August 26, 2026
kranthikidi.com
ತಾಜಾಸುದ್ದಿರಾಜ್ಯ

ಬೆಂಗಳೂರಿಗೆ 5 ಪ್ರತ್ಯೇಕ ಪೊಲೀಸ್‌ ಕಮಿಷನರೇಟ್ – ಸಿಎಂ ಡಿಕೆಶಿ ಮಹತ್ವದ ಘೋಷಣೆ..!

ಬೆಂಗಳೂರು : ಸಿಎಂ ಡಿಕೆ ಶಿವಕುಮಾರ್‌ ಅವರು ಬೆಂಗಳೂರಿಗೆ 5 ಪ್ರತ್ಯೇಕ ಪೊಲೀಸ್‌ ಕಮಿಷನರೇಟ್ ಹುದ್ದೆಗಳನ್ನ ಘೋಷಣೆ ಮಾಡಿದ್ದಾರೆ. ಮಾಣೆಕ್‌ ಶಾ ಮೈದಾನದಲ್ಲಿಂದು ನಡೆದ 80ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಅವರು ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಾಡಿನ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿಗೆ 5 ಪ್ರತ್ಯೇಕ ಕಮಿಷನರೇಟ್‌ ಹುದ್ದೆಗಳನ್ನು ಘೋಷಿಸಿದರು.

ಬೆಂಗಳೂರಿಗೆ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಕಮಿಷನರೇಟ್‌ ಮಾಡಲಾಗಿತ್ತು. ಈಗ ಅದನ್ನ ವಿಂಗಡಿಸಿ, ಅಗತ್ಯ ಇರುವ ಕಡೆ ಹೊಸ ಪೊಲೀಸ್‌ ಠಾಣೆಗಳನ್ನ ಸ್ಥಾಪಿಸಿ, ಕಾನೂನು ಸುವ್ಯವಸ್ಥೆಯನ್ನ ಇನ್ನಷ್ಟು ಉತ್ತಮವಾಗಿ ನೋಡಿಕೊಳ್ಳಲು ಸಾಧ್ಯವಾಗುವಂತೆ ಕಾರ್ಯಕ್ರಮ ರೂಪಿಸಿದ್ದೇವೆ. ಜೊತೆಗೆ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ಕೊಡಲು ಜಿಬಿಎ, ಟ್ರಾಫಿಕ್‌ ಪೊಲೀಸ್‌ ಠಾಣೆ ವತಿಯಿಂದ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ತಿಳಿಸಿದರು.

ಯಾವುದೇ ಹೆಣ್ಣುಮಗು ಭಯಮುಕ್ತವಾಗಿ ಸಂಚಾರ ಮಾಡಲು ಭಯಮುಕ್ತ ವಾತಾವರಣ ನಿರ್ಮಿಸಲು ಬೆಂಗಳೂರಿಗೆ ಪ್ರತ್ಯೇಕ ರೌಡಿ ನಿಗ್ರಹ ದಳ (ಆ್ಯಂಟಿ ರೌಡಿ ಸ್ಕ್ವಾಡ್) ರಚನೆ ಮಾಡಲಾಗುವುದು ಎಂದು ತಿಳಿಸಿದರು. ಬೆಂಗಳೂರಿಗೆ 1.50 ಲಕ್ಷ ಕೋಟಿ ರೂ. ವೆಚ್ಚದ ಮೂಲಸೌಕರ್ಯ, 26,000 ಕೋಟಿ ರೂ. ವೆಚ್ಚದ 117 ಕಿ.ಮೀ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’, ಲಾಲ್‌ಬಾಗ್ ಮಾದರಿಯ 5 ಬೃಹತ್ ಟ್ರೀ ಪಾರ್ಕ್‌ಗಳು ಹಾಗೂ 7 ಕೆರೆಗಳ ಪುನಃಶ್ಚೇತನ ಕೈಗೆತ್ತಿಕೊಳ್ಳಲಾಗಿದೆ.

