ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಯನ್ನು ಪ್ರಸಿದ್ಧ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಅಂಗ್ಮೊ ಕಟುವಾಗಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರನ್ನು ಪೊಲೀಸರು ವಶಕ್ಕೆ ಪಡೆದ ಜುಲೈ 21ರ ಪ್ರತಿಭಟನೆಯು ಪ್ರಾಮಾಣಿಕತೆಯಿಂದ ಕೂಡಿರಲಿಲ್ಲ ಎಂದು ಹೇಳಿರುವ ಅವರು, ಕಾಂಗ್ರೆಸ್ ನಾಯಕರು ರಾಜಕೀಯ ನಾಟಕ ಮಾಡುವ ಬದಲು ಜಂತರ್ ಮಂತರ್ನಲ್ಲಿ ಧರಣಿ ಕುಳಿತಿರುವ ವಿದ್ಯಾರ್ಥಿಗಳ ಜೊತೆ ಸೇರಿಕೊಳ್ಳಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಿಕ್ಷಣ ತಜ್ಞೆ ಹಾಗೂ ಸಾಮಾಜಿಕ ಉದ್ಯಮಿಯಾಗಿರುವ ಗೀತಾಂಜಲಿ, ರಾಜಕಾರಣಿಗಳು ಈಗ ಸೋನಮ್ ವಾಂಗ್ಚುಕ್ ಅವರ ಹೆಸರು ಮತ್ತು ಪ್ರತಿಷ್ಠೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ದೇಶದ ಜನರನ್ನು ಇನ್ನು ಮುಂದೆ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ನಮಗೆ ಆಡಳಿತ ಪಕ್ಷವೂ ಇಲ್ಲ, ವಿರೋಧ ಪಕ್ಷವೂ ಇಲ್ಲ. ನಮಗೆ ಸಂಸತ್ತೇ ಅತ್ಯುನ್ನತ ಸಂಸ್ಥೆ. ಸಂಸತ್ತು ಶಿಕ್ಷಣವನ್ನು ಅತ್ಯಂತ ಮೂಲಭೂತ ವಿಷಯವಾಗಿ ಪರಿಗಣಿಸಬೇಕು ಎಂಬುದಷ್ಟೇ ನಮ್ಮ ಆಶಯ ಎಂದರು. ಪ್ರಾಮಾಣಿಕತೆ ಇಲ್ಲದ ರಾಜಕಾರಣಿಗಳನ್ನು ದೇಶದ ಯುವಜನತೆಯೇ ಹೊರಹಾಕಲಿದ್ದಾರೆ. ಯಾವುದೇ ರಾಜಕೀಯ ಅಜೆಂಡಾ ಇಲ್ಲದೆ, ಕೇವಲ ಬೆಂಬಲ ನೀಡಲು ಬರುವ ಯಾರನ್ನಾದರೂ ಚಳವಳಿಗೆ ಸ್ವಾಗತಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ : ಶೂಟಿಂಗ್ ವೇಳೆ ಅವಘಡ; ತೆಲುಗು ಸ್ಟಾರ್ ನಂದಮೂರಿ ಬಾಲಯ್ಯಗೆ ಶಸ್ತ್ರಚಿಕಿತ್ಸೆ..!
