28.9 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿರಾಜ್ಯ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳ ಪರಿಚಯಾತ್ಮಕ ಸಭೆಯಲ್ಲಿ ಕಲುಷಿತ ನೀರು ಸರಬರಾಜಾಗದಂತೆ ಕಟ್ಟೆಚ್ಚರ ವಹಿಸಿ; ಈಶ್ವರ ಖಂಡ್ರೆ

ಬೆಂಗಳೂರು : ಗ್ರಾಮೀಣ ಕರ್ನಾಟಕದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಎಲ್ಲ ಪಂಚಾಯ್ತಿಗಳ ಆದ್ಯ ಕರ್ತವ್ಯವಾಗಿದ್ದು, ಯಾವುದೇ ಕಾರಣಕ್ಕೂ ಕಲುಷಿತ ನೀರು ಸರಬರಾಜಾಗದಂತೆ ಎಚ್ಚರ ವಹಿಸಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿಂದು ಇಲಾಖೆಯ ಉನ್ನತಾಧಿಕಾರಿಗಳ ಪರಿಚಯಾತ್ಮಕ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲುಷಿತ ನೀರು ಸೇವನೆಯಿಂದ ಮುಗ್ಧ ಜನರು ಮೃತಪಟ್ಟ ಘಟನೆಗಳು ಹಲವೆಡೆ ನಡೆದಿವೆ. ಇಂತಹ ಘಟನೆ ಮರುಕಳಿಸದಂತೆ ನೀರಿನ ಪರೀಕ್ಷೆಯನ್ನು ಎನ್.ಎ.ಬಿ.ಎಲ್. ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ನಿಯಮಿತವಾಗಿ ಮಾಡುವಂತೆ ಆದೇಶಿಸಿರುವುದಾಗಿ ತಿಳಿಸಿದರು.

ಎಲ್ಲ ನಾಗರಿಕತೆಗಳೂ ಹುಟ್ಟಿದ್ದು ನದಿಗಳ ತಟದಲ್ಲಿ. ನೀರು ಜೀವಜಲ. ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ಪಂಚಾಯ್ತಿಗಳಿಂದ ಪೂರೈಕೆ ಮಾಡುವ ಕುಡಿಯುವ ನೀರಿನಲ್ಲಿ ಯಾವುದೇ ಲೋಪ ಆಗದಂತೆ ಬಹು ಹಂತದ ಪರಿಶೀಲನೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದರು. ಮೇಲ್ಮೈ ನೀರಿನಿಂದ ಮುಂದಿನ 30 ವರ್ಷಗಳ ಕಾಲ ನೀರು ಪೂರೈಸಲು ಕ್ರಮ ವಹಿಸಲಾಗಿದೆ. ಹೀಗಾಗಿ ನದಿ, ಕೆರೆ, ಸರೋವರ ಸೇರಿದಂತೆ ಯಾವುದೇ ಜಲಮೂಲ ಕಲುಷಿತವಾಗದಂತೆ ಸೂಚಿಸಿರುವುದಾಗಿ ಹೇಳಿದರು. ಇದನ್ನೂ ಓದಿ : ತುಂಗಭದ್ರಾ ಜಲಾಶಯಕ್ಕೆ ಜೀವಕಳೆ; ಕಲ್ಯಾಣ ಕರ್ನಾಟಕ ರೈತರಲ್ಲಿ ಹರ್ಷ

ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆ ಒತ್ತುವರಿ ತೆರವು ಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದ ಅವರು, ಜಲ ಮೂಲಗಳಿಗೆ ನೇರವಾಗಿ ಮಲತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದವರಿಗೆ ಖಾತಾ ವಿಳಂಬವಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಸರ್ವರ್ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಸೃಜಿಸಲಾಗಿರುವ ಎಲ್ಲ ಆಸ್ತಿಗಳ ದಾಖಲೀಕರಣ ಆಗಬೇಕು. ಈ ಎಲ್ಲ ಆಸ್ತಿಗಳೂ ಗುಣಮಟ್ಟದಿಂದ ಕೂಡಿರಬೇಕು, ಇದರಲ್ಲಿ ಯಾವುದೇ ರಾಜೀಗೆ ಅವಕಾಶವಿಲ್ಲ. ಜೊತೆಗೆ ಎಲ್ಲ ಅಸ್ತಿಯನ್ನು ಜಿಯೋ ಟ್ಯಾಗ್ ಮಾಡಿ ಸರ್ಕಾರಿ ಆಸ್ತಿ ಸಂರಕ್ಷಣೆ ಮಾಡಿ, ಅದನ್ನು ಅಪ್ ಲೋಡ್ ಮಾಡುವಂತೆ ತಿಳಿಸಿದರು. ಇದನ್ನೂ ಓದಿ : ಸೂರಜ್‌ ಹೆಗ್ಡೆ ನಿಧನ – ಅಂತಿಮ ನಮನ ಸಲ್ಲಿಸಿದ ರಾಹುಲ್‌ ಗಾಂಧಿ

ಸಾಮಾಜಿಕ ಅರಣ್ಯೀಕರಣ ಆಡಿಟ್ ಗೆ ಸೂಚನೆ : ಮನ್ರೇಗಾ ಸಂಯೋಜನೆಯಲ್ಲಿ ಸಾಮಾಜಿಕ ಅರಣ್ಯಕ್ಕೆ ಆರ್ಥಿಕ ನೆರವು ಒದಗಿಸಲಾಗಿದ್ದು, ರಸ್ತೆ ಬದಿಯಲ್ಲಿ ಮತ್ತು ನೆಡುತೋಪುಗಳಲ್ಲಿ ಬೆಳೆಸಲಾಗಿರುವ ಸಸಿಗಳ ಜಿಯೋ ಟ್ಯಾಗ್ ಮಾಡಿ, ಆಡಿಟ್ ಮಾಡಿಸಲು ಈಶ್ವರ ಖಂಡ್ರೆ ಸೂಚಿಸಿದರು.

ಗ್ರಾಮೀಣ ಭಾಗಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಆದೇಶ : ರಾಜ್ಯದಲ್ಲಿ 2 ಲಕ್ಷ ಕಿ.ಮೀ. ಗ್ರಾಮೀಣ ರಸ್ತೆ ಇದ್ದು, ಇದರಲ್ಲಿ ಎಷ್ಟು ಮಣ್ಣಿನ ರಸ್ತೆ ಇದೆ. ಎಷ್ಟು ಕಾಂಕ್ರೀಟ್ ರಸ್ತೆ ಇದೆ, ಎಷ್ಟು ಡಾಂಬರು ರಸ್ತೆ ಇದೆ ಎಂಬ ಸಂಪೂರ್ಣ ವಿವರ ನೀಡುವಂತೆ ತಿಳಿಸಿದ ಸಚಿವರು, ಬಸ್ ಸಂಪರ್ಕವೇ ಇಲ್ಲದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಕನಿಷ್ಠ ಒಂದು ಸಂಪರ್ಕ ರಸ್ತೆ ಕಲ್ಪಿಸಲು ಕ್ರಮ ವಹಿಸುವಂತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲ, ರಂದೀಪ್ ಡಿ, ಪಂಚಾಯತ್ ರಾಜ್ ಆಯುಕ್ತರಾದ ಡಾ ಅರುಂಧತಿ, ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ, ಕುಡಿಯುವ ನೀರು ಪೂರೈಕೆ ವಿಭಾಗದ ಆಯುಕ್ತರಾದ ಫೌಜಿಯಾ ತರುನ್ನುಂ ಮತ್ತಿತರರು ಪಾಲ್ಗೊಂಡಿದ್ದರು.

Related posts

ಜಿಲ್ಲೆಯಲ್ಲಿ ಮಳೆ ಕೊರತೆ; ಬರಿದಾಗುತ್ತಿದೆ ಜೀವನದಿ ಹೇಮಾವತಿ ಜಲಾಶಯದ ಒಡಲು..!

Kalpana Editor

ಇನ್ಮುಂದೆ ನೀಟ್ ಪರೀಕ್ಷೆಗೆ, ಭಾರತೀಯ ಸೇನೆಯ ನೆರವು..!

Kalpana Editor

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ- ಸಿಎಂ ಸಿದ್ದರಾಮಯ್ಯ

Kalpana Editor