ರಾಯಚೂರು : ಜಿಲ್ಲೆಯ ಮಾನ್ವಿಯಲ್ಲಿ ಮಳೆಗಾಗಿ ಪಾದಯಾತ್ರೆ ನಡೆಸಿದ್ದ ವೇಳೆಯೇ ವರುಣ ಅಬ್ಬರಿಸಿದ್ದು, ಖುಷಿಯಲ್ಲಿ ನೂರಾರು ಜನ ರೈತರು ಕುಣಿದು ಕುಪ್ಪಳಿಸಿದರು. ಮಾನ್ವಿಯಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು, ರೈತರು ಮಳೆಗಾಗಿ ಪಾದಯಾತ್ರೆ ಮಾಡಿದ್ದಾರೆ. ಈ ವೇಳೆ ಮಳೆ ಸುರಿದಿದ್ದು, ಕಲಾ ತಂಡದೊಂದಿಗೆ ರೈತರು ಸಂಭ್ರಮಿಸಿದರು.
ಪಟ್ಟಣದ ಮಾರಿಕಾಂಬಾ ದೇವಿ ದೇವಸ್ಥಾನದಿಂದ ನೀರಮಾನ್ವಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವರೆಗೆ ಪಾದಯಾತ್ರೆ ಮಾಡಲಾಯಿತು. ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ವೆಂಕಟಪ್ಪ ನಾಯಕ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಪಾದಯಾತ್ರೆ ಮಧ್ಯದಲ್ಲೇ ಜೋರಾಗಿ ಮಳೆ ಸುರಿದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಆರಂಭದಿಂದ ಬಾರದ ಮಳೆ ಜೋರಾಗಿ ಸುರಿದಿದ್ದಕ್ಕೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಮಳೆಯಲ್ಲೇ ಪಾದಯಾತ್ರೆ ನಡೆಸಿ, ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆ ಕಸರತ್ತು – ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಿಎಂ, ಡಿಸಿಎಂ