ದೊಡ್ಡಬಳ್ಳಾಪುರದಲ್ಲಿ 20,000 ಕೋಟಿ ರೂ. ವೆಚ್ಚದ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್, ‘ಬಿಯಾಂಡ್ ಬೆಂಗಳೂರು’ ಅಡಿ 5 ಜಿಲ್ಲೆಗಳಲ್ಲಿ ಗ್ಲೋಬಲ್ ಟೆಕ್ ಸೆಂಟರ್‌ಗಳು ಮತ್ತು ‘ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ’ ಸ್ಥಾಪಿಸಲಾಗುತ್ತಿದೆ. ರಾಜ್ಯದ ಪ್ರತಿಯೊಂದು ಪಟ್ಟಣ ಹಾಗೂ ನಗರದ ಪ್ರಗತಿಗೆ ರಿಂಗ್‌ ರೋಡ್ ಹಾಗೂ ಮೊಬಿಲಿಟಿ ಗ್ರಿಡ್‌ ಗಳನ್ನು ನಗರ ಯೋಜನೆಯ ಮೂಲಕ ಜಾರಿಗೆ ತರಲಾಗುವುದು ಎಂದು ಘೋಷಣೆ ಮಾಡಿದರು.

ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಖಾಸಗಿ ಉದ್ಯೋಗಕ್ಕಾಗಿ ʻಯುವ ಉದ್ಯೋಗ ಸೇತುʼ ಹಾಗೂ ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗಗಳಿಗೆ ಮಾಸಿಕ 2,500 ರೂ. ಪ್ರೋತ್ಸಾಹಧನ ನೀಡುವ ʻಉದ್ಯೋಗ ನಿಧಿʼ ಘೋಷಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 6ನೇ ತರಗತಿಯಿಂದಲೇ AI ಶಿಕ್ಷಣ, ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ, ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ.7.5 ವಿಶೇಷ ಮೀಸಲಾತಿ ಹಾಗೂ 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ವಿವರಿಸಿದರು.

ರೈತರಿಗಾಗಿ ಡ್ರೋನ್ ಆಧಾರಿತ ಬೆಳೆ ಸಮೀಕ್ಷೆಯ ʻಮುಖ್ಯಮಂತ್ರಿ ರೈತ ಚೈತನ್ಯʼ ಮತ್ತು ಸಣ್ಣ ರೈತರಿಗೆ ಯಂತ್ರೋಪಕರಣಗಳ ಬಾಡಿಗೆ ಮೇಲೆ 50% ಸಬ್ಸಿಡಿ ನೀಡುವ ʻರೈತ ಮಿತ್ರʼ ಯೋಜನೆ ಜಾರಿಗೊಳಿಸಲಾಗುವುದು. ಎತ್ತಿನಹೊಳೆ ಯೋಜನೆಯ ಮೊದಲ ಹಂತ ಹಾಗೂ 16,000 ಕೋಟಿ ರೂ. ಮೊತ್ತದ ಜಲಸಂಪನ್ಮೂಲ ಯೋಜನೆಗಳು ಚಾಲನೆಯಲ್ಲಿವೆ. ಎಸ್‌ಸಿ/ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಬೃಹತ್ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ : ಸಿಎಂ ವಿಜಯ್‌ ಧ್ವಜಾರೋಹಣದ ವೇಳೆ ಮುಂದಿನ ಸಾಲಲ್ಲಿ ಕುಳಿತು ಮಿಂಚಿದ ನಟಿ ತ್ರಿಷಾ..!

Related posts

ಸತತ ಸೋಲಿನಿಂದ ಕಂಗೆಟ್ಟ ಪೂಜಾ ಹೆಗ್ಡೆಗೆ ಬಾಲಿವುಡ್​​ನಲ್ಲಿ ಮೂಡಿದೆ ಆಶಾಕಿರಣ

Kalpana Editor

ಬಂಡೀಪುರ & ನಾಗರಹೊಳೆ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ, ರಾಜ್ಯ ಸರ್ಕಾರ ನಿರ್ಧಾರ..!

Kalpana Editor

ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ ತಂದೆ-ಮಗ; ಕೊಡಗಿನ ರೆಸಾರ್ಟ್‌ನಲ್ಲಿ ಜಾಲಿ..!

Kalpana Editor