July 12, 2026
kranthikidi.com
ಕ್ರೈಂತಾಜಾಸುದ್ದಿದೇಶ

ಚಿನ್ನ-ಬೆಳ್ಳಿ, ಗೋಡೆಯಲ್ಲಿ ಬಚ್ಚಿಟ್ಟಿದ್ದ ಕೋಟಿ ಹಣ ಜಪ್ತಿ – ನಿವೃತ್ತ ARTO ಆಸ್ತಿ ಕಂಡು ಅಧಿಕಾರಿಗಳೇ ದಂಗು..!

ಲಕ್ನೋ : ಉತ್ತರ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಲಿತ್ ಕುಮಾರ್ ಅವರ ಲಕ್ನೋ ನಿವಾಸದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ನಿವೃತ್ತ ಅಧಿಕಾರಿ ಬಳಿ ಸಿಕ್ಕ ಆಸ್ತಿ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ಸುಮಾರು 26 ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆ ಬಳಿಕ ಲಲಿತ್‌ ಮನೆಯಿಂದ 13 ಕೆಜಿ ಚಿನ್ನ, 9 ಕೆಜಿ ಬೆಳ್ಳಿ ಮತ್ತು ವಜ್ರದ ಆಭರಣಗಳು ಸೇರಿ 20 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಕೊಂಡಿದ್ದಾರೆ. ಜೊತೆಗೆ ಮನೆಗಳು, ಫ್ಲಾಟ್‌ಗಳು ಮತ್ತು ಕೃಷಿ ಭೂಮಿ ಸೇರಿದಂತೆ 15 ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ವಿಜಿಲೆನ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಆಸ್ತಿಗಳ ಒಟ್ಟು ಮೌಲ್ಯ ಸುಮಾರು 35 ಕೋಟಿ ರೂ. ಎಂದು ಅಂದಾಜಿಸಿದ್ದಾರೆ.

ಲಲಿತ್ ಕುಮಾರ್ ಉತ್ತರ ಪ್ರದೇಶದ ಸಾರಿಗೆ ಇಲಾಖೆಯಲ್ಲಿ ಎಆರ್‌ಟಿಒ ಆಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು. ಕಾನ್ಪುರದಲ್ಲಿ ಎಆರ್‌ಟಿಒ ಆಗಿದ್ದಾಗ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿತ್ತು. 2020 ರ ಸೆಪ್ಟೆಂಬರ್ 11 ರಂದು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ ಈ ಪ್ರಕರಣದ ಕುರಿತು ಲಲಿತ್ ಕುಮಾರ್ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿತ್ತು. ಕಾನ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಲಲಿತ್ ಕುಮಾರ್ ಅಕ್ರಮವಾಗಿ 93.26 ಲಕ್ಷ ರೂ. ಆದಾಯ ಗಳಿಸಿದ್ದಾರೆ ಎಂದು ವಿಜಿಲೆನ್ಸ್ ತನಿಖೆಯಿಂದ ತಿಳಿದುಬಂದಿತ್ತು.

ಲಲಿತ್ ಕುಮಾರ್ ಅವರು ಸ್ಥಿರಾಸ್ತಿ ಮತ್ತು ಚರಾಸ್ತಿ ಮತ್ತು ನಿರ್ವಹಣೆಗಾಗಿ 1.61 ಕೋಟಿ ರೂ. ಖರ್ಚು ಮಾಡಿದ್ದಾರೆ. ಆದಾಯಕ್ಕಿಂತ 68.66 ಲಕ್ಷರೂ. ಖರ್ಚು ಮಾಡಲಾಗಿದೆ ಎಂದು ವಿಜೆಲೆನ್ಸ್‌ ಗಮನಿಸಿತ್ತು. ಇದೇ ವೇಳೆ 2022 ರ ಜೂನ್‌ನಲ್ಲಿ ಆಗ್ರಾದಲ್ಲಿ ARTO ಆಗಿ ನೇಮಿಸಿದ್ದಾಗಲೂ ಲಲಿತ್‌ ಲಲಿತ್‌ ಅಕ್ರಮ ನಡೆಸಿದ್ದಾರೆ ಅನ್ನೋದು ಬೆಳಕಿಗೆ ಬಂದಿದೆ.

