ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎನ್ಎಸ್ ಶಂಕರ್ ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಪತ್ರಕರ್ತರೂ ಆಗಿದ್ದ ಶಂಕರ್ ಅವರು ಕನ್ನಡದ ಹೆಸರಾಂತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ‘ಉಲ್ಟಾ ಪಲ್ಟಾ’ ರೀತಿಯ ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಖ್ಯಾತಿ ಅವರಿಗಿತ್ತು. ಎನ್ಎಸ್ ಶಂಕರ್ ಅವರ ನಿಧನದ ಸುದ್ದಿ ತಿಳಿದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.
ಕಳೆದ ಕೆಲವು ದಿನಗಳಿಂದ ಎನ್ಎಸ್ ಶಂಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮಲಗಿದ್ದಾಗಲೇ ಅವರು ಕೊನೆಯುಸಿರು ಎಳೆದರು ಎನ್ನಲಾಗಿದೆ. ಉತ್ತಮ ಬರಹಗಾರರಾಗಿದ್ದ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದರು. ಆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೂ ಕೊಡುಗೆ ನೀಡಿದ್ದರು.
‘ಪ್ರಜಾವಾಣಿ’, ‘ಮುಂಗಾರು’, ‘ಲಂಕೇಶ್ ಪತ್ರಿಕೆ’ ಸೇರಿದಂತೆ ಹಲವು ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ್ದ ಎನ್.ಎಸ್. ಶಂಕರ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ‘ಶಂಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ’ ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಎನ್ಎಸ್ ಶಂಕರ್ ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ. ಆದರೆ ಅವರು ಬಾಲ್ಯವನ್ನು ಕಳೆದಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ. ಹೈಸ್ಕೂಲ್ ಓದಿದ್ದು ಮೈಸೂರಿನಲ್ಲಿ. ಕಾಲೇಜು ಶಿಕ್ಷಣವನ್ನು ಅವರು ಬೆಂಗಳೂರಿನಲ್ಲಿ ಪಡೆದರು. ಮೊದಲು ಪತ್ರಕರ್ತನಾಗಿದ್ದ ಅವರು ನಂತರ ಚಿತ್ರರಂಗಕ್ಕೆ ಬಂದು ಅಲ್ಲಿಯೂ ಯಶಸ್ಸು ಕಂಡರು. ಇದನ್ನೂ ಓದಿ : 7ನೇ ತರಗತಿ ಪಾಸಾಗಿದ್ರೂ ಸಾಕು, ನಿಮಗಿದೆ ಸರ್ಕಾರಿ ಸಂಸ್ಥೆಯಲ್ಲಿ ದುಡಿಯುವ ಅವಕಾಶ..!
