ಹಾವೇರಿ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ದೌರ್ಜನ್ಯ ಪದೇಪದೇ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆಯ ರೆಟ್ಟಿಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಹತ್ಯೆಯಾದ ಶಿವಾಜಿ ರಾವ್ ಬೈರೋಜಿ ಅವರ ಮನೆಗೆ ಇಂದು ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಹಾವೇರಿ ಜಿಲ್ಲೆಯಲ್ಲೇ ಕಳೆದ ವಾರ ನರೇಗಲ್ನಲ್ಲಿ ಲೋಹಿತ್ ಕುರುಬರ ಮತ್ತು ಅವರ ಸಂಗಡಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹೋರಿ ಬೆದರಿಸಲು ಪಟಾಕಿ ಹೊಡೆದರೆಂಬ ಕಾರಣ ಮುಂದಿಟ್ಟುಕೊಂಡು ಹಲ್ಲೆ ಮಾಡಿದ್ದರು. ಈಗ ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು.
ಕೊಲೆ ಹಿಂದೆ ವ್ಯವಸ್ಥಿತ ಷಡ್ಯಂತ್ರ – ಶಿವಾಜಿ ರಾವ್ ಅವರು ಕಳೆದ 60 ವರ್ಷಗಳಿಂದ ಪೆಟ್ಟಿಗೆ ಅಂಗಡಿ ನಡೆಸಿಕೊಂಡು ಬರುತ್ತಿದ್ದರು. 100 ರೂ. ಕೊಟ್ಟು 500 ರೂ. ಕೊಟ್ಟಿದ್ದಾಗಿ ಹೇಳಿ ಜಗಳ ಮಾಡಿ ಶಿವಾಜಿ ರಾವ್ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದು ಇದು ವೈಯಕ್ತಿಕ ಘಟನೆ ಅಲ್ಲ ಎಂದು ತಿಳಿಸಿದರು. ಕೊಲೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂದು ಆಕ್ಷೇಪಿಸಿದರು. ಹಿಂದೆ ಅವರ ಅಂಗಡಿಗೆ ಬಂದು ಮೂರ್ನಾಲ್ಕು ಬಾರಿ ಇಂಥ ಘಟನೆ ನಡೆದಿದೆ ಎಂದು ವಿವರಿಸಿದರು.
ಸಚಿವರ ಭೇಟಿ ಇಲ್ಲ- ಆಕ್ಷೇಪ – ಅಮಾಯಕ ಪ್ರಾಣ ಕಳಕೊಂಡ ಗಂಭೀರ ಘಟನೆ ನಡೆದಿದೆ. ಯಾವುದೇ ಸಚಿವರು ನರೇಗಲ್ಗೆ ಭೇಟಿ ಕೊಟ್ಟು ಆ ಕುಟುಂಬವನ್ನು ಮಾತನಾಡಿಸಿಲ್ಲ; ಇಲ್ಲೂ ಕೂಡ ಬಡ ಕುಟುಂಬವನ್ನು ವಿಚಾರಿಸುವ ಗೋಜಿಗೆ ಕಾಂಗ್ರೆಸ್ ಸರಕಾರ ಹೋಗಿಲ್ಲ ಎಂದು ಟೀಕಿಸಿದರು. ಇದು ನರಸತ್ತ ಕಾಂಗ್ರೆಸ್ ಸರಕಾರ ಎಂದು ದೂರಿದರು. ಕಾಂಗ್ರೆಸ್ ಸರಕಾರ ಆರೋಪಿಗಳನ್ನು ಜೈಲಿಗೆ ಹಾಕಿ ಬಿರಿಯಾನಿ ತಿನ್ನಿಸುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಓಲೈಕೆ ರಾಜಕಾರಣವೇ ಕಾರಣ – ಯಲ್ಲಾಪುರದಲ್ಲಿ ಲವ್ ಜಿಹಾದ್ ಕಾರಣಕ್ಕೆ ದಲಿತ ಮಹಿಳೆಯ ಬರ್ಬರ ಹತ್ಯೆ ಆಗಿದೆ. ಅಲ್ಲಿಯೂ ಯಾವನೇ ಸಚಿವ ಹೋಗಿಲ್ಲ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಎಲ್ಲಿಗೆ ಬಂದು ಮುಟ್ಟಿದೆ ಎಂದರೆ, ಇದರಿಂದ ಇಂಥ ಮತೀಯ ಶಕ್ತಿಗಳಿಗೆ ಧೈರ್ಯ ಬಂದಿದೆ ಎಂದು ದೂರಿದರು. ಪ್ರಿಯಾಂಕ್ ಖರ್ಗೆಯವರು ಅಮೆರಿಕ, ರಷ್ಯಾ ಬಗ್ಗೆ ಮಾತನಾಡುತ್ತಾರೆ.
