ಕನಕಪುರ : “2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲು ಶಕ್ತಿ ತುಂಬಿ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರು. ಜನತೆಗೆ ಕೃತಜ್ಞತೆ ಸಮರ್ಪಣೆ ನಿಮಿತ್ತ ದೊಡ್ಡಆಲಳ್ಳಿ ಹಾಗೂ ಸಾತನೂರಿನಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ಬಿಜೆಪಿ ಜೆಡಿಎಸ್ ನವರು ಎಷ್ಟೇ ಷಡ್ಯಂತ್ರ ಮಾಡಿದರೂ ನೀವು ಜಗ್ಗಲಿಲ್ಲ, ಬಗ್ಗಲಿಲ್ಲ ನನ್ನ ಬೆಂಬಲಕ್ಕೆ ನಿಂತಿದ್ದೀರಿ. ನಿಮಗೆ ಧನ್ಯವಾದಗಳು” ಎಂದರು.
ನಮಗೆ ಮೋಸ ಮಾಡಿದರೆ ತಮ್ಮ ಆತ್ಮಸಾಕ್ಷಿಗೆ ಮೋಸ ಮಾಡಿಕೊಂಡಂತೆ, “ಎಲ್ಲಾ ಪಕ್ಷದ ಮತದಾರರ ಮತ ಉಳಿಸಿಕೊಳ್ಳಬೇಕು. ಇನ್ನು ಮುಂದೆ ಯಾರೂ ನಮಗೆ ಮೋಸ ಮಾಡುವುದಿಲ್ಲ. ನಮಗೆ ಮೋಸ ಮಾಡಿದರೆ ಅವರು ತಮ್ಮ ಆತ್ಮ ಸಾಕ್ಷಿಗೆ ಮೋಸ ಮಾಡಿಕೊಂಡಂತೆ. ಇಲ್ಲಿವರೆಗೂ ತಪ್ಪು ನಿಮ್ಮದೇ ಆಗಿರಲಿ ಅಥವಾ ಅವರದೇ ಆಗಿರಲಿ ಎಲ್ಲರೂ ರಾಜಿ ಮಾಡಿಕೊಂಡು ಒಟ್ಟಾಗಿ ಕೆಲಸ ಮಾಡಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ರಾಜಕೀಯವಾಗಿ ಪ್ರಕರಣ ಬಂದರೆ ಅವುಗಳನ್ನು ರಾಜಿ ಮಾಡಿ ಕಳಿಸಿ ಎಂದು ಪೊಲೀಸರಿಗೆ ತಿಳಿಸಿರುವೆ. ಇದನ್ನು ಮಾದರಿ ಕ್ಷೇತ್ರ ಮಾಡಬೇಕು. ಇದನ್ನೂ ಓದಿ : ರಾಜ್ಯದಲ್ಲಿ ಮುಂಗಾರು ಅಬ್ಬರ; 19 ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ..!
ಅಧಿಕಾರ ನನ್ನದಲ್ಲ, ಈ ಜನರ ಸ್ವತ್ತು : ಕಬ್ಬಾಳಮ್ಮ ದೇವಾಲಯ ಬಳಿ ಮಾಧ್ಯಮಗಳು, ನಿಮ್ಮ ಕ್ಷೇತ್ರದ ಜನ ಇಂದು ಹಬ್ಬದಂತೆ ನಿಮ್ಮನ್ನು ಸ್ವಾಗತಿಸಿದೆ ಎಂದು ಕೇಳಿದಾಗ, “ಈ ಅಧಿಕಾರ ನನ್ನದಲ್ಲ, ಈ ಜನರ ಸ್ವತ್ತು. ಈ ಜನ ಬೆಂಗಳೂರಿಗೆ ಬಂದು ಭೇಟಿ ಮಾಡಲು ಆಗುವುದಿಲ್ಲ. ಪ್ರಮಾಣ ವಚನ ಕಾರ್ಯಕ್ರಮವನ್ನು ದೊಡ್ಡದಾಗಿ ಮಾಡಿದರೆ ಸಾವಿರಾರು ಬಸ್ ಜನ ಬರುತ್ತಾರೆ ಜನರಿಗೆ ತೊಂದರೆಯಾಗಲಿದೆ ಎಂದು ಸರಳ ಕಾರ್ಯಕ್ರಮ ಮಾಡಿದೆವು.
ಹೀಗಾಗಿ ನಾನೇ ನಮ್ಮ ಜನರನ್ನು ನೋಡಲು ಬಂದಿರುವೆ. ಈ ಕಬ್ಬಾಳಮ್ಮ ದೇವಾಲಯ ಹಾಗೂ ಪ್ರದೇಶ ಈ ಹಿಂದೆ ಹೇಗಿತ್ತು ಈಗ ಹೇಗಾಗಿದೆ ಎಂಬುದೇ ನಮ್ಮ ಸಾಕ್ಷಿಗುಡ್ಡೆ. ಕ್ಷೇತ್ರದಲ್ಲಿ ಪ್ರತಿಹಳ್ಳಿಯಲ್ಲೂ ಸೇರಿದಂತೆ 300ಕ್ಕೂ ಹೆಚ್ಚು ದೇವಾಲಯ ಅಭಿವೃದ್ಧಿ ಮಾಡಿದ್ದೇವೆ. ಎಲ್ಲಾ ವರ್ಗದ ಜನ ನನಗೆ ಸತತವಾಗಿ ಆಶೀರ್ವಾದ ಮಾಡಿದ್ದು, ಜನರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ” ಎಂದು ತಿಳಿಸಿದರು.
