ಬೆಂಗಳೂರು : ಸರ್ಕಾರದಿಂದ ಹಂಚಿಕೆಯಾಗಿರುವ ಸೈಟ್ಗಳಲ್ಲಿ ಮನೆ ಕಟ್ಟದೇ ಖಾಲಿ ಬಿಟ್ಟರೆ ಅಂತಹವರಿಂದ ನಿವೇಶನಗಳನ್ನ ವಾಪಸ್ ಪಡೆಯಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ. ತ್ಯಾಜ್ಯ ಮುಕ್ತ ಹಾಗೂ ಸುಂದರ ಬೆಂಗಳೂರನ್ನ ನಿರ್ಮಿಸುವ ಉದ್ದೇಶದಿಂದ, ಹೆಬ್ಬಾಳ ಮೇಲ್ಸೇತುವೆ ಸಮೀಪದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರೊದಿಗೆ ʻತ್ಯಾಜ್ಯದಿಂದ ಸ್ವಾತಂತ್ರ್ಯʼ ಅಭಿಯಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ.
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬಿಡಿಎ, ಬಿಬಿಎಂಪಿ ಸೈಟ್ ಇರಲಿ, ಮನೆ ಕಟ್ಟದೇ ಖಾಲಿ ಬಿಟ್ಟರೆ ಡಬಲ್ ಟ್ಯಾಕ್ಸ್ ಕಟ್ಟಬೇಕಾಗುತ್ತೆ. ಅಥವಾ ಮನೆ ಕಟ್ಟದೇ ಇದ್ರೆ ಖಾಲಿ ಸೈಟನ್ನ ವಾಪಸ್ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಖಾಲಿ ಸೈಟನ್ನ ವಾಪಸ್ ಪಡೆಯುವಂತಹ ಕೆಲಸ ಆಗುತ್ತೆ. ಸರ್ಕಾರ ಮನೆ ಕಟ್ಟಲಿ ಅಂತ ಸೈಟ್ ಕೊಟ್ಟಿರೋದು, ಕಸ ಹಾಕಲಿ ಅಂತ ಅಲ್ಲ. ಖಾಲಿ ಸೈಟ್ ಮಾಡಿಕೊಂಡು ಕಸ ಹಾಕಿದ್ರೆ ಸಹಿಸಲ್ಲ. ಸರ್ಕಾರದಿಂದ ಪಡೆದ ಸೈಟ್ ಖಾಲಿ ಬಿಟ್ಟರೆ ಅಥವಾ ಮನೆ ಕಟ್ಟದೇ ಇದ್ರೆ, ಅದನ್ನ ವಾಪಸ್ ಪಡೆಯುವ ಕೆಲಸ ಆಗುತ್ತೆ ಎಂದಿದ್ದಾರೆ.
ಸರ್ಕಾರದಿಂದ ಹಂಚಿಕೆ ಆಗಿರುವ ಸೈಟ್ಗೆ ಈಗಿನ ಬೆಲೆ ಏನಿದೆ, ಆ ಹಣವನ್ನ ವಾಪಸ್ ಕೊಡ್ತೇವೆ. ಹಣ ಕೊಟ್ಟು ಸೈಟ್ ವಾಪಸ್ ಪಡೆಯುತ್ತೇವೆ. ಏಕೆಂದ್ರೆ ಕೆಲವರು ಸೈಟ್ ತೆಗೆದುಕೊಂಡು 20-30 ವರ್ಷಗಳಾದ್ರೂ ಮನೆ ಕಟ್ಟಿಲ್ಲ, ಹಾಗೇ ಖಾಲಿ ಬಿಟ್ಟಿದ್ದಾರೆ, ಕಸ ಸುರಿಯೋಕೆ ಇಟ್ಕೊಂಡಿದ್ದಾರೆ. ಆದ್ದರಿಂದ ಮನೆ ಕಟ್ಟದಿದ್ರೆ ಸೈಟ್ವಾಪಸ್ ಪಡೆಯೋದಾಗಿ ಎಚ್ಚರಿಕೆ ನೀಡಿದ್ದಾರೆ. ʻತ್ಯಾಜ್ಯದಿಂದ ಸ್ವಾತಂತ್ರ್ಯʼ ಅಭಿಯಾನದಡಿ ಕಟ್ಟಡ ನಿರ್ಮಾಣ ತ್ಯಾಜ್ಯ, ಘನ ತ್ಯಾಜ್ಯ, ಹಳೆಯ ವಿದ್ಯುತ್ ಕಂಬಗಳು, ಪೈಪ್ಗಳು, ಮಣ್ಣಿನ ಗುಡ್ಡೆಗಳು, ಬೆಳೆದು ನಿಂತ ಕಳೆಗಿಡಗಳು ಹಾಗೂ ಮರದ ಕೊಂಬೆಗಳು ಸೇರಿದಂತೆ ಒಟ್ಟು 22,372 ಟನ್ಗಳಷ್ಟು ತ್ಯಾಜ್ಯವನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಈ ಅಭಿಯಾನದ ಮೂಲಕ ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಬೆಂಗಳೂರು ನಗರವನ್ನ ತ್ಯಾಜ್ಯ ಮುಕ್ತ ಹಾಗೂ ಮಾದರಿ ಮಹಾನಗರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಇಂಧನ ಸಚಿವರಾದ ಕೆ.ಜೆ ಜಾರ್ಜ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್.ಆರ್ ವಿಶ್ವನಾಥ್ ಹಾಗೂ ಎ.ಸಿ ಶ್ರೀನಿವಾಸ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ : ಇಂದು ಪ್ರಧಾನಿ ಮೋದಿ ಆಗಮನ; ಮೈಸೂರು ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ..!
