ನವದೆಹಲಿ : ಪ್ರತಿಪಕ್ಷಗಳ ತೀವ್ರ ಗದ್ದಲ, ಗಲಾಟೆ ಮತ್ತು ನಿರಂತರ ಪ್ರತಿಭಟನೆಗಳ ನಡುವೆಯೇ ಲೋಕಸಭೆಯ ಮುಂಗಾರು ಅಧಿವೇಶನವು ಅಂತಿಮ ದಿನವಾದ ಇಂದು ‘ವಂದೇ ಮಾತರಂ’ ಗೀತೆಯೊಂದಿಗೆ ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿದೆ. ನೀಟ್ ಪ್ರತಿಭಟನೆ ವೇಳೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆಯಲ್ಲಿ ಅಮಿತ್ ಶಾ ಉತ್ತರ ನೀಡುವುದಾಗಿ ಹೇಳಿದ್ದರಿಂದ ಇಂದು ಉತ್ತಮ ಚರ್ಚೆ ನಡೆಯಬಹುದು ಎಂಬ ನಿರೀಕ್ಷೆ ಇತ್ತು. ಮುಂಗಾರು ಅಧಿವೇಶನ ನಡೆಯುತ್ತಿದ್ದಾಗ ಸದನದಲ್ಲಿ ಕಾಣಿಸಿಕೊಳ್ಳದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇಂದು ಆಗಮಿಸಿದ್ದರು.
ಸ್ಪೀಕರ್ ಬರುವ ಮೊದಲೇ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು. ಸ್ಪೀಕರ್ ಓಂ ಬಿರ್ಲಾ ತಮ್ಮ ಸೀಟಿನಲ್ಲಿ ಕುಳಿತುಕೊಂಡ ಬಳಿಕ ರಾಷ್ಟ್ರಗೀತೆ ವಂದೇ ಮಾತರಂ ಮೊಳಗಲಿದೆ. ಸದಸ್ಯರು ಎದ್ದು ನಿಲ್ಲುವಂತೆ ಸೂಚಿಸಿದರು. ವಂದೇ ಮಾತರಂ ಮುಕ್ತಾಯವಾದ ಕೂಡಲೇ ಮತ್ತೆ ವಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಗದ್ದಲ ನಡೆಯುತ್ತಿದ್ದಂತೆ ಓಂ ಬಿರ್ಲಾ ಯಾವುದೇ ಹೇಳಿಕೆ ನೀಡದೇ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಅಧಿವೇಶನದ ಉದ್ದಕ್ಕೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆದ ಕಾದಾಟ ಸಂಸತ್ತಿನ ಒಳಗೆ ಹಾಗೂ ಹೊರಗೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಸಂಸತ್ ಭವನದ ಆವರಣದ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ಬಿಜೆಪಿ ಹಾಗೂ ಇಂಡಿಯಾ ಒಕ್ಕೂಟದ ಸಂಸದರ ನಡುವೆ ಭಾರಿ ಮುಖಾಮುಖಿ ಮತ್ತು ಪ್ರತಿಯೊಬ್ಬರ ವಿರುದ್ಧ ಪ್ರತಿಭಟನೆಗಳು ನಡೆದಿತ್ತು. ಕಲಾಪ ಆರಂಭಕ್ಕೂ ಮೊದಲು ಜಾರ್ಖಂಡ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವಿಷಯವಾಗಿ ಕಾಂಗ್ರೆಸ್ ಪಕ್ಷ ಮೌನ ವಹಿಸಿದೆ ಎಂದು ಆರೋಪಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದರು ಮಕರ ದ್ವಾರದ ಬಳಿ ಧರಣಿ ನಡೆಸಿದರು.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಪವನ್ ಖೇರಾ ನೇತೃತ್ವದಲ್ಲಿ ವಿಪಕ್ಷ ಸಂಸದರು ಆಟಿಕೆ ಕೋತಿಯನ್ನು ಹಿಡಿದು, 56 ಇಂಚಿನ ಸಣ್ಣ ಕೋತಿಯೇ, ಬೇಗ ಸದನದೊಳಗೆ ಬಾ” ಎಂದು ಪ್ರಧಾನಿ ವಿರುದ್ಧಘೋಷಣೆಗಳನ್ನು ಕೂಗಿ ಲೇವಡಿ ಮಾಡಿದರು. ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ಗಢಿ ಮಾತನಾಡಿ, ಆಡಳಿತ ಪಕ್ಷವೇ ಸಂಸತ್ ಕಲಾಪ ನಡೆಯದಂತೆ ತಡೆಯುತ್ತಿದೆ. ಗೃಹ ಸಚಿವರು ಬಂದು ಹೇಳಿಕೆ ನೀಡಲಿ, ಪ್ರಧಾನಿ ಬಂದು ಉತ್ತರಿಸಲಿ ಎನ್ನುವುದು ವಿಪಕ್ಷಗಳ ಸಹಜ ಬೇಡಿಕೆ. ಆದರೆ ಆಡಳಿತ ಪಕ್ಷದವರು ರಾಹುಲ್ ಗಾಂಧಿ ಬಂದು ಮಾತನಾಡಲಿ ಎನ್ನುತ್ತಾರೆ. ರಾಹುಲ್ ಗಾಂಧಿಯವರು ಪ್ರತಿದಿನ ಸದನಕ್ಕೆ ಆಗಮಿಸುತ್ತಿದ್ದಾರೆ.
ಪರೀಕ್ಷಾ ಅಕ್ರಮ ವಿಧೇಯಕ ಚರ್ಚೆ ವೇಳೆ ಗೃಹ ಸಚಿವರಾಗಲಿ ಅಥವಾ ಪ್ರಧಾನಿಯವರಾಗಲಿ ಏಕೆ ಬರಲಿಲ್ಲ? ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ದೂರಿದರು. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ , ಲೋಕಸಭೆಯು ಚರ್ಚೆ ನಡೆಸುವ ಪವಿತ್ರ ವೇದಿಕೆಯಾಗಿದೆ. ಆದರೆ ವಿಪಕ್ಷಗಳು ಯಾವುದನ್ನೂ ಕೇಳಿಸಿಕೊಳ್ಳಲು ಸಿದ್ಧವಿಲ್ಲ. ಚರ್ಚೆಯೇ ಇಲ್ಲದೆ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಸಂಸತ್ತು ಯಾರೊಬ್ಬರ ವೈಯಕ್ತಿಕ ಇಚ್ಛೆಯಂತೆ ನಡೆಯುವುದಿಲ್ಲ, ಇದು ಇಡೀ ದೇಶದ ಪ್ರತಿನಿಧಿಗಳ ವೇದಿಕೆ ಎಂದು ಹೇಳಿ ಕಾಂಗ್ರೆಸ್ ನಡೆಯನ್ನು ಟೀಕಿಸಿದರು. ಇದನ್ನೂ ಓದಿ : ಇಂದಿನಿಂದ ಮುಂಗಾರು ಅಧಿವೇಶನ; ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ-ಜೆಡಿಎಸ್ ತಂತ್ರಗಾರಿಕೆ..!
