ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಕಡಿಮೆಯಾಗುತ್ತಿದ್ದಂತೆಯೇ, ಹಳೇ ಮೈಸೂರು ಭಾಗದ ರೈತರು ಹಾಗೂ ಜನರ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಕುಸಿತ ಉಂಟಾಗಿದೆ.
ಕೇವಲ ಕೆಲವು ದಿನಗಳ ಹಿಂದಷ್ಟೇ ಸುರಿದ ಉತ್ತಮ ಮಳೆಯಿಂದಾಗಿ ಡ್ಯಾಂನ ಒಳಹರಿವು 12 ಸಾವಿರ ಕ್ಯೂಸೆಕ್ ಗಡಿ ದಾಟಿತ್ತು. ಆದರೆ ಮಳೆ ದಿಢೀರ್ ಬಿಡುವು ನೀಡಿರುವ ಪರಿಣಾಮ ನಿನ್ನೆ(ಜುಲೈ 13) ಒಳಹರಿವಿನ ಪ್ರಮಾಣ 7,500 ಕ್ಯೂಸೆಕ್ ಗೆ ಇಳಿಕೆಯಾಗಿತ್ತು. ಇಂದು ಈ ಪ್ರಮಾಣ ಮತ್ತಷ್ಟು ಕುಸಿದಿದ್ದು, ಕೇವಲ 3,685 ಕ್ಯೂಸೆಕ್ ನೀರು ಮಾತ್ರ ಜಲಾಶಯಕ್ಕೆ ಹರಿದುಬರುತ್ತಿದೆ.
ಗರಿಷ್ಠ ಮಟ್ಟ 124.80 ಅಡಿ ಇರುವ ಜಲಾಶಯದಲ್ಲಿ ಇಂದು 92.54 ಅಡಿ ನೀರಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಈಗ 17.509 ಟಿಎಂಸಿ ನೀರಿನ ಸಂಗ್ರಹವಾಗಿದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಪ್ರಸ್ತುತ 623 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಕೆಆರ್ಎಸ್ ಜಲಾಶಯದಲ್ಲಿ ಒಟ್ಟು ಸಾಮರ್ಥ್ಯದ ಅರ್ಧಕ್ಕಿಂತಲೂ ಕಡಿಮೆ ನೀರು ಸಂಗ್ರಹವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿರುವ ಈ ಸಂದರ್ಭದಲ್ಲಿ ಒಳಹರಿವು ಕುಸಿದಿರುವುದು ಅನ್ನದಾತರಲ್ಲಿ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕಾವೇರಿಯ ಒಡಲು ತುಂಬಿ ಹರಿಯಬೇಕಾದರೆ, ವರುಣ ದೇವ ಕೃಪೆ ತೋರಿ ಉತ್ತಮ ಮಳೆಯಾಗಬೇಕಿದೆ. ಇದನ್ನೂ ಓದಿ : ಬರ ಸಮೀಕ್ಷೆ ಮಾಡಿಲ್ಲ, ವರದಿ ನೀಡಿಲ್ಲ, ಆದರೂ ಕೇಂದ್ರ ಸರ್ಕಾರದ ಬಳಿ ಬರ ಪರಿಹಾರ – ಪ್ರತಿಪಕ್ಷ ನಾಯಕ ಆರ್.ಅಶೋಕ
