ಬೆಂಗಳೂರು : ಶಿವಗಂಗೆಯಲ್ಲಿ ನಾಪತ್ತೆಯಾಗಿರುವ ಅದ್ವೈತ್ ಉಪಾಧ್ಯಾಯ ಪ್ರಕರಣ ದಿನದಿಂದ ದಿನಕ್ಕೆ ನಿಗೂಢವಾಗುತ್ತಿದೆ. ಅದ್ವೈತ್ನ ನಡೆ ಬಗ್ಗೆ ಪೊಲೀಸರಿಗೆ ಹಲವು ಅನುಮಾನಗಳು ಮೂಡಿದ್ದು, ಆತ ಶಾಂತಲಾ ಡ್ರಾಪ್ ಪ್ರದೇಶದಿಂದ ಬೇರೆ ದಾರಿಯಲ್ಲಿ ಹೊರ ಹೋಗಿದ್ದಾನಾ ಎಂಬ ಶಂಕೆಯೂ ವ್ಯಕ್ತವಾಗಿದೆ.
ಅದ್ವೈತ್ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಳೆದ ಮೂರು ದಿನಗಳಿಂದ ಶಾಂತಲಾ ಡ್ರಾಪ್ ಸುತ್ತಮುತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ ಹುಡುಕಾಟ ನಡೆಸಿದ್ದಾರೆ. 60ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ, ಇದುವರೆಗೂ ಅದ್ವೈತ್ನ ಯಾವುದೇ ಕುರುಹು ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಇದೀಗ ತನಿಖೆಯ ದಿಕ್ಕನ್ನು ಮತ್ತಷ್ಟು ವಿಸ್ತರಿಸಿದ್ದಾರೆ.
ಅದ್ವೈತ್ ಶಾಂತಲಾ ಡ್ರಾಪ್ ಬಳಿ ಬಂದ ಬಳಿಕ ಅಲ್ಲಿಂದ ಬೇರೆ ಮಾರ್ಗದಲ್ಲಿ ತೆರಳಿದ್ದಾನಾ ಎಂಬ ಅನುಮಾನ ಪೊಲೀಸರಲ್ಲಿದೆ. ಹೀಗಾಗಿ ಇಂದು ಶಿವಗಂಗೆ ಹೊರಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತದೆ. ಶಿವಗಂಗೆ ಸುತ್ತಮುತ್ತಲಿನ ಹಲವು ಭಾಗಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅದ್ವೈತ್ ಬಂದ ದಾರಿಯನ್ನೇ ಬಳಸದೇ ಬೇರೆ ಮಾರ್ಗದಲ್ಲಿ ತೆರಳಿದ್ದಾನಾ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ನಾಪತ್ತೆಯಾಗಿ ಹಲವು ದಿನಗಳು ಕಳೆದರೂ ಯಾವುದೇ ಸುಳಿವು ಸಿಗದಿರುವುದು ಪೊಲೀಸರಿಗೆ ತಲೆಬಿಸಿಯಾಗಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆಯಿಂದ ಪ್ರಕರಣಕ್ಕೆ ಯಾವುದಾದರೂ ಹೊಸ ಸುಳಿವು ಸಿಗುತ್ತದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ : ಅದಾನಿ ಕಂಪನಿಗೆ ಗುಡ್ನ್ಯೂಸ್ – ಕ್ರಿಮಿನಲ್ ಆರೋಪ ಕೈಬಿಟ್ಟ ಅಮೆರಿಕ..!
