July 12, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ನಾವ್ಯಾರು ಕೈ ಹಾಕಿಲ್ಲ, ಆದ್ರೆ ಆಯೋಗ ಮಾಡ್ತಿರೋ ಅಭಿಯಾನದಲ್ಲಿ ಭಿನ್ನಾಭಿಪ್ರಾಯಿದೆ – ಡಿಕೆಶಿ

ಬೆಂಗಳೂರು : ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಮಧ್ಯಪ್ರವೇಶ ಮಾಡಿಲ್ಲ. ಆದರೆ ಚುನಾವಣಾ ಆಯೋಗ ಈ ಅಭಿಯಾನವನ್ನು ನಡೆಸುತ್ತಿರುವ ರೀತಿಯ ಬಗ್ಗೆ ಮಾತ್ರ ನಮಗೆ ಭಿನ್ನಾಭಿಪ್ರಾಯ ಇದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. SIR ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂಬ ವಿಪಕ್ಷಗಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಈಗಾಗಲೇ ನ್ಯಾಯಾಲಯದಲ್ಲಿ ವಾದ ಮಾಡಿದ್ದೇವೆ. ಈಗ ಕೋರ್ಟ್ ತೀರ್ಪು ನೀಡಿದೆ.

ಎಲ್ಲರಿಗೂ ಮತದಾನದ ಹಕ್ಕು ಸಿಗಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಯಾವುದೇ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ನೀಡದಷ್ಟು ಸಹಕಾರವನ್ನು ನಾವು ನೀಡಿದ್ದೇವೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಾವು ಯಾರೂ ಕೈಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜನರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಬಿಎಲ್‌ಎಗಳನ್ನು ನೇಮಿಸುವ ಅವಕಾಶ ಇದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ನಾವು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದಲೇ ವಿಪಕ್ಷಗಳಿಗೆ ಭಯವಾಗಿದೆ. ಅವರಿಗೆ ಚುನಾವಣಾ ಆಯೋಗದ ಮೇಲೆಯೇ ನಂಬಿಕೆ ಇಲ್ಲ. ಅದಕ್ಕಾಗಿಯೇ ಪ್ರಕ್ರಿಯೆ ರದ್ದು ಮಾಡುವಂತೆ ದೂರು ನೀಡಿದ್ದಾರೆ. ಆದರೆ ಪ್ರಕ್ರಿಯೆ ಮುಂದುವರಿಸಬೇಕೋ ಅಥವಾ ರದ್ದು ಮಾಡಬೇಕೋ ಎಂಬುದು ಚುನಾವಣಾ ಆಯೋಗದ ತೀರ್ಮಾನ ಎಂದು ಹೇಳಿದ್ದಾರೆ.

ಜನರಿಗೆ ಅನುಕೂಲವಾಗುವಂತೆ ಜಾತಿ ಪ್ರಮಾಣ ಪತ್ರ ಹಾಗೂ ವಾಸ ದೃಢೀಕರಣ ಪತ್ರವನ್ನು ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಿದ್ದೇವೆ. 2002ರ ಮತದಾರರ ದಾಖಲೆಗಳು ಹಲವರ ಬಳಿ ಇಲ್ಲದ ಕಾರಣ, ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವೂ ಕಲ್ಪಿಸಲಾಗಿದೆ. ಮತದಾನದ ಹಕ್ಕನ್ನು ಉಳಿಸಿಕೊಳ್ಳುವಂತೆ ನಾವು ಜನರಿಗೆ ಮನವಿ ಮಾಡುತ್ತಿದ್ದೇವೆ. ಆದರೆ ಬಡವರು ಹಾಗೂ ಅಲ್ಪಸಂಖ್ಯಾತರಿಗೆ ತೊಂದರೆ ಆಗಬೇಕು ಎಂಬ ಉದ್ದೇಶದಿಂದಲೇ ವಿಪಕ್ಷಗಳು ವಿರೋಧಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಬಾಂಗ್ಲಾದೇಶದ ಅಕ್ರಮ ವಲಸಿಗರ ಬಗ್ಗೆ ಮಾತನಾಡಿದ ಅವರು, ಅವರು ಇದ್ದರೆ ಅಧಿಕಾರದಲ್ಲಿದ್ದಾಗಲೇ ಬಿಜೆಪಿ ಕ್ರಮ ಕೈಗೊಳ್ಳಬೇಕಿತ್ತು. ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಜನರಿಗೆ ಮತದಾನದ ಹಕ್ಕು ಉಳಿಸಿಕೊಳ್ಳುವಂತೆ ಹೇಳುತ್ತಿದ್ದೇವೆ. ಐದು ಗ್ಯಾರಂಟಿಗಳನ್ನು ಜನರ ನೆರವಿಗಾಗಿ ನೀಡಿದ್ದೇವೆ. ಈಗ ಬಿಜೆಪಿ ಕೂಡ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದೆ. ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ. ಮತದಾನದ ಹಕ್ಕು ಉಳಿಸಿಕೊಳ್ಳಲು ಹೆಲ್ಪ್ಡೆಸ್ಕ್ಗಳನ್ನು ಆರಂಭಿಸಿದ್ದೇವೆ.

