ಸ್ಟುಡೆಂಟ್ಸ್ ಪ್ರೊಟೆಸ್ಟ್ಗೆ ಬಾಲಿವುಡ್ನಿಂದ ಬೆಂಬಲ ಸಿಗುತ್ತಿಲ್ಲ ಎಂಬ ಹಿರಿಯ ನಟ ನಾಸಿರುದ್ದೀನ್ ಶಾ ಅವರ ಹೇಳಿಕೆಗೆ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಟಕ್ಕರ್ ಕೊಟ್ಟಿದ್ದಾರೆ. ಪರೀಕ್ಷಾ ಹಗರಣಗಳ ಕುರಿತು ವಿದ್ಯಾರ್ಥಿ ಪ್ರತಿಭಟನೆಗಳನ್ನು ನಡೆಸುತ್ತಿರುವ ಬಗ್ಗೆ ಬಾಲಿವುಡ್ನಿಂದ ಪ್ರತಿಕ್ರಿಯೆ ಬರುತ್ತಿಲ್ಲ ಎಂಬ ಹಿರಿಯ ನಟ ನಾಸಿರುದ್ದೀನ್ ಶಾ ಅವರ ಹೇಳಿಕೆಗೆ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ನಾಸಿರುದ್ದೀನ್ ಶಾ ಅವರ ಹೇಳಿಕೆಯನ್ನು ಟೀಕಿಸಿರುವ ಕಂಗನಾ, ಅವರನ್ನು ‘ಲೋಮ್ಡಿ’ ಅಂದರೆ ನರಿ ಎಂದು ಹೋಲಿಕೆ ಮಾಡಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿ ಚಳವಳಿಗಳ ಬಗ್ಗೆ ಬಾಲಿವುಡ್ನ ಹಲವು ನಟರು ಮೌನವಾಗಿರುವುದನ್ನು ನಾಸಿರುದ್ದೀನ್ ಶಾ ಪ್ರಶ್ನಿಸಿದ್ದರು. ಅವರ ಆತ್ಮಸಾಕ್ಷಿ ಹೇಳಿದಾಗ ಅವರು ಮಾತನಾಡುತ್ತಾರೆ. ಬಾಯಲ್ಲಿ ಮೂಳೆ ಇರುವ ನಾಯಿ ಬೊಗಳಲು ಸಾಧ್ಯವಿಲ್ಲ ಎಂಬ ಮಾತಿದೆ ಎಂದು ಅವರು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಂಗನಾ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಾಸಿರುದ್ದೀನ್ ಶಾ ಅವರನ್ನು ನೇರವಾಗಿ ಟಾರ್ಗೆಟ್ ಮಾಡಿದ್ದಾರೆ. ನಟ ಪಿಯೂಷ್ ಮಿಶ್ರಾ ಅವರು ನಾಸಿರುದ್ದೀನ್ ಶಾ ಅವರ ಹೇಳಿಕೆ ಬಗ್ಗೆ ನೀಡಿದ್ದ ಪ್ರತಿಕ್ರಿಯೆಯ ವಿಡಿಯೋವನ್ನು ಹಂಚಿಕೊಂಡು ತಮ್ಮ ಅಭಿಪ್ರಾಯವನ್ನೂ ಬರೆದಿದ್ದಾರೆ.
ಇಂದಿನ ಕಾಲದಲ್ಲಿ ಯಾರನ್ನಾದರೂ ನಾಯಿ ಎಂದು ಕರೆಯುವುದು ಕೂಡ ಮೆಚ್ಚುಗೆಯೇ. ಏಕೆಂದರೆ ನಿಷ್ಠೆ ಮತ್ತು ಮುಗ್ಧತೆ ಇಂದು ಬಹಳ ಅಪರೂಪ. ನಾಸಿರುದ್ದೀನ್ ಅವರಂತಹ ಲೋಮ್ಡಿ (ನರಿ) ಗಿಂತ ನಾನು ನಾಯಿಯಾಗಿರಲು ಇಷ್ಟಪಡುತ್ತೇನೆ ಎಂದು ಕಂಗನಾ ಹೇಳಿದ್ದಾರೆ. ಕಂಗನಾ, ನಾಸಿರುದ್ದೀನ್ ಶಾ ಅವರು ಭಾರತದಲ್ಲಿ ತಿನ್ನುತ್ತಾರೆ, ಆದರೆ, ನೆರೆಯ ದೇಶದ ಪರವಾಗಿ ಹೋರಾಡುತ್ತಾರೆ ಎಂಬ ರೀತಿಯಲ್ಲಿ ಆರೋಪ ಮಾಡಿದ್ದಾರೆ. ಈ ಹೇಳಿಕೆಯ ಮೂಲಕ ಅವರ ದೇಶಪ್ರೇಮ ಮತ್ತು ನಿಲುವನ್ನು ಕಂಗನಾ ಪ್ರಶ್ನಿಸಿದ್ದಾರೆ.
