July 24, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಮಾನದಂಡಗಳ ಅನ್ವಯವೇ ಶಾಶ್ವತ ನಿವಾಸ ಪ್ರಮಾಣಪತ್ರ – ಅಕ್ರಮ ನಿವಾಸಿಗಳು ಹೊರಕ್ಕೆ; ಡಿಸಿಎಂ ಜಿ.ಪರಮೇಶ್ವರ್

ಬೆಂಗಳೂರು : ಕೇಂದ್ರ ಸರ್ಕಾರ ಎಸ್‌ಐಆರ್ ಮಾಡಲು ಪ್ರಾರಂಭಿಸಿದ್ದು 11 ಮಾನದಂಡಗಳ ಪ್ರಕಾರವೇ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ನೀಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಪರಮೇಶ್ವರ್‌ ಅವರು ತಿಳಿಸಿದರು. ಇಂದು ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ “ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಜಾತಿ ಪ್ರಮಾಣ ಪತ್ರ ವಿತರಣೆ” ಹಾಗೂ “ಶಾಶ್ವತ ನಿವಾಸ ಪ್ರಮಾಣಪತ್ರ ವಿತರಿಸುವ ಸೇವೆಯ ಆರಂಭ”ಕ್ಕೆ ಮುಖ್ಯಮಂತ್ರಿ ಡಿ‌.ಕೆ. ಶಿವಕುಮಾರ್ ಅವರೊಂದಿಗೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ, ಶಾಶ್ವತ ನಿವಾಸಿಗಳ ಪ್ರಮಾಣ ಪತ್ರವನ್ನು ಮನೆಮನೆಗೆ ತಲುಪಿಸುವ ಮೂಲಕ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರವು ಜನರ ಸೇವೆ ಮಾಡಲು ಮತ್ತೊಂದು ಹೆಜ್ಜೆಯನ್ನಟ್ಟಿದೆ ಎಂದು ಹೇಳಿದರು‌.

ಪಿಆರ್‌ಸಿಯನ್ನು ಯಾವ ಆಧಾರದ ಮೇಲೆ ನೀಡಬೇಕು ಎಂಬ ಕುರಿತು ಕೆಲವು ನಿಯಮಗಳನ್ನು ರೂಪಿಸಲಾಗಿದೆ. ಉದ್ಯೋಗ, ವಿವಾಹ, ರಾಜ್ಯದಲ್ಲಿ ಸತತವಾಗಿ ಹತ್ತು ವರ್ಷಗಳ ಕಾಲ ವಾಸ ಮಾಡಿರಬೇಕು. ಕರ್ನಾಟದಲ್ಲಿ ಜನಿಸಿರುವ ಆಧಾರದ ಮೇಲೆ ಪಿಅರ್‌ಸಿ ನೀಡಲು ತೀರ್ಮಾನಿಸಿದ್ದೇವೆ. ಸರ್ಟಿಫಿಕೆಟ್‌ಗಳನ್ನು ಮನೆಮನೆಗೆ ತಲುಪಿಸುತ್ತೇವೆ. ಜನರು ಹತ್ತಾರು ಬಾರಿ, ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಕಾರಣದಿಂದ ಈ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪ್ರವರ್ಗ 2ಎ, 2ಬಿ ಹಾಗೂ 3ಎ ಮತ್ತು 3ಬಿ ಪ್ರವರ್ಗಗಳಲ್ಲಿ 1.36 ಕೋಟಿ ಜನರಿದ್ದಾರೆ. ಪ್ರವರ್ಗ 1ರಲ್ಲಿ ಜಾತಿ ಪ್ರಮಾಣ ಪತ್ರಗಳ ಸಂಖ್ಯೆ 0.86 ಕೋಟಿ ಇದೆ. ಅನುಸೂಚಿ ಜಾತಿ ಮತ್ತು ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ 2.63 ಕೋಟಿ ಇದೆ. ಒಟ್ಟಾರೆ 4.85 ಕೋಟಿ ಜಾತಿ ಪ್ರಮಾಣ ಪತ್ರವನ್ನು ನೀಡಲು ಲೆಕ್ಕ ಹಾಕಲಾಗಿದ್ದು, ತಲುಪಿಸುವ ಕಾರ್ಯ ಪ್ರಾರಂಭಿಸುತ್ತಿದ್ದೇವೆ.

