June 13, 2026
kranthikidi.com
ತಾಜಾಸುದ್ದಿದೇಶ

ಲಕ್ಷ್ಮಿ ಭಂಡಾರ್ ಯೋಜನೆ, 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ – ಸಿಎಂ ಸುವೇಂದು ಘೋಷಣೆ..!

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಹಿಳಾ ಕಲ್ಯಾಣ ಯೋಜನೆಗಳ ಕುರಿತು ಮತ್ತೊಮ್ಮೆ ಭಾರಿ ವಿವಾದ ಸೃಷ್ಟಿಯಾಗಿದೆ. ರಾಜ್ಯದ ಜನಪ್ರಿಯ ‘ಲಕ್ಷ್ಮಿ ಭಂಡಾರ್’ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸುಮಾರು 3 ಮಿಲಿಯನ್ (30 ಲಕ್ಷ) ಫಲಾನುಭವಿಗಳು ಈ ಯೋಜನೆಗೆ ಸಂಪೂರ್ಣ ಅನರ್ಹರಾಗಿದ್ದಾರೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.

ನಬನ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಈ 30 ಲಕ್ಷ ಫಲಾನುಭವಿಗಳು ಭಾರತೀಯ ನಾಗರಿಕರಲ್ಲ ಅಥವಾ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ನಿಯಮಗಳ ಪ್ರಕಾರ ಇವರು ಯೋಜನೆಗೆ ಅರ್ಹರಲ್ಲದಿದ್ದರೂ, ಸೌಲಭ್ಯ ಪಡೆಯುತ್ತಿದ್ದಾರೆ. ಕೆಲವರು ಅಗತ್ಯ ಪೌರತ್ವ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರ ಆರಂಭಿಸಿದ್ದ ‘ಲಕ್ಷ್ಮಿ ಭಂಡಾರ್’ ಯೋಜನೆಗೆ ಪರ್ಯಾಯವಾಗಿ, ಬಿಜೆಪಿಯ ಪ್ರಸ್ತಾವಿತ ಹೊಸ ಯೋಜನೆ ‘ಅನ್ನಪೂರ್ಣ ಭಂಡಾರ್’ ನಮೂನೆಯನ್ನು (ಫಾರ್ಮ್) ಮುಖ್ಯಮಂತ್ರಿ ಪ್ರಸ್ತುತಪಡಿಸಿದರು. ಚುನಾವಣಾ ಭರವಸೆಯಂತೆ ಈ ಹೊಸ ಯೋಜನೆಯಡಿ ಅರ್ಹ ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ರೂ. ರೂಪಾಯಿ ಆರ್ಥಿಕ ಸಹಾಯ ನೀಡಲಾಗುತ್ತದೆ.

ಪ್ರಸ್ತುತ ಇರುವ ಲಕ್ಷ್ಮಿ ಭಂಡಾರ್ ಯೋಜನೆಯಡಿ ಸಾಮಾನ್ಯ ವರ್ಗದ ಮಹಿಳೆಯರಿಗೆ ತಿಂಗಳಿಗೆ 1,500 ರೂ.. ಹಾಗೂ ಎಸ್‌ಸಿ/ಎಸ್‌ಟಿ ವರ್ಗದ ಮಹಿಳೆಯರಿಗೆ 1700 ರೂ. ನೀಡಲಾಗುತ್ತಿದೆ. ಹೊಸ ಯೋಜನೆಗೆ ಸರಿಯಾದ ದಾಖಲೆಗಳಿದ್ದವರು ಮಾತ್ರ ಅರ್ಹರಾಗಿರುತ್ತಾರೆ. ಪೌರತ್ವ ಕಾಯ್ದೆಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿದವರು ಅಥವಾ ವಿಶೇಷ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದವರನ್ನು ಮಾತ್ರ ಅರ್ಹರೆಂದು ಪರಿಗಣಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಅರ್ಜಿ ನಮೂನೆಯ ಮೂಲಕ ಇನ್ನು ಮುಂದೆ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಮಹಿಳಾ ಕಲ್ಯಾಣ ಸಚಿವೆ ಅಗ್ನಿಮಿತ್ರ ಪಾಲ್ ಈ ಪ್ರಕ್ರಿಯೆಯನ್ನು ನೋಡಿಕೊಳ್ಳಲಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಪರಿಶೀಲನಾ ಪ್ರಕ್ರಿಯೆ ಮುಗಿಯಲು ಸಮಯ ತೆಗೆದುಕೊಳ್ಳುವುದರಿಂದ, ಅಲ್ಲಿಯವರೆಗೆ ಸದ್ಯದ ಫಲಾನುಭವಿಗಳಿಗೆ ಹಳೆಯ ಯೋಜನೆಯಡಿ ಹಣಕಾಸಿನ ನೆರವು ಸಿಗುತ್ತಲೇ ಇರಲಿದೆ ಎಂದು ಸರ್ಕಾರ ಭರವಸೆ ನೀಡಿದೆ.

Related posts

ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ..!

Kalpana Editor

ನಿಕೇತ್‌ ಮೌರ್ಯ, ಭಾವನಾ ರಾಮಣ್ಣ ಸೇರಿದಂತೆ, ಕೆಪಿಸಿಸಿ ಪದಾಧಿಕಾರಿಗಳಿಗೆ ಗೇಟ್‌ಪಾಸ್‌ ನೀಡಿದ ಡಿಕೆಶಿ

Kalpana Editor

ಸಿಎಂ ಬದಲಾವಣೆ ಆದ್ರೂ ಒಳ್ಳೆ ಆಡಳಿತ ನಡೆಸ್ತಾರೆ ಅನ್ನೋ ನಂಬಿಕೆ ಉಳಿದಿಲ್ಲ – ಬಿ.ವೈ.ವಿಜಯೇಂದ್ರ

Kalpana Editor