ಇದೇ ಜುಲೈ 7 ಮತ್ತು 8 ರಂದು ಅಲಿಗಂಜ್‌ನ ಚಂದ್ರಲೋಕ್ ಕಾಲೋನಿಯಲ್ಲಿರುವ ಲಲಿತ್‌ ಅವರ ಸಿ-143 ನಿವಾಸದ ಮೇಲೆ ವಿಜಿಲೆನ್ಸ್ ತಂಡವು ದಾಳಿ ನಡೆಸಿತು. ಸುಮಾರು 26 ಗಂಟೆಗಳ ಕಾಲ ಶೋಧ ನಡೆಸಲಾಯಿತು. ಈ ವೇಳೆ ಪ್ಯಾಕೆಟ್‌ ಮಾಡಿ ಮನೆಯ ಗೋಡೆ ಸೇರಿದಂತೆ ಹಲವು ಕಡೆಗಳಲ್ಲಿ ಬಚ್ಚಿಟ್ಟಿದ್ದ 1.62 ಕೋಟಿ ನಗದು ಹಣ ಪತ್ತೆಯಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳೂ ಪತ್ತೆಯಾಗಿವೆ. ತನಿಖೆಯ ಸಮಯದಲ್ಲಿ ಸುಮಾರು 13 ಕೆಜಿ ಚಿನ್ನ ಮತ್ತು 9 ಕೆಜಿ ಬೆಳ್ಳಿ ಮತ್ತು ವಜ್ರದ ಆಭರಣಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು 20 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಅಷ್ಟೇ ಅಲ್ಲದೇ, ಅಲಿಗಂಜ್, ಇಸ್ಮಾಯಿಲ್‌ಗಂಜ್, ಮೋಹನ್‌ಲಾಲ್‌ಗಂಜ್ ಮತ್ತು ಬಾಲ್‌ಗಂಜ್ ಸೇರಿದಂತೆ ಲಕ್ನೋದ ಹಲವಾರು ಪ್ರದೇಶಗಳಲ್ಲಿ ಮನೆಗಳು, ಪ್ಲಾಟ್‌ಗಳು ಮತ್ತು ಕೃಷಿ ಭೂಮಿ ಹೊಂದಿರುವ ದಾಖಲೆಗಳು ಪತ್ತೆಯಾಗಿವೆ. ಇದರೊಂದಿಗೆ ನೋಯ್ಡಾದಲ್ಲಿ 2 ಫ್ಲಾಟ್‌ ಬುಕಿಂಗ್‌, ಬಾರಾಬಂಕಿ ಮತ್ತು ರಾಯ್‌ಬರೇಲಿಯಲ್ಲಿ ಭೂಮಿ ಹೊಂದಿರುವ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಸ್ಥಿರಾಸ್ತಿಗಳ ಅಂದಾಜು ಮೌಲ್ಯ ಸುಮಾರು 13 ಕೋಟಿ ರೂ. ಎಂದು ಹೇಳಲಾಗಿದೆ.

ಶೋಧದ ಸಮಯದಲ್ಲಿ, ವಿಜಿಲೆನ್ಸ್ ಒಂದು ಟೊಯೋಟಾ ಇನ್ನೋವಾ ಮತ್ತು ಹುಂಡೈ ಐ20 ಕಾರು, ಒಂದು ರಿವಾಲ್ವರ್ ಜೊತೆಗೆ 1 ಕೋಟಿಗೂ ಹೆಚ್ಚು ಹೂಡಿಕೆ ದಾಖಲೆಗಳನ್ನೂ ಪತ್ತೆಹಚ್ಚಿದೆ. ನಿವೃತ್ತ ಅಧಿಕಾರಿಯ ಆಸ್ತಿ ಪ್ರಮಾಣ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಸದ್ಯ ಪ್ರಕಣದ ತನಿಖೆ ಮುಂದುವರಿದಿದೆ. ಇದನ್ನೂ ಓದಿ : ಕೊಡಗಿನಲ್ಲಿ ಬಿರುಸು ಪಡೆದ ಮಳೆ; ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ..!

Related posts

ರೋಚಕವಾಗಿದೆ, ಸಿದ್ದರಾಮಯ್ಯ ತಂತ್ರಗಾರಿಕೆ; ಡಿಕೆ ಸಹೋದರರಿಂದ ಕೌಂಟರ್ ಪ್ಲಾನ್..!

Kalpana Editor

ಮಾಜಿ ಸಿಎಂ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ನಿಧನ..!

Kalpana Editor

ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ನಟ ಪ್ರಕಾಶ್ ರಾಜ್‌

Kalpana Editor