ನವದೆಹಲಿ : 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ಭಾರತೀಯ ಸಶಸ್ತ್ರ ಪಡೆಗಳು ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ 13 ಮರಣೋತ್ತರ ಪ್ರಶಸ್ತಿಗಳು ಸೇರಿದಂತೆ ಒಟ್ಟು 78 ಶೌರ್ಯ ಪ್ರಶಸ್ತಿಗಳನ್ನು ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ. ಈ ಪ್ರಶಸ್ತಿಗಳಲ್ಲಿ 7 ಮರಣೋತ್ತರ ಸೇರಿದಂತೆ 9 ಕೀರ್ತಿ ಚಕ್ರಗಳು ಸೇರಿವೆ. ಇವುಗಳ ಜೊತೆಗೆ 1 ‘ಬಾರ್ ಟು ಶೌರ್ಯ ಚಕ್ರ’, 1 ಮರಣೋತ್ತರ ಸೇರಿದಂತೆ 19 ಶೌರ್ಯ ಚಕ್ರಗಳು, 5 ‘ಬಾರ್ ಟು ಸೇನಾ ಪದಕಗಳು’ (ಶೌರ್ಯ), 5 ಮರಣೋತ್ತರ ಸೇರಿದಂತೆ 36 ಸೇನಾ ಪದಕಗಳು, 3 ನೌಕಾ ಸೇನಾ ಪದಕಗಳು ಮತ್ತು 5 ವಾಯು ಸೇನಾ ಪದಕಗಳು ಸೇರಿವೆ.
ಈ ವರ್ಷದ ಪಟ್ಟಿಯಲ್ಲಿ ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ಅಶೋಕ ಚಕ್ರ’ ಯಾರಿಗೂ ಲಭಿಸಿಲ್ಲ. ಭಾರತೀಯ ಸೇನೆಗೆ ಸಂದಿರುವ ಮೂರೂ ಕೀರ್ತಿ ಚಕ್ರಗಳು ‘ಪ್ಯಾರಾಶೂಟ್ ರೆಜಿಮೆಂಟ್ನ ಸ್ಪೆಷಲ್ ಫೋರ್ಸಸ್’ಗೆ (ವಿಶೇಷ ಪಡೆ) ದೊರೆತಿವೆ. ಈಗಾಗಲೇ ಶೌರ್ಯ ಚಕ್ರ ಹೊಂದಿರುವ 21 ಪ್ಯಾರಾ (ಸ್ಪೆಷಲ್ ಫೋರ್ಸಸ್) ನ ಲೆಫ್ಟಿನೆಂಟ್ ಕರ್ನಲ್ ಮನೆವೋ ಫ್ರಾನ್ಸಿಸ್ ಪಿಎಫ್ ಮತ್ತು 2 ಪ್ಯಾರಾ (ಸ್ಪೆಷಲ್ ಫೋರ್ಸಸ್) ನ ಮೇಜರ್ ಜಿತೇಂದ್ರ ರಾಠಿ ಅವರಿಗೆ ಈ ಗೌರವ ಲಭಿಸಿದೆ. ಹಾಗೆಯೇ 2 ಪ್ಯಾರಾ (ಸ್ಪೆಷಲ್ ಫೋರ್ಸಸ್) ನ ಹವಿಲ್ದಾರ್ ಗಜೇಂದ್ರ ಸಿಂಗ್ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಾಗಿದೆ.
ಉಳಿದ 6 ಕೀರ್ತಿ ಚಕ್ರಗಳು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗೆ ಲಭಿಸಿದ್ದು, ಇವೆಲ್ಲವೂ ಮರಣೋತ್ತರ ಪುರಸ್ಕಾರಗಳಾಗಿವೆ. ಹೆಡ್ ಕಾನ್ಸ್ಟೇಬಲ್ಗಳಾದ ಜಗಬೀರ್ ಸಿಂಗ್ ಮತ್ತು ಬಶೀರ್ ಅಹಮದ್, ಎಸ್ಜಿ ಕಾನ್ಸ್ಟೇಬಲ್ಗಳಾದ ಜಸ್ವಂತ್ ಸಿಂಗ್, ಬಲ್ವಿಂದರ್ ಸಿಂಗ್ ಮತ್ತು ತಾರಿಕ್ ಹುಸೇನ್, ಹಾಗೂ ಎಸ್ಟಿಎಫ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಈ ಪ್ರಶಸ್ತಿಗೆ ಭಾಜನರಾದವರು.
5 ಮರಣೋತ್ತರ ಸೇನಾ ಪದಕಗಳಲ್ಲಿ 4 ಪದಕಗಳು ’19 ರಾಷ್ಟ್ರೀಯ ರೈಫಲ್ಸ್’ ಎಂಬ ಒಂದೇ ಯುನಿಟ್ನ ಯೋಧರಿಗೆ ಸಿಕ್ಕಿವೆ. ಪ್ಯಾರಾಶೂಟ್ ರೆಜಿಮೆಂಟ್ನ ಲ್ಯಾನ್ಸ್ ಹವಿಲ್ದಾರ್ ಪಲಾಶ್ ಘೋಷ್ ಮತ್ತು ಲ್ಯಾನ್ಸ್ ನಾಯಕ್ ಸುಜಯ್ ಘೋಷ್ ಹಾಗೂ ಸಿಖ್ ಲೈಟ್ ಇನ್ಫಾಂಟ್ರಿಯ ಲ್ಯಾನ್ಸ್ ನಾಯಕ್ ಪ್ರಿತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮೀಂದರ್ ಸಿಂಗ್ ಈ ಯೋಧರಾಗಿದ್ದಾರೆ.
