ಕೊಲಂಬೊ : ಲಂಕಾ ಪ್ರೀಮಿಯರ್ ಲೀಗ್ ಸಮಯದಲ್ಲಿ ಆಟಗಾರನಿಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ಭಾರತದ ಮಾಜಿ ಅಂಡರ್ -19 ವಿಶ್ವಕಪ್ ವಿಜೇತ ಮಂಜೋತ್ ಕಲ್ರಾ ಅರೆಸ್ಟ್ ಆಗಿದ್ದಾರೆ. ಶ್ರೀಲಂಕಾದ ಕ್ರೀಡಾ ಭ್ರಷ್ಟಾಚಾರ ವಿರೋಧಿ ತನಿಖಾಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
2018 ರ ಐಸಿಸಿ ಅಂಡರ್ -19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಶತಕ ಸಿಡಿಸಿದ ಕಲ್ರಾ ಅವರನ್ನು ಕ್ರೀಡೆಗೆ ಸಂಬಂಧಿಸಿದ ಅಪರಾಧಗಳ ಹಿನ್ನೆಲೆ ಪೊಲೀಸ್ ವಿಶೇಷ ತನಿಖಾ ಘಟಕವು ವಶಕ್ಕೆ ಪಡೆದುಕೊಂಡಿತು. ನಂತರ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.
27 ವರ್ಷದ ಈ ಆಟಗಾರ, ಪೃಥ್ವಿ ಶಾ ನೇತೃತ್ವದ ಭಾರತದ 2018 ರ ಅಂಡರ್-19 ವಿಶ್ವಕಪ್ ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದರು. ಈ ತಂಡದಲ್ಲಿ ಭವಿಷ್ಯ ಭಾರತದ ಅಂತರರಾಷ್ಟ್ರೀಯ ಆಟಗಾರರಾದ ಶುಭಮನ್ ಗಿಲ್, ಅರ್ಶ್ದೀಪ್ ಸಿಂಗ್ ಮತ್ತು ಶಿವಂ ಮಾವಿ ಕೂಡ ಇದ್ದರು. ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿಯಿತು. ಕಲ್ರಾ 101 ರನ್ ಗಳಿಸಿ ಅಜೇಯರಾಗಿ ಉಳಿದು ಫೈನಲ್ನ ಹೀರೋ ಆಗಿದ್ದರು.
ಲಂಕಾ ಪ್ರೀಮಿಯರ್ ಲೀಗ್ಗೆ ಸಂಬಂಧಿಸಿದಂತೆ ಆಟಗಾರನೊಬ್ಬನಿಗೆ ಹಣದ ಆಮಿಷ ಒಡ್ಡಿದ ಆರೋಪ ಕಲ್ರಾ ಮೇಲಿದೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ. ಪಂದ್ಯಾವಳಿ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಬಂಧನ ನಡೆದಿದೆ. ಕಲ್ರಾ ಜಾಫ್ನಾ ಕಿಂಗ್ಸ್ ಫ್ರಾಂಚೈಸಿಯ ಸಹ-ಮಾಲೀಕರಲ್ಲಿ ಒಬ್ಬರು ಎಂದು ತಿಳಿದುಬಂದಿದೆ. ಇದನ್ನೂ ಓದಿ : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; ಪಿಎಸ್ಐ ಹುದ್ದೆಗೆ ನೇರ ನೇಮಕಾತಿ..!
