ನವದೆಹಲಿ : ದೇಶಾದ್ಯಂತ ಮುಸ್ಲಿಂ ಬಾಂಧವರಲ್ಲಿ ಬಕ್ರೀದ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಅನೇಕ ಗಣ್ಯರು ಶುಭಾಶಯ ತಿಳಿಸಿದ್ದಾರೆ. ಈ ಹಬ್ಬವು ಪ್ರತಿನಿಧಿಸುವ ಸಹೋದರತ್ವ, ತ್ಯಾಗ ಮತ್ತು ಮಾನವೀಯತೆ ಸೇವೆಯ ಮೌಲ್ಯಗಳ ಬಗ್ಗೆ ಗಣ್ಯರು ಬಣ್ಣಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಪ್ರಧಾನಿ ಮೋದಿ ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಬಾಂಧವ್ಯಗಳನ್ನು ಬಲಪಡಿಸುವಲ್ಲಿ ಮತ್ತು ಏಕತೆಯನ್ನು ಬೆಳೆಸುವಲ್ಲಿ ಹಬ್ಬದ ಮಹತ್ವಪೂರ್ಣವಾದದ್ದು ಎಂದು ಮೋದಿ ತಿಳಿಸಿದ್ದಾರೆ. ‘ಈದ್ ಉಲ್-ಅಧಾ ಶುಭಾಶಯಗಳು.., ಈ ಸಂದರ್ಭವು ನಮ್ಮ ಸಮಾಜದಲ್ಲಿ ಸಹೋದರತ್ವ ಮತ್ತು ಸಂತೋಷದ ಮನೋಭಾವವನ್ನು ಹೆಚ್ಚಿಸಲಿ. ಪ್ರತಿಯೊಬ್ಬರ ಯಶಸ್ಸು ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಈದ್ ಅಲ್-ಅಧಾ ಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳಿಗೆ, ವಿಶೇಷವಾಗಿ ಮುಸ್ಲಿಂ ಸಹೋದರ ಸಹೋದರಿಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಹಬ್ಬವು ಸ್ವಯಂ ಶರಣಾಗತಿ, ತ್ಯಾಗ ಮತ್ತು ಭಕ್ತಿಯ ಸಂಕೇತವಾಗಿದೆ. ಈ ಹಬ್ಬವು ಮಾನವೀಯತೆಗೆ, ವಿಶೇಷವಾಗಿ ವಂಚಿತ ವರ್ಗಗಳಿಗೆ ಸೇವೆ ಸಲ್ಲಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ ತಿಳಿಸಿದ್ದಾರೆ.
ಈದ್-ಅಲ್-ಅಧಾ ಹಬ್ಬವು ತ್ಯಾಗ, ನಂಬಿಕೆ, ಕರುಣೆ ಮತ್ತು ಕ್ಷಮೆಯ ಕಾಲಾತೀತ ಸದ್ಗುಣಗಳನ್ನು ಪ್ರತಿಬಿಂಬಿಸುತ್ತದೆ. ಈ ಪವಿತ್ರ ಸಂದರ್ಭವು ಸಹೋದರತ್ವದ ಮನೋಭಾವವನ್ನು ಗಾಢವಾಗಿಸಲು, ಏಕತೆಯ ಬಂಧಗಳನ್ನು ಬಲಪಡಿಸಲು ಮತ್ತು ಶಾಂತಿ, ಸಾಮರಸ್ಯ ಮತ್ತು ಹಂಚಿಕೆಯ ಪ್ರಗತಿಯಲ್ಲಿ ಬೇರೂರಿರುವ ಸಮಾಜಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡಲಿ. ಎಲ್ಲರಿಗೂ ಸಂತೋಷದಾಯಕ ಮತ್ತು ಆಶೀರ್ವಾದದ ಈದ್ ಮುಬಾರಕ್ ಶುಭಾಶಯಗಳು! ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ತ್ಯಾಗ-ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬ ಜಗತ್ತಿನಾದ್ಯಂತ ಆಚರಿಸುವ ಎರಡು ಪ್ರಮುಖ ಇಸ್ಲಾಮಿಕ್ ಹಬ್ಬಗಳಲ್ಲಿ ಒಂದಾಗಿದೆ. ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್ನ ಕೊನೆಯ ತಿಂಗಳಾದ ದುಲ್ ಹಿಜ್ಜಾದ 10 ನೇ ದಿನದಂದು ಆಚರಿಸಲಾಗುವ ಹಬ್ಬವು, ಮೆಕ್ಕಾಗೆ ವಾರ್ಷಿಕ ಹಜ್ ತೀರ್ಥಯಾತ್ರೆಯ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಈ ಹಬ್ಬವು ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹನ ಆಜ್ಞೆಗೆ ವಿಧೇಯರಾಗಿ ತಮ್ಮ ಮಗ ಇಸ್ಮಾಯಿಲ್ನನ್ನು ತ್ಯಾಗ ಮಾಡಲು ಸಿದ್ಧರಿದ್ದ ಸಂದರ್ಭದ ಸ್ಮರಣಾರ್ಥವಾಗಿದೆ.