ತಾಕತ್ತಿದ್ದರೆ ಇಂಥ ಘಟನೆಗಳಿಗೆ ಕಾರಣಕರ್ತರನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡಿ ಎಂದು ಸವಾಲು ಹಾಕಿದರು. ಮೃತರ ಮಗನಿಗೂ ಬೆದರಿಕೆ ಇದೆ. ಅವರಿಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು. ತಂಗಿಗೆ ಸರಕಾರಿ ನೌಕರಿ ಕೊಡಬೇಕು. ಕುಟುಂಬಕ್ಕೆ ಪರಿಹಾರವನ್ನೂ ನೀಡಬೇಕು ಎಂದು ಆಗ್ರಹಿಸಿದರು. ಸರಕಾರ, ಸಿಎಂ, ಸಚಿವರಿಗೆ ಪುರುಸೊತ್ತಿಲ್ಲ ಎಂದು ಟೀಕಿಸಿದರು. ರಾಜ್ಯ ಸರಕಾರ ಎಚ್ಚತ್ತುಕೊಳ್ಳಲಿ ಎಂದು ಒತ್ತಾಯಿಸಿದರು.
ಪುನೀತ್ ಕೆರೆಹಳ್ಳಿ ಬಂಧನಕ್ಕೆ ಆಕ್ಷೇಪ – ಗೋರಕ್ಷಣೆ ಮಾಡುವ ಪ್ರಾಮಾಣಿಕ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಕೊಲೆ ಬೆದರಿಕೆ ಹಾಕಿದವರನ್ನು ಬಂಧಿಸುವುದಿಲ್ಲ. ಬದಲಾಗಿ ಹಾದೀಲಿ ಬೀದಿಯಲ್ಲಿ ಹೋಗುವವರು ದೂರು ನೀಡಿದರೆ ಸುಳ್ಳು ಮೊಕದ್ದಮೆ ದಾಖಲಿಸಿ ಪುನೀತ್ ಕೆರೆಹಳ್ಳಿಯನ್ನು ಮತ್ತೆ ಬಂಧಿಸಿದ್ದಾರೆ. ಕಾಂಗ್ರೆಸ್ ಸರಕಾರ ಪದೇಪದೇ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇವರ ಅಲ್ಪಸಂಖ್ಯಾತರ ಓಲೈಕೆ ರಾಜಕೀಯದಿಂದ ಮತೀಯ ಶಕ್ತಿಗಳಿಗೆ ಧೈರ್ಯ ಬಂದಿದೆ ಎಂದರಲ್ಲದೇ, 16ರಂದು ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದಾರೆ. ನಿಮ್ಮ ಪಾಪದ ಕೊಡ ತುಂಬಿದೆ. ನೀವು ಗ್ಯಾರಂಟಿಗಳ ಭ್ರಮೆಯಲ್ಲಿ ಇದ್ದೀರಿ; ಕಾಂಗ್ರೆಸ್ ಸರಕಾರ ಹಿಂದೂಗಳ ಜೀವ ತೆಗೆಯುತ್ತಿದೆ ಎಂದು ಟೀಕಿಸಿದರು.
ಸರಕಾರದ ಹೊಣೆಗೇಡಿತನವೇ ಕಾರಣ – ನೀವು ಕೇವಲ ಅಲ್ಪಸಂಖ್ಯಾತರ ಮತ ಪಡೆದು ಅಧಿಕಾರಕ್ಕೆ ಬಂದಿಲ್ಲ; ಹಿಂದೂಗಳೂ ನಿಮಗೆ ಮತ ಹಾಕಿದ್ದಾರೆ. ಮುಖ್ಯಮಂತ್ರಿಗಳು ಬೂಟಾಟಿಕೆ ಬಿಟ್ಟು ಹಿಂದೂಗಳಿಗೆ ರಕ್ಷಣೆ ಕೊಡಬೇಕೆಂದು ಆಗ್ರಹಿಸಿದರು. ಹಿಂದೂಗಳ ಹತ್ಯೆ, ಹಲ್ಲೆಗಳಿಗೆ ಕಾಂಗ್ರೆಸ್ ಸರಕಾರದ ಹೊಣೆಗೇಡಿತನವೇ ಕಾರಣ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಇದನ್ನೂ ಓದಿ : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ; ಬಸವರಾಜ ಬೊಮ್ಮಾಯಿ ಆಕ್ರೋಶ..!
