ಚಿಕ್ಕಬಳ್ಳಾಪುರ : ನಗರದ ಕನ್ನಡ ಭವನದ ಬಳಿ ಕೆಂಪೇಗೌಡ ಜಯಂತಿಯ ಅಂಗವಾಗಿ ನಡೆದಂತ ಮೆರವಣಿಗೆಯ ವೇಳೆಯಲ್ಲಿ ನಡೆದ ಗಲಾಟೆಯ ಬೆನ್ನಲ್ಲೇ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿನ ಮೇಲೆ ದುಷ್ಕರ್ಮಿಯೊಬ್ಬ ಚಪ್ಪಲಿ ಎಸೆದಿರುವ ಘಟನೆ ಸಂಭವಿಸಿದೆ.
ಕನ್ನಡ ಭವನದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಉಂಟಾದ ಗದ್ದಲದ ಬಳಿಕ, ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಬೆಂಬಲಿಗರೊಂದಿಗೆ ಕಾರಿನ ಸನ್ರೂಫ್ ಮೂಲಕ ಹೊರಬಂದು ರ್ಯಾಲಿ ನಡೆಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ಜನಸಂದಣಿಯಿಂದ ಏಕಾಏಕಿ ಶಾಸಕರ ಕಾರನ್ನು ಗುರಿಯಾಗಿಸಿ ಚಪ್ಪಲಿಯೊಂದನ್ನು ಎಸೆಯಲಾಗಿದೆ. ಶಾಸಕರು ಸನ್ರೂಫ್ನಲ್ಲೇ ನಿಂತಿದ್ದಾಗ ನಡೆದ ಈ ಕೃತ್ಯದಿಂದ ಸ್ಥಳದಲ್ಲಿ ಕೆಲಕಾಲ ಭಾರೀ ಆತಂಕ ಮತ್ತು ಆಕ್ರೋಶದ ವಾತಾವರಣ ಸೃಷ್ಟಿಯಾಯಿತು.
ಚಪ್ಪಲಿ ಎಸೆದ ವ್ಯಕ್ತಿ ತಕ್ಷಣವೇ ಪೊಲೀಸ್ ವಶಕ್ಕೆ, ಶಾಸಕರ ಕಾರಿಗೆ ಚಪ್ಪಲಿ ತಗುಲುತ್ತಿದ್ದಂತೆ ಅಲರ್ಟ್ ಆದ ಸ್ಥಳೀಯ ಪೊಲೀಸರು ಮತ್ತು ಶಾಸಕರ ಬೆಂಬಲಿಗರು ಚಪ್ಪಲಿ ಎಸೆದ ವ್ಯಕ್ತಿಯನ್ನು ಗುರುತಿಸಿ ತಕ್ಷಣವೇ ಹಿಡಿದುಕೊಂಡಿದ್ದಾರೆ. ಉದ್ರಿಕ್ತ ಕಾರ್ಯಕರ್ತರು ಆತನ ಮೇಲೆ ಮುಗಿಬೀಳುವ ಮುನ್ನವೇ ಪೊಲೀಸರು ಆತನನ್ನು ರಕ್ಷಿಸಿ, ತಮ್ಮ ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆ ಜಗಳದಿಂದ ಆರಂಭವಾದ ರಾಜಕೀಯ ಸಂಘರ್ಷ, ಇದೀಗ ಬೀದಿ ರಂಪಾಟಕ್ಕೆ ತಿರುಗಿದ್ದು, ಚಿಕ್ಕಬಳ್ಳಾಪುರ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಇದನ್ನೂ ಓದಿ : ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಡಿಕೆಶಿ ಭಾಗಿ..!