ವೆಬ್‌ಸೈಟ್ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳಿಂದ ಪಡೆಯಬಹುದಾಗಿದೆ. ವಾಟ್ಸಪ್ ಮೂಲಕ ಮತ್ತು ನೇರವಾಗಿ ಪಡೆದುಕೊಳ್ಳಬಹುದು. ಈ ರೀತಿಯ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ‌. ನಾಡಕಚೇರಿ, ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದರೆ ಅಥವಾ ಬಾಪೂಜಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದವರು ವೆಬ್‌ಸೈಟ್‌ ಮೂಲಕ ಸರ್ಟಿಫಿಕೇಟ್ ಪಡೆದುಕೊಳ್ಳುವ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು. ಯಾವುದಾದರು ರೀತಿಯಲ್ಲಿ ತೊಂದರೆ ಆಗಿರುವ ದೂರುಗಳು ಬಂದರೆ ಪರಿಶೀಲಿಸಲು ಸಕ್ಷಮ ಪ್ರಾಧಿಕಾರ ಮಾಡಲಾಗಿದೆ. ತಹಶೀಲ್ದಾರ್, ಉಪತಹಶೀಲ್ದಾರ್‌ಗೆ ಹಾಗೂ ಉಪವಿಭಾಗಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಯಾವುದಾದರು ಅರ್ಜಿಗೆ ತೊಂದರೆ ಇದ್ದರೆ, ದೂರನ್ನು ಆಧರಿಸಿ ಪುನರ್ ಪರಿಶೀಲನೆ ನಡೆಸುವ ಅವಕಾಶವನ್ನು ಜಿಲ್ಲಾಧಿಕಾರಿಗಳಿಗೆ ಕಲ್ಪಿಸಲಾಗಿದೆ.

ಪಿಆರ್‌ಸಿ ಪಡೆಯಲು ಅರ್ಜಿ ಸಲ್ಲಿಸುವವರು ಕರ್ನಾಟಕದಲ್ಲಿ ಜನಿಸಿರಬೇಕು. ಸಾಮಾನ್ಯ ವಾಸಸ್ಥಳ ಅರ್ಜಿದಾರರ ಪಾಲಕರು ಸಾಮಾನ್ಯವಾಗಿ ಕನಿಷ್ಟ ಹತ್ತು ವರ್ಷ ಕರ್ನಾಟಕದಲ್ಲಿ ವಾಸ ಇರಬೇಕು. ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿತೀಯ ಪಿಯುಸಿ ಅಥವಾ ಸತತ ಹತ್ತು ವರ್ಷ ವ್ಯಾಸಂಗ ಮಾಡಿರಬೇಕು. ಪೋಷಕರು ಅಥವಾ ಸಂಗಾತಿಯ ವಾಸಸ್ಥಳ, ಅರ್ಜಿದಾರರ ತಂದೆ-ತಾಯಿ, ಕಾನೂನು ಬದ್ಧ ಪಾಲಕರು ಅಥವಾ ಪತಿ-ಪತ್ನಿ ಕರ್ನಾಟಕದಲ್ಲಿ ಸಾಮಾನ್ಯ ನಿವಾಸಿಯಾಗಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬ ಕರ್ನಾಟಕದಲ್ಲಿ ವಸತಿ ಅಥವಾ ಸ್ಥಿರಾಸ್ಥಿಯ ಮಾಲಿಕತ್ವ ಹೊಂದಿರಬೇಕು. ಕಾನೂನು ಬದ್ಧ ವಾರಸುದಾರರಾಗಿರಬೇಕು. ಮತದಾರರ ಪಟ್ಟಿಯಲ್ಲಿ ಅರ್ಜಿದಾರರ ಹೆಸರಿರಬೇಕು. ಆಧಾರ್, ಕಂದಾಯ ದಾಖಲೆಗಳು, ಪಡಿತರ ಚೀಟಿ ಅಥವಾ ಇತರೆ ಸರ್ಕಾರಿ ದಾಖಲೆಗಳಲ್ಲಿ ಅರ್ಜಿದಾರರ ಪೋಷಕರ ಹೆಸರು ಸಾಮಾನ್ಯ ನಿವಾಸಿಯಾಗಿ ದಾಖಲಾಗಿರಬೇಕು‌.

