August 25, 2026
kranthikidi.com
ತಾಜಾಸುದ್ದಿರಾಜ್ಯ

ಯುವತಿಯ ವೈದ್ಯಕೀಯ ವೆಚ್ಚ ಭರಿಸಲು ಮುಂದಾದ ರ‍್ಯಾಪಿಡೋ..!

ಬೆಂಗಳೂರು : ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಪ್ರಯಾಣದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಿಂದಾಗಿ ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರಿನ 32 ವರ್ಷದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಅವರ ಹೋರಾಟಕ್ಕೆ ಕೊನೆಗೂ ಭಾಗಶಃ ಯಶಸ್ಸು ಸಿಕ್ಕಿದೆ. ಖಾಸಗಿ ಸಾರಿಗೆ ಆಪ್ ರ‍್ಯಾಪಿಡೋ, ಸಾನಿ ಅವರ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ತನ್ನ ವಿಮಾ ಪಾಲುದಾರರ ಮೂಲಕ ಪಾವತಿಸಲು ಒಪ್ಪಿಕೊಂಡಿದೆ.

ಜೂನ್ 17 ರಂದು ಸಾನಿ ಕೃಷ್ಣ ಅವರು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಮೂಲಕ ಬೈರಸಂದ್ರದಿಂದ ಡೊಮ್ಲೂರ್‌ನಲ್ಲಿರುವ ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ವೇಳೆ ಅವರ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮ ಮುಖದ ಮೂಳೆಗಳು ಮುರಿದು, ಹಲ್ಲುಗಳು ಉದುರಿದ್ದವು ಮತ್ತು 7 ಪಕ್ಕೆಲುಬುಗಳಿಗೆ ತೀವ್ರ ಪೆಟ್ಟಾಗಿತ್ತು. ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದ ಸಾನಿ ಅವರ ಚಿಕಿತ್ಸಾ ವೆಚ್ಚ ಬರೋಬ್ಬರಿ 20 ಲಕ್ಷ ರೂಪಾಯಿ ದಾಟಿತ್ತು.

ಸಾಮಾನ್ಯವಾಗಿ ರ‍್ಯಾಪಿಡೋ ಕಂಪನಿಯ ಗ್ರಾಹಕರ ವಿಮಾ ಪಾಲಿಸಿಯ ಗರಿಷ್ಠ ಮಿತಿ ಕೇವಲ 1 ಲಕ್ಷ ರೂಪಾಯಿ ಆಗಿರುತ್ತದೆ. ಹೀಗಾಗಿ ಆರಂಭದಲ್ಲಿ ಕಂಪನಿಯು ಸಂಪೂರ್ಣ ವೆಚ್ಚ ಭರಿಸಲು ನಿರಾಕರಿಸಿತ್ತು. ಆದರೆ, ಆಗಸ್ಟ್ 6 ರಂದು ಸಾನಿ ಅವರ ಪರ ವಕೀಲರು ರ‍್ಯಾಪಿಡೋ ಸಂಸ್ಥೆಗೆ ಕಾನೂನು ನೋಟಿಸ್ ಕಳುಹಿಸಿ, ಬೇಷರತ್ ಕ್ಷಮೆಯಾಚನೆ ಹಾಗೂ ಸಂಪೂರ್ಣ ಪರಿಹಾರಕ್ಕೆ ಒತ್ತಾಯಿಸಿದ್ದರು.

ಈ ಪ್ರಕರಣದ ತೀವ್ರತೆಯನ್ನು ಅರಿತ ರ‍್ಯಾಪಿಡೋ, ಇದೊಂದು ಅಸಾಮಾನ್ಯ ಮತ್ತು ಅತಿ ಕಠಿಣ ಪರಿಸ್ಥಿತಿಯಾದ್ದರಿಂದ ತನ್ನ ನಿಯಮಿತ ವಿಮಾ ಮಿತಿಯನ್ನು (ಕ್ಯಾಪ್) ಬದಿಗಿಟ್ಟು, ಅಗತ್ಯ ದಾಖಲೆಗಳ ಪರಿಶೀಲನೆಯ ನಂತರ ಸಾನಿ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ.

ಈ ನಿರ್ಧಾರದಿಂದ ಸಾನಿ ಕುಟುಂಬಕ್ಕೆ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ಸಿಕ್ಕಂತಾಗಿದೆ. ಆದಾಗ್ಯೂ, “ರ‍್ಯಾಪಿಡೋ ಸಂಸ್ಥೆಯು ಅಧಿಕೃತವಾಗಿ ಈ ನಿರ್ಧಾರವನ್ನು ನನಗೆ ಇನ್ನು ಲಿಖಿತ ರೂಪದಲ್ಲಿ ತಿಳಿಸಿಲ್ಲ ಹಾಗೂ ಅಪಘಾತದ ಜವಾಬ್ದಾರಿ ಹೊತ್ತು ಈವರೆಗೆ ಕ್ಷಮೆಯಾಚಿಸಿಲ್ಲ. ಅಲ್ಲಿಯವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ” ಎಂದು ಸಾನಿ ಕೃಷ್ಣ ಹೇಳಿದ್ದಾರೆ. ಸದ್ಯ ಬೈಕ್ ಚಾಲಕನ ಪರವಾನಗಿ ಮತ್ತು ಆತನ ನಡವಳಿಕೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ರ‍್ಯಾಪಿಡೋ ತಿಳಿಸಿದೆ. ಇದನ್ನೂ ಓದಿ : ಕೊಡಗಿನಲ್ಲಿ ಮೊಹಮ್ಮದ್‌ ನಲಪಾಡ್‌ ಎರಡನೇ ವಿವಾಹ ಸಂಭ್ರಮ..!

Related posts

ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಜಾರಿ..!

Kalpana Editor

ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗೋವರೆಗೆ ತಮಿಳುನಾಡಿಗೆ ನೀರು ಬಿಡಲ್ಲ – ಸಚಿವ ರಾಮಲಿಂಗಾರೆಡ್ಡಿ

Kalpana Editor

ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ನಟ ರವಿಚಂದ್ರನ್

kknewskannada1987@gmail.com