ಅವರ ಪೋಸ್ಟ್ನಲ್ಲಿ, ನಾವೆಲ್ಲರೂ ಯಾರದ್ದೋ ಮುದ್ದಿನ ಪ್ರಾಣಿಗಳು ಎಂಬುದು ಸತ್ಯ. ಆದರೆ ನಾನು ಯಾವ ದೇಶದ ಅನ್ನ ತಿನ್ನುತ್ತೇನೋ, ಆ ದೇಶವನ್ನು ರಕ್ಷಿಸುತ್ತೇನೆ ಮತ್ತು ಅದಕ್ಕಾಗಿ ಹೋರಾಡುತ್ತೇನೆ ಎಂಬ ಹೆಮ್ಮೆ ನನಗಿದೆ ಎಂದು ಬರೆದಿದ್ದಾರೆ. ಇದೇ ಕಾರಣಕ್ಕೆ ನಾಸಿರುದ್ದೀನ್ ಶಾ ಅವರನ್ನು ‘ನರಿ’ ಎಂದು ಕರೆದಿರುವ ಕಂಗನಾ, ನಾಸಿರುದ್ದೀನ್ ಅವರಂತಹ ನರಿ ಆಗುವುದಕ್ಕಿಂತ ನಾಯಿಯಾಗಿರುವುದೇ ಉತ್ತಮ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಾಸಿರುದ್ದೀನ್ ಶಾ, ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ಬಾಲಿವುಡ್ನ ದೊಡ್ಡ ಸ್ಟಾರ್ಗಳು ಮಾತನಾಡದಿರುವುದನ್ನು ಪ್ರಶ್ನಿಸಿದ್ದರು. ಬಾಯಿಯಲ್ಲಿ ಮೂಳೆ ಇರುವ ನಾಯಿ ಬೊಗಳಲು ಸಾಧ್ಯವಿಲ್ಲ. ಮೂಳೆ ಬಾಯಿಯಿಂದ ಬಿದ್ದಾಗ ಅಥವಾ ಹಲ್ಲು ಮುರಿದಾಗ ಅವರು ಬೊಗಳುತ್ತಾರೆ. ಬಾಲಿವುಡ್ನ ಕೆಲವರು ತಮ್ಮ ಆತ್ಮಸಾಕ್ಷಿಯನ್ನು ನಿಗ್ರಹಿಸಿಕೊಂಡು ಮೌನವಾಗಿರುವುದನ್ನು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಶಾ ʼಖಂಡಿತ, ಹೌದುʼ ಎಂದು ಉತ್ತರಿಸಿದ್ದರು.
ಆದರೆ, ಇಂತಹ ಮೌನ ಎಷ್ಟು ದಿನ ಮುಂದುವರಿಯುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು ಎಂದಿದ್ದರು. ನಾಸಿರುದ್ದೀನ್ ಶಾ ಅವರ ಈ ಹೇಳಿಕೆ ಇದೀಗ ಕಂಗನಾ ರನೌತ್ ಅವರ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದ್ದು, ಇಬ್ಬರು ಬಾಲಿವುಡ್ ಕಲಾವಿದರ ನಡುವಿನ ಈ ವಾಕ್ಸಮರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿದೆ. ಇದನ್ನೂ ಓದಿ : ಪರಪ್ಪನ ಅಗ್ರಹಾರದಲ್ಲಿ ಸಿಸಿಬಿ ರೇಡ್ ಮಾಡಿಸಿದ್ದು ನಾನೇ – ಪ್ರಿಯಾಂಕ್ ಖರ್ಗೆ
