August 1, 2026
kranthikidi.com
ತಾಜಾಸುದ್ದಿಸಿನಿಮಾ

ಬಾಲಿವುಡ್ ನಟಿ ಜಾಕ್ವೆಲಿನ್​​ ಕೋರಿಕೆಗೆ ನೋ ಎಂದ ಕೋರ್ಟ್​; ಹೆಚ್ಚಿತು ಸಂಕಷ್ಟ..!

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಮೇ 30ರಂದು ದೆಹಲಿ ನ್ಯಾಯಾಲಯವು ಜಾಕ್ವೆಲಿನ್, ವಂಚಕ ಸುಕೇಶ್ ಚಂದ್ರಶೇಖರ್ ಮತ್ತು ಇತರ 15 ಜನರ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಹೊರಿಸಲು ಆದೇಶಿಸಿದೆ. ಇದರೊಂದಿಗೆ ನಟಿ ಕೂಡ ವಿಚಾರಣೆಗೆ ಹಾಜರಾಬೇಕಾಗದ ಪರಿಸ್ಥಿತಿ ಎದುರಾಗಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು, ‘ಎಲ್ಲಾ ಆರೋಪಿಗಳ ವಿರುದ್ಧ ಬಲವಾದ ಅನುಮಾನ ಮೂಡುವಂತಹ ಸಾಕ್ಷಿಗಳು ತನಿಖಾ ವರದಿಯಲ್ಲಿ ಲಭ್ಯವಿವೆ’ ಎಂದು ತಿಳಿಸಿದ್ದು, ಜೂನ್ 3 ರಂದು ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದ್ದಾರೆ. ತಾನು ಯಾವುದೇ ತಪ್ಪು ಮಾಡಿಲ್ಲ, ಈ ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಜಾಕ್ವೆಲಿನ್ ಅವರ ಮುಖ್ಯ ವಾದವನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಬಾರದು ಎಂಬ ಜಾಕ್ವೆಲಿನ್ ಕೋರಿಕೆಯನ್ನು ಕೋರ್ಟ್ ಒಪ್ಪಿಲ್ಲ ಎನ್ನಲಾಗಿದೆ.

ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ನಿರಂತರ ಸಂಪರ್ಕದಲ್ಲಿದ್ದರು. ಸುಕೇಶ್‌ನ ಅಪರಾಧ ಹಿನ್ನೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಜಾಕ್ವೆಲಿನ್ ಆತನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಗಿಫ್ಟ್‌ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಸುಕೇಶ್‌ನಿಂದ ತಮ್ಮ ಸಹೋದರನಿಗೆ ದೊಡ್ಡ ಮೊತ್ತದ ಹಣಕಾಸಿನ ನೆರವು ಮತ್ತು ಪೋಷಕರಿಗೆ ಐಷಾರಾಮಿ ಕಾರನ್ನು ಉಡುಗರೆಯಾಗಿ ಪಡೆದಿದ್ದರು. ‘ಅಪರಾಧದ ಮೂಲಕ ಗಳಿಸಿದ ಹಣದ ನೇರ ಲಾಭವನ್ನು ಜಾಕ್ವೆಲಿನ್ ಪಡೆದುಕೊಂಡಿರುವುದು ಸ್ಪಷ್ಟವಾಗಿದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ತಾವು ಅಪ್ರೂವರ್ ಆಗೋದಾಗಿ ಏಪ್ರಿಲ್ 16ರಂದು ಜಾಕ್ವೆಲಿನ್ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಕೋರ್ಟ್ ಅನುಮತಿ ನೀಡಿದೆ. ಜಾರಿ ನಿರ್ದೇಶನಾಲಯ ಈ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿತ್ತು. ಮುಖ್ಯ ಆರೋಪಿಯೊಂದಿಗೆ ನೇರ ಸಂಪರ್ಕದಲ್ಲಿದ್ದ ಜಾಕ್ವೆಲಿನ್‌ಗೆ ಇಂತಹ ಅವಕಾಶ ನೀಡಬಾರದು ಎಂದು ಇಡಿ ವಾದಿಸಿತ್ತು.

ಈ ಹಗರಣದ ಸೂತ್ರಧಾರ ಸುಕೇಶ್ ಚಂದ್ರಶೇಖರ್‌. ಈತನ್ನು ದೆಹಲಿ ಪೊಲೀಸರು 2017 ರಲ್ಲಿ ಮತ್ತು ಇಡಿ 2021 ರಲ್ಲಿ ಬಂಧಿಸಿದ್ದರು. ಸುಕೇಶ್ ಜೈಲಿನಲ್ಲಿದ್ದೂಕೊಂಡೇ ತಂತ್ರಜ್ಞಾನದ ಸಹಾಯದಿಂದ ಪ್ರಧಾನಿ ಕಚೇರಿ , ಗೃಹ ಸಚಿವಾಲಯ ಹಾಗೂ ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಕರೆಗಳನ್ನು ಮಾಡಿದ್ದನು. ಈ ಮೂಲಕ ಉದ್ಯಮಿ ಪತ್ನಿ ಅದಿತಿ ಸಿಂಗ್ ಎಂಬುವವರನ್ನು ಹೆದರಿಸಿ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದನು. ಇದೇ ಹಣದಲ್ಲಿ ಕೋಟ್ಯಂತರ ರೂಪಾಯಿಯನ್ನು ಜಾಕ್ವೆಲಿನ್ ಮತ್ತು ಅವರ ಕುಟುಂಬದವರ ಮೇಲೆ ಖರ್ಚು ಮಾಡಲಾಗಿತ್ತು.

Related posts

ಪ್ಯಾರಾಮೆಡಿಕಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ – ನಾಲ್ವರು ಬಂಧನ..!

Kalpana Editor

ಲಾಡ್ಜ್‌ನಲ್ಲಿ ಕ್ರಷರ್ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ..!

Kalpana Editor

ಐಟಿಐ, 10ನೇ ತರಗತಿ ಪಾಸ್ ಆದವರಿಗೆ ರಕ್ಷಣಾ ಇಲಾಖೆಯಲ್ಲಿ ಉದ್ಯೋಗ..!

Kalpana Editor