲೆಕ್ಕಿಸದೆ, “ಕೋರ್ಟ್ನಲ್ಲಿ ಹೇಳಿಕೋ” ಎಂದು ವೃತ್ತಿಗೆ ಅವಮಾನಿಸಿದ್ದಾರೆ. ಅಲ್ಲದೇ ಪೇದೆ ವಿಷ್ಣು ಗಾಯಕವಾಡ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ : ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ‘ಕಾಕ್ರೋಚ್ ಜನತಾ ಪಕ್ಷ’ದ ಶಾಂತಿಯುತ ಹೆಜ್ಜೆ
ಹಲ್ಲೆ ನಡೆಸಿದ ಆರೋಪಿ ಪೊಲೀಸರ ವಿರುದ್ಧ ದೂರು ನೀಡಿದರೂ, ಪೊಲೀಸರು ತಮ್ಮ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಎಫ್ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ವಕೀಲರು ಹಳ್ಳಾಳ ವೃತ್ತದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. “ಗುಂಡಾ ಪೊಲೀಸರಿಗೆ ಧಿಕ್ಕಾರ” ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ರಸ್ತೆ ತಡೆದು ತಮ್ಮ ಅಸಮಾಧಾನ ಹೊರಹಾಕಿದರು.

ಹಲ್ಲೆ ನಡೆಸಿದ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಇತರ ಮೂವರು ಸಿಬ್ಬಂದಿಗಳ ಮೇಲೆ ತಕ್ಷಣವೇ ಎಫ್ಐಆರ್ ದಾಖಲಾಗಬೇಕು ಎಂದು ಒತ್ತಾಯಿಸಿದರು. ಇವತ್ತೇ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಕೋರ್ಟ್ ಕಲಾಪಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಠಾಣೆಗೆ ಬರುವ ಕಕ್ಷಿದಾರರ (ಸಾರ್ವಜನಿಕರ) ಮುಂದೆಯೇ ಪೊಲೀಸರು ವಕೀಲರನ್ನು ಕೀಳಾಗಿ ಕಾಣುತ್ತಿದ್ದಾರೆ. ವಕೀಲರ ಹೆಸರಿಗೆ ಮಸಿ ಬಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಇದೆ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಅವರಿಗೆ ವಕೀಲರ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಈ ಗಂಭೀರ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ) ಗಮನಕ್ಕೆ ತಂದು ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಅವರು, ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿ ಸೂಕ್ತ ಕ್ರಮದ ಭರವಸೆ ನೀಡಿದರು. ನಮಗೆ ಮೊದಲು ರಕ್ಷಣೆ ಬೇಕು, ಆಮೇಲೆ ನಾವು ಜನಸಾಮಾನ್ಯರ ರಕ್ಷಣೆ ಮಾಡುತ್ತೇವೆ. ಈ ಅನ್ಯಾಯದ ವಿರುದ್ಧ ಕೇವಲ ಅಥಣಿಯಲ್ಲಿ ಮಾತ್ರವಲ್ಲದೇ, ಕರ್ನಾಟಕದಾದ್ಯಂತ ವಕೀಲರು ಒಗ್ಗೂಡಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಪ್ರತಿಭಟನಾ ನಿರತ ವಕೀಲರು ಎಚ್ಚರಿಕೆ ನೀಡಿದ್ದರು.
