26.4 C
ಬೆಂಗಳೂರು
August 3, 2026
kranthikidi.com
ಕ್ರೀಡೆತಾಜಾಸುದ್ದಿ

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಧಿಕೃತ ತೆರೆ; ಭಾರತಕ್ಕೆ ಧ್ವಜ ಹಸ್ತಾಂತರ..!

ಗ್ಲ್ಯಾಸ್ಗೋ : ಸ್ಕಾಟ್‌ಲ್ಯಾಂಡ್‌ ಆಯೋಜಿಸಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಧಿಕೃತ ತೆರೆ ಬಿದ್ದಿದೆ. ಸ್ಥಳೀಯ ಕಾಲಮಾನ ರಾತ್ರಿ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಗೇಮ್ಸ್‌ ಮುಕ್ತಾಯಗೊಂಡಿತು. ಈ ವೇಳೆ ಶತಮಾನೋತ್ಸವದ ಆವೃತ್ತಿಯ ಆತಿಥ್ಯ ವಹಿಸಲಿರುವ ಭಾರತಕ್ಕೆ ಧ್ವಜ ಮತ್ತು ಬ್ಯಾಟನ್ ಹಸ್ತಾಂತರಿಸಲಾಯಿತು.

2030ರ ಕಾಮನ್‌ವೆಲ್ತ್ ಕ್ರೀಡಾಕೂಟವು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಸ್ಕಾಟ್‌ಲ್ಯಾಂಡ್ ಅಧಿಕಾರಿಗಳು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ ಅಧ್ಯಕ್ಷೆ ಪಿ.ಟಿ. ಉಷಾ ಮತ್ತು ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಅವರನ್ನೊಳಗೊಂಡ ಭಾರತೀಯ ಪ್ರತಿನಿಧಿಗಳಿಗೆ ಸಿಡಬ್ಲ್ಯೂಜಿ ಧ್ವಜ ಮತ್ತು ಬ್ಯಾಟನ್ ಹಸ್ತಾಂತರಿಸಿದರು.

ಸಮಾರೋಪ ಸಮಾರಂಭವು ಸ್ಕಾಟ್‌ಲ್ಯಾಂಡ್‌ ಸಂಸ್ಕೃತಿಯ ಪ್ರದರ್ಶನದೊಂದಿಗೆ ಪ್ರಾರಂಭವಾಗಿ ನಂತರ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪ್ರಾಚೀನ ಪರಂಪರೆಯನ್ನು ಪ್ರದರ್ಶಿಸುವ ರೋಮಾಂಚಕ ಕಾರ್ಯಕ್ರಮವಾಗಿ ಬದಲಾಯಿತು. ಎರಡೂ ದೇಶಗಳ ಸಂಗೀತಗಾರರು ಮತ್ತು ನೃತ್ಯಗಾರರು ‘ಜುಗಲ್ಬಂದಿ’ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಕ್ರೀಡಾಪಟುಗಳ ಪರೇಡ್‌ನಲ್ಲಿ ಭಾರತದ ಚಿನ್ನದ ಪದಕ ವಿಜೇತ ಬಾಕ್ಸರ್ ಜೈಸ್ಮಿನ್ ಲಂಬೋರಿಯಾ ಅವರು ಭಾರತದ ಧ್ವಜಧಾರಿಯಾಗಿ ಭಾಗವಹಿಸಿದ್ದರು. ಒವಿಒ ಹೈಡ್ರೋ ಕ್ರೀಡಾಂಗಣದಲ್ಲಿ ಭಾರತ ಮತ್ತು ಸ್ಕಾಟ್‌ಲ್ಯಾಂಡ್ ಸಂಗೀತದ ಸಂಗಮ ಕಂಡುಬಂತು ಎನ್ನಲಾಗಿದೆ. ಈ ಸಮಾರಂಭದಲ್ಲಿ ಭಾರತದ ಖ್ಯಾತ ಗಾಯಕ ಶಂಕರ್ ಮಹಾದೇವನ್ ಮತ್ತು ಅವರ ಪುತ್ರರು ‘ಏ ವತನ್’, ‘ಭಾಗ್ ಮಿಲ್ಖಾ ಭಾಗ್’, ‘ಲೇಹ್ರಾ ದೋ’ ಹಾಗೂ ‘ಸಬ್ಸೇ ಆಗೆ ಹೋಂಗೆ ಹಿಂದುಸ್ತಾನಿ’ ಮುಂತಾದ ಜನಪ್ರಿಯ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ತನ್ಮಯಗೊಳಿಸಿದರು.

2026ರ ಕ್ರೀಡಾಕೂಟದಲ್ಲಿ ಭಾರತವು 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚು ಸೇರಿದಂತೆ ಒಟ್ಟು 39 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ 4ನೇ ಸ್ಥಾನದೊಂದಿಗೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿದೆ. 2010ರಲ್ಲಿ ನವದೆಹಲಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದ ಭಾರತ, ಇದೀಗ ಆಸ್ಟ್ರೇಲಿಯಾದ ನಂತರ ಬಹುಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವ ವಿಶ್ವದ ಎರಡನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಇದನ್ನೂ ಓದಿ : ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿ; ಉಕ್ಕಡಗಾತ್ರಿ ದೇವಸ್ಥಾನ ಮುಳುಗಡೆ..!

Related posts

ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದ ಸಾವು..!

Kalpana Editor

ತಡರಾತ್ರಿವರೆಗೆ ಸಚಿವ ಕೃಷ್ಣಬೈರೇಗೌಡ ಸಿಟಿ ರೌಂಡ್ಸ್ – ಅಧಿಕಾರಿಗಳಿಗೆ ಫುಲ್‌ ಕ್ಲಾಸ್‌..!

Kalpana Editor

ಒಬೆಸಿಟಿ ಮತ್ತು ಡಯಾಬಿಟಿಸ್ ಸಮಸ್ಯೆ ತಡೆಯಲು ಸಿಂಪಲ್ ಟಿಪ್ಸ್..!

Kalpana Editor