ರಾಮನಗರ : ಇಂದು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಬಿಡದಿಯ ವಂಡರ್ಲಾ ರೆಸಾರ್ಟ್ನಲ್ಲಿರುವ ಕಾಂಗ್ರೆಸ್ ಶಾಸಕರನ್ನು ವಿಧಾನಸೌಧಕ್ಕೆ ಕರೆತರುವ ಸಲುವಾಗಿ 5 ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಕಾಂಗ್ರೆಸ್ ಶಾಸಕರ ಮೊದಲ ತಂಡ ರೆಸಾರ್ಟ್ನಿಂದ ವಿಧಾನಸೌಧಕ್ಕೆ ಆಗಮಿಸಿದೆ.
ಪರಿಷತ್ನ 7 ಸ್ಥಾನಗಳಿಗೆ ಇಂದು ಮತದಾನ ಹಿನ್ನೆಲೆ ಅಡ್ಡ ಮತದಾನದ ಭೀತಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ರೆಸಾರ್ಟ್ನಿಂದ ನೇರವಾಗಿ ವಿಧಾನಸೌಧಕ್ಕೆ ಶಾಸಕರು ಆಗಮಿಸಿ ಮತದಾನ ಮಾಡಲಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ನೇತೃತ್ವದಲ್ಲಿ ವಂಡರ್ಲಾ ರೆಸಾರ್ಟ್ನಿಂದ ಕಾಂಗ್ರೆಸ್ ಶಾಸಕರು ಬೆಂಗಳೂರಿನ ವಿಧಾನಸೌಧಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಕಾಂಗ್ರೆಸ್ನಿಂದ ಐದು ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿಯಿಂದ ಉಚ್ಚಾಟಿತ ಎಸ್ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿ 140 ಶಾಸಕರು ಕಾಂಗ್ರೆಸ್ ಪರ ಇದ್ದಾರೆ. ವಿಧಾನಸಭೆ ಮೊದಲ ಮಹಡಿ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ 4 ಗಂಟೆಯ ತನಕ ಮತದಾನ ನಡೆಯಲಿದೆ. ಸಂಜೆ 5 ಗಂಟೆಯ ಬಳಿಕ ಎಣಿಕೆ ಕಾರ್ಯ ನಡೆಯಲಿದೆ.
ಪ್ರತಿ ಅಭ್ಯರ್ಥಿಗೆ ಒಬ್ಬರಂತೆ ಏಜೆಂಟ್ ನೇಮಕ ಮಾಡಿದ್ದು, ಏಜೆಂಟ್ ಎಲ್ಲವನ್ನೂ ನೋಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ವಿಧಾನಪರಿಷತ್ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಏಳು ಸ್ಥಾನಗಳಿಗೆ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ನಾಲ್ಕು ಅಭ್ಯರ್ಥಿಗಳ ಆಯ್ಕೆ ದಾರಿ ಸಲೀಸಾಗಿದೆ. ಆದರೆ, ಐದನೇ ಅಭ್ಯರ್ಥಿಯ ಗೆಲುವಿನ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಈ ನಡುವೆ ಜೆಡಿಎಸ್ ಗೋವಿಂದರಾಜು ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.
ಹೀಗಾಗಿ ಚುನಾವಣೆ ಕಾವು ಪಡೆದುಕೊಂಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಹಣಾಹಣಿ ಏರ್ಪಟ್ಟಿದೆ. ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ನಿಂದ 5 ಅಭ್ಯರ್ಥಿಗಳು ಕಣದಲ್ಲಿದ್ದು, ಒಬ್ಬ ಅಭ್ಯರ್ಥಿ ಗೆಲುವಿಗೆ ತಲಾ 28 ಮತಗಳು ಅಗತ್ಯವಿದೆ. ಮೊದಲ 4 ಅಭ್ಯರ್ಥಿಗಳಿಗೆ ತಲಾ 29 ಮತ ಹಾಕಿಸಲು ತೀರ್ಮಾನ ಮಾಡಲಾಗಿದೆ. ಓರ್ವ ಅಭ್ಯರ್ಥಿಗೆ ತಲಾ 29 ಮತದಂತೆ ನಾಲ್ವರಿಗೆ ಒಟ್ಟು 116 ಮತಗಳನ್ನು ಹಾಕುವ ಮೂಲಕ ಗೆಲ್ಲಿಸಲಾಗುತ್ತೆ. ಹಾಗೆ 5ನೇ ಅಭ್ಯರ್ಥಿಗೆ ಕಾಂಗ್ರೆಸ್ನ 19 ಮತಗಳು ಹಾಕಿಸಲು ತೀರ್ಮಾನ ಮಾಡಲಾಗಿದೆ. ಇದನ್ನೂ ಓದಿ : ವಿಧಾನಪರಿಷತ್ ಚುನಾವಣೆ: ಜಿ.ಟಿ ದೇವೇಗೌಡ ಸೇರಿ 40 ಶಾಸಕರಿಂದ ಬಿರುಸಿನ ಮತದಾನ, 7ನೇ ಸ್ಥಾನಕ್ಕೆ ಭಾರೀ ಫೈಟ್..!