ಎಲ್ಲಿಯಾದರೂ ಲೋಪಗಳಿದ್ದರೆ ತನಿಖೆ ನಡೆಸಲಿ, ನಮಗೆ ಯಾವುದೇ ಆಕ್ಷೇಪವಿಲ್ಲ. ನಮ್ಮ ಶಾಸಕರು ಹಾಗೂ ಮಾಜಿ ಶಾಸಕರಿಗೂ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇನೆ. ನಿಮ್ಮ ಮತವನ್ನು ಉಳಿಸುವುದು ನನ್ನ ಕರ್ತವ್ಯ. ರಾಜಕೀಯ ಮಾಡುವವರನ್ನು ಅಥವಾ ಟೀಕೆ ಮಾಡುವವರನ್ನು ತಡೆಯಲು ಸಾಧ್ಯವಿಲ್ಲ. ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ. ನಾನು ಮೊದಲೇ ಹೇಳಿದ್ದೇನೆ, ಟೀಕೆಗಳು ಸಾಯುತ್ತವೆ, ಕೆಲಸ ಮಾತ್ರ ಉಳಿಯುತ್ತದೆ. ಮತದಾನದ ಹಕ್ಕನ್ನು ರಕ್ಷಿಸುವುದೇ ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

ಬರ ನಿರ್ವಹಣೆ ಕುರಿತು ಮಾತನಾಡಿದ ಸಿಎಂ, ಇಂದು ಬೀದರ್‌ಗೆ ತೆರಳಿ ಅನುಭವ ಮಂಟಪ ಕಾಮಗಾರಿ ವೀಕ್ಷಣೆ ಮಾಡುತ್ತೇವೆ. ನಾಳೆ ಕಲಬುರ್ಗಿ ವಿಭಾಗದಲ್ಲಿ ಮಳೆ ಹಾಗೂ ಜಲಾಶಯಗಳ ಒಳಹರಿವು ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇವೆ. ಕುಡಿಯುವ ನೀರಿನ ಪರಿಸ್ಥಿತಿಯ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂಓದಿ : ರಾಮನಗರದಲ್ಲಿ ಮಾತ್ರ ಹಾಗಾಗಿದೆ, SIR ದುರ್ಬಳಕೆ ಮಾಡಿಕೊಂಡಿಲ್ಲ; ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ – ಯತೀಂದ್ರ

Related posts

24 ಕೋಟಿ ಮೌಲ್ಯದ ಜಮೀನು ಖರೀದಿಸಿದ ಯಶ್-ರಾಧಿಕಾ ದಂಪತಿ..!

Kalpana Editor

ಕರ್ನಾಟಕಕ್ಕೆ ಮುಂಗಾರು ಎಂಟ್ರಿ – ವರುಣನ ಅಬ್ಬರ, ಧರೆಗುರುಳಿದ ಮರ ಜನಜೀವನ ಅಸ್ತವ್ಯಸ್ತ..!

Kalpana Editor

ರಾಜ್ಯದ ಪ್ರಮುಖ ಜಲಾಶಯಗಳು ಖಾಲಿ ಖಾಲಿ; ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ..?

Kalpana Editor