ಬೆಂಗಳೂರು : ಪಂಚತಾರಾ ಹಾಗೂ ಪ್ರಮುಖ ಸ್ಟಾರ್ ಹೋಟೆಲ್ಗಳ ಮೇಲೆ ದಾಳಿ ಮಾಡಿ ಅವಧಿ ಮೀರಿದ ಆಹಾರ ಪದಾರ್ಥಗಳು, ಕಳಪೆ ಗುಣಮಟ್ಟದ ಮಾಂಸ, ತರಕಾರಿಗಳ ಪತ್ತೆ ಮಾಡುವ ಮೂಲಕ ಮಾಲೀಕರಿಗೆ ಶಾಕ್ ಕೊಟ್ಟಿದ್ದ ಬೆಂಗಳೂರಿನ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಇಂದೀಗ ಇಂದಿರಾ ಕ್ಯಾಂಟೀನ್ಗಳ ಅಡುಗೆಮನೆಗಳ ಮೇಲೆಯೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕ್ಯಾಂಟೀನ್ಗಳ ದುರಾವಸ್ಥೆ ಕಂಡು ಹೌಹಾರಿದ್ದಾರೆ.
ಗೊಟ್ಟಿಗೆರೆ, ಲಿಂಗರಾಜಪುರ ಸೇರಿ ನಗರದ ಹಲವೆಡೆ ಇರುವ ಇಂದಿರಾ ಕ್ಯಾಂಟೀನ್ಗಳ ಅಡುಗೆ ಮನೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಡುಗೆ ಮನೆಯಲ್ಲಿ ಆಹಾರ ತಯಾರಿಕೆ ಮತ್ತು ಸಂಗ್ರಹಣಾ ವ್ಯವಸ್ಥೆ ಪರಿಶೀಲನೆಯ ಜೊತೆಗೆ ತರಕಾರಿ, ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಆಹಾರ ಪದಾರ್ಥಗಳ ಗುಣಮಟ್ಟವನ್ನೂ ಈ ವೇಳೆ ಪರೀಕ್ಷಿಸಲಾಗಿದೆ. ಅವಧಿ ಮೀರಿದ ಹಾಗೂ ಹಾಳಾದ ಆಹಾರ ಇದೆಯೇ ಎಂಬ ಬಗ್ಗೆಯೂ ತೀವ್ರ ತಪಾಸಣೆ ನಡೆಸಲಾಗಿದೆ.
ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್ನಲ್ಲಿ ಪರಿಶೀಲನೆ ವೇಳೆ ಹೆಗ್ಗಣ ಮತ್ತು ಇಲಿಗಳು ಕಂಡುಬಂದ ಪರಿಣಾಮ ಕ್ಯಾಂಟೀನ್ ಸೀಜ್ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು, ಅಡುಗೆ ಮನೆ ಸ್ವಚ್ಛವಾಗಿರಲಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್ ಗುತ್ತೆಗೆ ಪಡೆದವರಿಗೆ ನೋಟಿಸ್ ಕೂಡ ನೀಡಿರೋದಾಗಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಗರದ ಐಷಾರಾಮಿ ಹೋಟೆಲ್ಗಳ ಮೇಲೆ ರೇಡ್ ನಡೆಸಿದ್ದ ಅಧಿಕಾರಿಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಯಮಗಳಿಗೆ ಅನುಗುಣವಾಗಿರದ ಆಹಾರ ಪದಾರ್ಥಗಳನ್ನು ಪತ್ತೆ ಮಾಡಿದ್ದರು. ಮಾಂಸಾಹಾರ ಪದಾರ್ಥಗಳನ್ನು ಸಮರ್ಪಕವಾಗಿ ಪ್ರತ್ಯೇಕವಾಗಿ ಸಂಗ್ರಹಿಸದಿರುವುದು.
ತಪ್ಪು ಲೇಬಲ್ ಹೊಂದಿರುವ ಆಹಾರ ಉತ್ಪನ್ನಗಳು ಹಾಗೂ ಶಿಲೀಂಧ್ರ ಬಾಧಿತ ತರಕಾರಿ ಮತ್ತು ಇತರ ಆಹಾರ ಪದಾರ್ಥಗಳೂ ಈ ವೇಳೆ ಹೋಟೆಲ್ಗಳಲ್ಲಿ ಕಂಡು ಬಂದಿತ್ತು. ಆ ಬೆನ್ನಲ್ಲೇ ಈಗ ಬಡವರ ಹಸಿವು ನೀಗಸಲೆಂದೇ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್ಗಳ ಗುತ್ತಿಗೆದಾರರಿಗೂ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಶಾಕ್ ನೀಡಿದೆ. ಇದನ್ನೂ ಓದಿ : ಆ.13ಕ್ಕೆ ವೃತ್ತಿಪರ ಅಭ್ಯರ್ಥಿಗಳ ದಾಖಲೆ ಪರಿಶೀಲನೆ; ಕೆಇಎ ಮಾಹಿತಿ