ಐದನೇ ಮರಣೋತ್ತರ ಸೇನಾ ಪದಕವು 9 ರಾಷ್ಟ್ರೀಯ ರೈಫಲ್ಸ್ನ ಸುಬೇದಾರ್ ಪರ್ಭಾತ್ ಗೌರ್ ಅವರಿಗೆ ಸಂದಿದೆ. ಇದೇ ಯುನಿಟ್ನ ಲ್ಯಾನ್ಸ್ ನಾಯಕ್ ನರೇಂದರ್ ಸಿಂಧು ಅವರು ಮರಣೋತ್ತರವಾಗಿ ಶೌರ್ಯ ಚಕ್ರ ಪಡೆದ ಏಕೈಕ ಯೋಧರಾಗಿದ್ದಾರೆ. 44 ಅಸ್ಸಾಂ ರೈಫಲ್ಸ್ನಲ್ಲಿ ಸೇವೆ ಸಲ್ಲಿಸುತ್ತಿರುವ ರಜಪೂತಾನಾ ರೈಫಲ್ಸ್ನ ಮೇಜರ್ ಆದಿತ್ಯ ಪ್ರತಾಪ್ ಸಿಂಗ್ ಅವರಿಗೆ ‘ಬಾರ್ ಟು ಶೌರ್ಯ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಈಗಾಗಲೇ ಶೌರ್ಯ ಚಕ್ರ ಮತ್ತು ಸೇನಾ ಪದಕಗಳನ್ನು ಪಡೆದಿದ್ದಾರೆ.
ಭಾರತೀಯ ನೌಕಾಪಡೆಯ ಪ್ರಶಸ್ತಿಗಳಲ್ಲಿ ಲೆಫ್ಟಿನೆಂಟ್ ಕಮಾಂಡರ್ ಶಿವಂ ಕುಮಾರ್ ಅವರಿಗೆ ‘ಶೌರ್ಯ ಚಕ್ರ’ ಹಾಗೂ ಕಮಾಂಡರ್ಗಳಾದ ವಿನೀತ್ ಶರ್ಮಾ, ಯುವರಾಜ್ ಕುಮಾರ್ ಮತ್ತು ಪೆಟ್ಟಿ ಆಫೀಸರ್ ಸಿ ಅವಿನಾಶ್ ಅಣ್ಣಾಸೊ ಅವರಿಗೆ ‘ನೌಕಾ ಸೇನಾ ಪದಕಗಳು’ ಲಭಿಸಿವೆ. ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಸುಧೀರ್ ಕುಮಾರ್ ಅವರು ‘ಶೌರ್ಯ ಚಕ್ರ’ ಪಡೆದ ಏಕೈಕ ವಾಯುಪಡೆ ಅಧಿಕಾರಿಯಾಗಿದ್ದಾರೆ.
‘ವಾಯು ಸೇನಾ ಪದಕ’ ಪಡೆದ ಐವರಲ್ಲಿ ಗ್ರೂಪ್ ಕ್ಯಾಪ್ಟನ್ಗಳಾದ ರಾಹುಲ್ ಜಗೋಟ್ಟಾ ಮತ್ತು ರಾಹುಲ್ ರಾವತ್ ಸೇರಿದ್ದಾರೆ. ಇದಲ್ಲದೆ, 75 ಸೇನೆ, 10 ವಾಯುಪಡೆ ಮತ್ತು 4 ನೌಕಾಪಡೆಯ ಸಿಬ್ಬಂದಿ ಸೇರಿದಂತೆ 89 ‘ಮೆನ್ಷನ್-ಇನ್-ಡಿಸ್ಪ್ಯಾಚಸ್’ (ಉಲ್ಲೇಖಿತ ಪ್ರಶಸ್ತಿ) ಗಳಿಗೂ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಸೇನೆಯ ಹೆಚ್ಚಿನ ಪ್ರಶಸ್ತಿ ಉಲ್ಲೇಖಗಳು ಜಮ್ಮು ಮತ್ತು ಕಾಶ್ಮೀರದ ‘ಆಪರೇಷನ್ ರಕ್ಷಕ್’ ಮತ್ತು ಈಶಾನ್ಯ ಭಾರತದ ‘ಆಪರೇಷನ್ ಹಿಫಾಜತ್’ ಹಾಗೂ ‘ಆಪರೇಷನ್ ಆರ್ಕಿಡ್’ ಕಾರ್ಯಾಚರಣೆಗಳಿಗೆ ಸಂಬಂಧಿಸಿವೆ. ಉಳಿದಂತೆ ಪೂರ್ವ ಲಡಾಖ್ನ ‘ಆಪರೇಷನ್ ಸ್ನೋ ಲೆಪರ್ಡ್’ ಮತ್ತು ಸಿಯಾಚಿನ್ ಗ್ಲೇಸಿಯರ್ನ ‘ಆಪರೇಷನ್ ಮೇಘದೂತ್’ ಕಾರ್ಯಾಚರಣೆಗಳಿಗೆ ನೀಡಲಾಗಿದೆ. ಇದನ್ನೂ ಓದಿ : 80ನೇ ಸ್ವಾತಂತ್ರ್ಯ ದಿನಾಚರಣೆ; ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆಶಿ
