ಬೆಂಗಳೂರು : ಚುನಾವಣಾ ಸಂದರ್ಭದಲ್ಲಿ ರೇಡ್ ಮಾಡಿ ಜಪ್ತಿ ಮಾಡಿದ್ದ ಮದ್ಯ ಹಾಗೂ ಹಣದಲ್ಲಿ ವ್ಯತ್ಯಾಸ ಕಂಡುಬಂದ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಅಬಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹೊರಮಾವು ಅಬಕಾರಿ ಇನ್ಸ್ಪೆಕ್ಟರ್ ಸುದೀರ್ ಕುಮಾರ್ ಹಾಗೂ ಅಬಕಾರಿ ಉಪ ಅಧೀಕ್ಷಕ ಅಬೂಬಕರ್ ಎ ಮುಜಾವರ್ ಅವರ ಮನೆಗಳ ಮೇಲೆ ದಾಳಿ ನಡೆದಿದೆ.
ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಇವರಿಬ್ಬರಿಗೆ ಸೇರಿದ್ದ, 5 ಸ್ಥಳಗಳಲ್ಲಿ ದಾಳಿ ನಡೆಸಿದೆ. ಮಹತ್ವದ ದಾಖಲೆಗಳನ್ನ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶೋಭಾ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಅಬಕಾರಿ ಅಧಿಕಾರಿಗಳು ಬಾರ್ ಗಳ ಮೇಲೆ ದಾಳಿ ನಡೆಸಿದ್ದರು.
2023 ರ ಜನವರಿ 4 ರಂದು ಬಾರ್ಗಳ ಮೇಲೆ ದಾಳಿ ಮಾಡಲಾಗಿತ್ತು. ದಾಳಿ ಸಂದರ್ಭದಲ್ಲಿ ಸಿಕ್ಕ ಮದ್ಯದ ಲೆಕ್ಕದಲ್ಲಿ ಬಾರಿ ವ್ಯತ್ಯಾಸ ಕಂಡು ಬಂದಿತ್ತು. ಈ ಸಂಬಂಧ ದೂರು ದಾಖಲಿಸಿ ಇಂದು ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಲೋಕಾಯುಕ್ತ ತನಿಖಾ ವರದಿ ಆಧರಿಸಿ, ಕ್ರಿಮಿನಲ್ ಮಿಸ್ಕಂಡಕ್ಟ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸಿಎಲ್-2 ಮೈ ಡ್ರಾಪ್ಸ್ನಲ್ಲಿ 24.43 ಲೀಟರ್ – 38,307 ರೂ. ಕೊರತೆ, ಸಿಎಲ್-9 ಸುರಭಿ ಬಾರ್ನಲ್ಲಿ 40.37 ಲೀಟರ್ – 1,09,630 ರೂ. ಕೊರತೆ, ಸಿಎಲ್-2 ಚಂದನಾ ಎಂಟರ್ಪ್ರೈಸಸ್ನಲ್ಲಿ 42.87 ಲೀಟರ್ – 93,564 ರೂ. ಕೊರತೆ ಕಂಡುಬಂದಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ : ಮತ್ತೆ ಬಾಂಬ್ ಬೆದರಿಕೆ – ಧಾರವಾಡ ಹೈಕೋರ್ಟ್ ಪೀಠಕ್ಕೆ ಭಾರೀ ಭದ್ರತೆ..!
