ಢಾಕಾ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಲವೇ ಗಂಟೆಗಳಲ್ಲಿ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆಯ ಮೇಲೆ ಬಾಂಬ್ ದಾಳಿ ನಡೆದಿದೆ. ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ಮತ್ತು ಅವಾಮಿ ಲೀಗ್ನ ಮಾಜಿ ಸಂಸದ ಶಕೀಬ್ ಅಲ್ ಹಸನ್ ನೆನ್ನೆ (ಬುಧವಾರ) ರಾತ್ರಿ ಭಾರತದಲ್ಲಿ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ವರ್ಚುವಲ್ ಆಗಿ ಕಾಣಿಸಿಕೊಂಡಿದ್ದರು.
ಇದಾದ ಕೆಲವೇ ಗಂಟೆಗಳ ನಂತರ ಅವರ ಪೂರ್ವಜರ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಮಾಗುರಾ ಪಟ್ಟಣದ ಕೇಶಬ್ಮೋರ್ ಪ್ರದೇಶದಲ್ಲಿರುವ ಶಕೀಬ್ ಅಲ್ ಹಸನ್ ಅವರ ಪೂರ್ವಜರ ನಿವಾಸದಲ್ಲಿ ಸ್ಥಳೀಯ ಸಮಯ ರಾತ್ರಿ 8:45 ರ ಸುಮಾರಿಗೆ ಈ ದಾಳಿ ನಡೆದಿದ್ದು, ಮನೆಯನ್ನು ಸಹ ಧ್ವಂಸಗೊಳಿಸಲಾಗಿದೆ.
ನವದೆಹಲಿಯ ವಿದೇಶಿ ವರದಿಗಾರರ ಕ್ಲಬ್ನಲ್ಲಿ ಆಯೋಜಿಸಲಾದ ವರ್ಚುವಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಶೇಖ್ ಹಸೀನಾ ಮಾತನಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ವರ್ಚುವಲ್ ಆಗಿ ಮಾತನಾಡಿದ ಶೇಖ್ ಹಸೀನಾ, ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು.
ಪ್ರಜಾಪ್ರಭುತ್ವ ಹಿತದೃಷ್ಟಿಯಿಂದ ಬಂಧನ ಅಥವಾ ಸಾವನ್ನು ಸಹ ಎದುರಿಸಲು ಸಿದ್ಧರಿದ್ದೇನೆ ಎಂದು ತಿಳಿಸಿದ್ದರು. ಮತ್ತೆ ಅಧಿಕಾರಕ್ಕಾಗಿ ನಾನು ವಾಪಸ್ ಆಗುತ್ತಿಲ್ಲ. ಬಾಂಗ್ಲಾದೇಶದ ಅಭಿವೃದ್ಧಿ, ಜಾತ್ಯತೀತತೆ ಮತ್ತು ಸಮೃದ್ಧಿಯ ಹಾದಿಗೆ ಮರಳಿ ತರುವ ಉದ್ದೇಶ ಹೊಂದಿದ್ದೇನೆಂದು ಹೇಳಿಕೊಂಡಿದ್ದರು. ಇದನ್ನೂ ಓದಿ : ಆರೋಪಿ ದರ್ಶನ್ಗೆ ಅತಿದೊಡ್ಡ ಸಂಕಷ್ಟ; ಪ್ರಕರಣದ ಎ-14 ಪ್ರದೋಷ್ನಿಂದ ಮಾಫಿ ಸಾಕ್ಷಿಗೆ ಅರ್ಜಿ
