August 26, 2026
kranthikidi.com
ತಾಜಾಸುದ್ದಿರಾಜ್ಯ

ಎನ್​ಸಿಇಆರ್​ಟಿ 6ನೇ ತರಗತಿ ಕನ್ನಡ ಪಠ್ಯಪುಸ್ತಕದ ವಿರುದ್ಧ ಆಕ್ರೋಶ..!

ಬೆಂಗಳೂರು : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ 6ನೇ ತರಗತಿಯ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಪಠ್ಯಪುಸ್ತಕವು ಕರ್ನಾಟಕದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಸಾರ್ವಜನಿಕ ಒಕ್ಕೂಟ ನೆನ್ನೆ (ಮಂಗಳವಾರ) ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತೀವ್ರವಾಗಿ ಟೀಕಿಸಿದೆ.

ಒಕ್ಕೂಟದ ಮುಖ್ಯ ಸಂಚಾಲಕರಾದ ಪ್ರೊ. ನಿರಂಜನಾರಾಧ್ಯ ವಿ.ಪಿ. ಅವರು ಮಾತನಾಡಿ, ಈ ಪಠ್ಯಪುಸ್ತಕದಲ್ಲಿ ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ಯಾವುದೇ ಪಾಠಗಳಿಲ್ಲ. ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಭಾಗದ ಜಾನಪದ, ಸಾಹಿತ್ಯ ಹಾಗೂ ಜೀವನಶೈಲಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಇಡೀ ಪಠ್ಯಪುಸ್ತಕದ ನಿರೂಪಣೆಯು ಅತ್ಯಂತ ನೀರಸವಾಗಿದ್ದು, ಕೇವಲ ಬೋಧನಾತ್ಮಕ ಧಾಟಿಯಲ್ಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿರುವುದು ಎನ್‌ಸಿಇಆರ್‌ಟಿಯ ಕೇಸರೀಕರಣದ ಪ್ರಯತ್ನದ ಒಂದು ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪಂಪ, ಕುವೆಂಪು, ಕಾರಂತ ಮತ್ತು ಬಸವಣ್ಣನವರ ಸೌಹಾರ್ದಯುತ ಸಿದ್ಧಾಂತ ಹಾಗೂ ಚಿಂತನೆಗಳಲ್ಲಿ ಕರ್ನಾಟಕದ ಅಸ್ಮಿತೆ ಅಡಗಿದೆ. ಆದರೆ ಎನ್‌ಸಿಇಆರ್‌ಟಿ ಧರ್ಮ ಆಧಾರಿತ ರಾಜಕಾರಣವನ್ನು ಮುನ್ನೆಲೆಗೆ ತರುತ್ತಿದ್ದು, ರಾಜ್ಯದ ಸಾಂಸ್ಕೃತಿಕ ಮತ್ತು ವೈಚಾರಿಕ ಪರಂಪರೆಯನ್ನು ನಿರ್ಲಕ್ಷಿಸಿ ಪುಸ್ತಕಕ್ಕೆ ಧಾರ್ಮಿಕ ಹೆಸರು ಇಟ್ಟಿರುವುದು ಖಂಡನೀಯ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.

ಪಠ್ಯಪುಸ್ತಕದಲ್ಲಿರುವ ಆರೋಗ್ಯವೇ ಭಾಗ್ಯ ಎಂಬ ಪಾಠದ ವಿರುದ್ಧವೂ ಒಕ್ಕೂಟವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪಾಠದಲ್ಲಿ ತೋರಿಸಲಾಗಿರುವ ಆಹಾರದ ತಟ್ಟೆಯಲ್ಲಿ ಕೇವಲ ರೊಟ್ಟಿ, ಅನ್ನ, ತರಕಾರಿ, ಹಾಲು ಮತ್ತು ಹಣ್ಣುಗಳನ್ನು ಮಾತ್ರ ಚಿತ್ರಿಸಲಾಗಿದೆ. ಆದರೆ ಮಾಂಸಾಹಾರಿ ಆಹಾರಗಳಾದ ಮೊಟ್ಟೆ, ಮೀನು ಮತ್ತು ಮಾಂಸವನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ.

