ಬೆಂಗಳೂರು : ಕರ್ನಾಟಕವು ಗೂಂಡಾಗಳ ರಾಜ್ಯವಾಗಿದೆ; ಗೂಂಡಾ ಮುಖ್ಯಮಂತ್ರಿ ಇಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆರೋಪಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ದೇಶದ ಯುವಜನತೆಗೆ ಮೋಸ ಮಾಡುತ್ತಿದ್ದಾರೆಂದು ಆಕ್ಷೇಪಿಸಿ ನಾವು ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಆದರೆ, ಸರಕಾರ ನಮ್ಮೆಲ್ಲರನ್ನು ಬಂಧಿಸಿದ್ದು, ನಾವೆಲ್ಲರೂ ಪೊಲೀಸ್ ಕಸ್ಟಡಿಯಲ್ಲಿದ್ದೇವೆ ಎಂದು ವಿವರಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಚ್ಚು, ಲಾಂಗು, ಮೊಟ್ಟೆಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಶಾಸಕರಾದ ರಾಮಮೂರ್ತಿ, ಅಶ್ವತ್ಥನಾರಾಯಣ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹರೀಶ್ ಅವರಿಗೆ ಹಿಗ್ಗಾಮುಗ್ಗಾ ಮೊಟ್ಟೆಯಿಂದ ಹೊಡೆದಿದ್ದಾರೆ. ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಇದೆಲ್ಲವನ್ನೂ ನೋಡಿದರೆ ಕರ್ನಾಟಕದಲ್ಲಿ ಗೂಂಡಾ ರಾಜ್ಯ ಇರುವುದು ಗೊತ್ತಾಗುತ್ತದೆ ಎಂದು ನುಡಿದರು. ಇವರೆಲ್ಲರೂ ಕೊತ್ವಾಲ್ ಶಿಷ್ಯಂದಿರು. ಡಿ.ಕೆ.ಶಿವಕುಮಾರ್, ಹರಿಪ್ರಸಾದ್ ಅವರು ಕೊತ್ವಾಲ್ ಶಿಷ್ಯರು. ಕರ್ನಾಟಕದಲ್ಲಿ ಕೊತ್ವಾಲ್ ರಾಮಚಂದ್ರನ ಆಡಳಿತ ಇದೆ ಎಂದು ದೂರಿದರು.

ರಾಜ್ಯದಲ್ಲಿ ವಿಪಕ್ಷಗಳಿಗೆ ರಕ್ಷಣೆ ಇದೆಯೇ ಎಂದು ಪ್ರಶ್ನಿಸಿದರು. ಕೊಲೆ ಮಾಡಲು ಬಂದಿದ್ದ ಗ್ಯಾಂಗ್ ಅದು. ಇವರೆಲ್ಲ ಭಯೋತ್ಪಾದಕರು, ಪಾಕಿಸ್ತಾನದ ಏಜೆಂಟರು ಎಂದು ಆರೋಪಿಸಿದರು. ಇದನ್ನು ಖಂಡಿಸಿ ಕಮೀಷನರ್ಗೆ ಮನವಿ ನೀಡುತ್ತೇವೆ. ಕೂಡಲೇ ಗೂಂಡಾ ಕಾಯ್ದೆಯಡಿ ಹಲ್ಲೆಕೋರರನ್ನು ಬಂಧಿಸಲು ಆಗ್ರಹಿಸುವುದಾಗಿ ತಿಳಿಸಿದರು. ನಾವೆಲ್ಲ ಪೊಲೀಸ್ ಸುಪರ್ದಿಯಲ್ಲಿದ್ದು, ನಮ್ಮ ಪ್ರಾಣಕ್ಕೆ ಏನಾದರೂ ಆದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು. ಎಂಎಲ್ಎಗಳು, ಎಂಎಲ್ಸಿಗಳು ಬಂದಿದ್ದು, ನಮಗೇ ರಕ್ಷಣೆ ಇಲ್ಲವಾದರೆ ನಾವು ಯಾರ ರಕ್ಷಣೆ ಕೇಳಬೇಕು ಎಂದು ಕೇಳಿದರು.
ಲಾಂಗ್, ಚಾಕು, ಮೊಟ್ಟೆ ಜೊತೆ ಇದ್ದರು. ಕಾಂಗ್ರೆಸ್ ಕಚೇರಿಯಲ್ಲಿ ಬಾಂಬ್ ಇತ್ತೇ ಎಂಬುದು ತಿಳಿದಿಲ್ಲ ಎಂದು ನುಡಿದರು. ಕಾಂಗ್ರೆಸ್ ಕಚೇರಿ ಗೂಂಡಾಗಳ ಕಚೇರಿಯಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಕಚೇರಿ ಮೇಲೆ ಪೊಲೀಸರು ದಾಳಿ ಮಾಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ : ಮುಂದಿನ ಆದೇಶದವರೆಗೆ ದೆಹಲಿಯ ಮೆಟ್ರೋ ನಿಲ್ದಾಣ ಬಂದ್..!
