ಬೆಂಗಳೂರು : ಸಿಎಂ ಡಿ.ಕೆ ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಬಂದು ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಡಿ.ಕೆ ಶಿವಕುಮಾರ್ ಹಾಗೂ ಅವರ ಪತ್ನಿ, ದಿವಂಗತ ಎಸ್.ಎಂ ಕೃಷ್ಣ ಅವರ ಪತ್ನಿಯೊಂದಿಗೆ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಆಗಮಿಸಿ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾತೃ ಸ್ವರೂಪಿ ಚೆನ್ನಮ್ಮ ಅವರ ನಿಧನ ಸುದ್ದಿ ಕೇಳಿ ಆತಂಕ ಆಯ್ತು. ಆರೋಗ್ಯ ಗಂಭೀರ ಎನ್ನುವ ಮಾಹಿತಿ ಇತ್ತು. ಅಪಾರ ದೈವ ಭಕ್ತೆ, ದೊಡ್ಡ ಕುಟುಂಬಕ್ಕೆ ಸುಖ ದುಃಖದಲ್ಲಿ ಇದ್ದು ಸೇವೆ ಮಾಡಿದವರು. ಧೀಮಂತ ಹೆಣ್ಣು ಅವರು ಎಂದರು. ಅನೇಕ ರಾಜಕಾರಣಿಗಳಿಗೆ ಅವರು ಮಾತೃ ಸ್ವರೂಪಿಯಾಗಿದ್ದವರು. ಅವರಿಗೆ ಸರ್ಕಾರಿ ಗೌರವದೊಂದಿದೆ ಅಂತಿಮ ನಮನ ಸಲ್ಲಿಸಲಾಗುತ್ತದೆ. ಸೋಮವಾರ (ಜು.20) ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. ಸರ್ಕಾರದಿಂದ ಎಲ್ಲಾ ರೀತಿ ವ್ಯವಸ್ಥೆ ಮಾಡಲಾಗುತ್ತದೆ.
ಉಸಿರಾಟದ ಸಮಸ್ಯೆಯಿಂದಾಗಿ ಕಳೆದ 3 ದಿನಗಳ ಹಿಂದೆ ಹೆಚ್ಎಎಲ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇವತ್ತು ಸಂಜೆ 4 ಗಂಟೆ 50 ನಿಮಿಷ ಸುಮಾರಿಗೆ ಹೃದಯಸ್ತಂಭನವಾಗಿದ್ದು, ಅವರು ನಿಧನರಾಗಿದ್ದಾರೆ. ಮಾಜಿ ಪ್ರಧಾನಿ ಪತ್ನಿ, ರಾಜಕೀಯ ಕುಟುಂಬದ ಮಹಿಳೆಯಾದ ಅವರು ರಾಜ್ಯದಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ತ್ಯಾಗದ ಸ್ವರೂಪಿಯಾಗಿ ಮಾದರಿಯಾಗಿದ್ದರು. ದೇವೇಗೌಡರ ಯಶಸ್ಸಿನಲ್ಲಿ ಅವರು ಇದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದಿದ್ದಾರೆ. ಇದನ್ನೂ ಓದಿ : ಅಜ್ಜಿ ಚೆನ್ನಮ್ಮ ನಿಧನದ ಸುದ್ದಿ, ಕೇಳಿ ಜೈಲಲ್ಲೇ ಕಣ್ಣೀರಿಟ್ಟ ಮೊಮ್ಮಗ; ಅಜ್ಜಿ ಅಂತ್ಯಕ್ರಿಯೆಗೆ ಬರ್ತಾರಾ ಪ್ರಜ್ವಲ್ ರೇವಣ್ಣ..?