ಕರ್ನಾಟಕ ಎಂದರೆ ಕೇವಲ ರಾಗಿ ಮುದ್ದೆ ಮತ್ತು ಬಸ್ಸಾರು ಮಾತ್ರವೇ? ಇಲ್ಲಿ ಕೋಟ್ಯಂತರ ಜನ ಪಾಂಡಿ ಕರಿ, ಮೀನಿನ ಸಾರು ಹಾಗೂ ಖೀಮಾ ಉಂಡೆಗಳನ್ನು ಸೇವಿಸುತ್ತಾರೆ. ಕರಾವಳಿಯ ಮಗು ತಿನ್ನುವ ಮೀನು ಅಥವಾ ಉತ್ತರ ಕರ್ನಾಟಕದ ಮಗು ತಿನ್ನುವ ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ ಎಲ್ಲಿ ಹೋಗಿದೆ? ಇದು ಉದ್ದೇಶಪೂರ್ವಕವಾಗಿ ಮಾಂಸಾಹಾರದ ಆಹಾರ ಪದ್ಧತಿಯನ್ನು ನಿರ್ಲಕ್ಷಿಸುವ ಮತ್ತು ಒಂದು ನಿರ್ದಿಷ್ಟ ಸೌರಭವನ್ನು ಹೇರುವ ಪ್ರಯತ್ನವಾಗಿದೆ ಎಂದು ಪ್ರೊ. ನಿರಂಜನಾರಾಧ್ಯ ಆರೋಪಿಸಿದ್ದಾರೆ.

ಶಾಲಾ ಪಠ್ಯಪುಸ್ತಕಗಳಲ್ಲಿ ರಾಜಕೀಯ ಪ್ರೇರಿತ ಮತ್ತು ಏಕಪಕ್ಷೀಯ ವಿಷಯಗಳನ್ನು ಸೇರಿಸಿರುವುದನ್ನು PAFRE ತೀವ್ರವಾಗಿ ಖಂಡಿಸಿದೆ. ತಕ್ಷಣವೇ ಈ ವಿವಾದಾತ್ಮಕ ಕನ್ನಡ ಪಠ್ಯಪುಸ್ತಕವನ್ನು ಎನ್‌ಸಿಇಆರ್‌ಟಿ ಹಿಂಪಡೆಯಬೇಕು ಮತ್ತು ಈ ನಡೆಯ ಕುರಿತು ಸಾರ್ವಜನಿಕರಿಗೆ ಸೂಕ್ತ ವಿವರಣೆ ನೀಡಬೇಕು ಎಂದು ಒಕ್ಕೂಟವು ಕಟ್ಟುನಿಟ್ಟಾಗಿ ಆಗ್ರಹಿಸಿದೆ. ಈ ವಿವಾದವು ಮುಂಬರುವ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ. ಇದನ್ನೂ ಓದಿ : ಕೆಆರ್‌ಪುರಂ ತ್ರಿವಳಿ ಹತ್ಯೆ ಕೇಸ್; ಪುದುಚೇರಿಯಲ್ಲಿ ಹಂತಕಿ ಶ್ವೇತಾ ಅರೆಸ್ಟ್‌..!

Related posts

ಶಾಸಕರ ಬೆಂಬಲಿಗರು ಉದ್ರೇಕಗೊಂಡು ತಾಲೂಕು ಬಂದ್ ಮಾಡಿದ್ದು ತಪ್ಪು – ಯತೀಂದ್ರ

kknewskannada1987@gmail.com

ಒತ್ತಡದಿಂದ ಮುಕ್ತರಾಗಲು; ಗಾರ್ಡನಿಂಗ್‌ ಹವ್ಯಾಸ ಆರೋಗ್ಯಕ್ಕೂ ಪ್ರಯೋಜನಕಾರಿ..!

kknewskannada1987@gmail.com

ಬೆಂಗಳೂರು ಪೂರ್ವ ನಗರ ನಿಗಮದಿಂದ 100 ಟನ್ ಕಸ ವಿಲೇವಾರಿ..!

Kalpana Editor