ಸರ್ಕಾರಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಗಣನೀಯ ಅವಧಿ 7 ವರ್ಷ ಸೇವೆ ಸಲ್ಲಿಸಿರಬೇಕು. ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುವ ವ್ಯಕ್ತಿಯನ್ನು ವಿವಾಹವಾಗಿದ್ದರೆ ಪಿಆರ್‌ಸಿ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಯಾವುದೇ ಅಂಶಗಳನ್ನು ಒಳಗೊಂಡ ಮಾಹಿತಿ ಲಭ್ಯ ಇದ್ದರೆ ಸರ್ಟಿಫಿಕೇಟ್‌ಗಳನ್ನು ನೀಡಲಾಗುತ್ತದೆ. ಮನೆಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು. 4.8 ಕೋಟಿ ಸರ್ಟಿಫಿಕೇಟ್‌ಗಳನ್ನು ಅಟಲ್‌ ಜನಸ್ನೇಹಿ ಕೇಂದ್ರಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ. ಜಿಲ್ಲೆಯಲ್ಲಿ ಅರ್ಜಿ ಹಾಕುವವರಿಗೆ ತಹಶೀಲ್ದಾರರು ಮತ್ತು ಕೆಳ ಹಂತದ ಅಧಿಕಾರಿಗಳು ಮನೆಮನೆಗೆ ತಲುಪಿಸುವ ಕೆಲಸ‌ ಮಾಡುತ್ತಾರೆ ಎಂದು ವಿವರಿಸಿದರು.

ಪಿಆರ್‌ಸಿ ಅನೇಕ ರೀತಿಯಲ್ಲಿ ಉಪಯೋಗ ಆಗುತ್ತದೆ. ಎಸ್‌ಐಆರ್‌ಗೆ ಅನುಕೂಲವಾಗುವುದರ ಜೊತೆಗೆ ಕರ್ನಾಟಕದಲ್ಲಿ ಹೊರಗಿನವರು ನೆಲೆಸಿದ್ದಾರೆ ಎಂದು ಅನೇಕ ಸಂದರ್ಭದಲ್ಲಿ, ಅಧಿವೇಶನದಲ್ಲಿ ಪ್ರಶ್ನೆಗಳು ಬರುತ್ತವೆ. ಅಕ್ರಮ ವಲಸಿಗರು ಇದ್ದಾರೆ, ಸವಲತ್ತುಗಳನ್ನು ಪಡೆಯುತ್ತಾರೆ ಎಂಬ ಆರೋಪಗಳು ಬಂದಿವೆ. ಈಗ, ಈ ಅರ್ಹತೆಗಳಿಗೆ ಒಳಪಡದಿರುವವರು ಹೊರಗೆ ಉಳಿಯುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ : 178 ತಾಲೂಕಲ್ಲಿ ಮಳೆ ಕೊರತೆ: ವಿಬಿಜಿ ರಾಮ್ ಜಿ ಉದ್ಯೋಗ ನೀಡಲು ಈಶ್ವರ ಖಂಡ್ರೆ ಸೂಚನೆ..!

Related posts

ಕನ್ನಡ ಚಿತ್ರರಂಗದ ಹಿರಿಯ ನಟಿ ಸರೋಜಾ ಶ್ರೀಶೈಲನ್ ಇನ್ನಿಲ್ಲ..!

Kalpana Editor

ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ನಾನು ದೆಹಲಿಗೆ ಹೋಗಲ್ಲ – ಯು.ಟಿ ಖಾದರ್

Kalpana Editor

ಕೋಲ್ಕತ್ತಾದಿಂದ ಬೆಂಗಳೂರಿಗೆ ಐಷಾರಾಮಿ ಬಸ್ ಸೇವೆ ಆರಂಭ..!

Kalpana Editor