ಬೆಂಗಳೂರು : ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ASICC(R) ವತಿಯಿಂದ ನಗರದ ಕ್ಯಾಪಿಟಲ್ ಹೋಟೆಲ್ನ ಗ್ರಾಂಡ್ ಬಾಲ್ರೂಮ್ ಹಾಲ್ನಲ್ಲಿ ‘ಸರ್ಜನ್ಸ್ ಡೇ 2026’ ಅನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಜಿ. ಬಸವರಾಜ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ವರ್ಷದ ಪ್ರತಿಷ್ಠಿತ ‘ಪ್ರೊ. ಬಿ. ಎನ್. ಬಾಲಕೃಷ್ಣ ರಾವ್ ಸ್ಮರಣಾರ್ಥ ಉಪನ್ಯಾಸ’ವನ್ನು (Memorial Oration) ಹೈದರಾಬಾದ್ನ ಅಂತರರಾಷ್ಟ್ರೀಯ ಖ್ಯಾತಿಯ ಸ್ತನ ಶಸ್ತ್ರಚಿಕಿತ್ಸಕರು, ಬಿ. ಸಿ. ರಾಯ್ ಪ್ರಶಸ್ತಿ ಪುರಸ್ಕೃತರು ಹಾಗೂ ಗಿನ್ನೆಸ್ ದಾಖಲೆ ಸರದಾರರಾದ ಪದ್ಮಶ್ರೀ ಡಾ. ಪಿ. ರಘು ರಾಮ್ ಅವರು ನೀಡಿದರು. “ಬಿಯಾಂಡ್ ದಿ ಆಪರೇಟಿಂಗ್ ರೂಮ್, ರಿಇಮ್ಯಾಜಿನಿಂಗ್ ಬ್ರೆಸ್ಟ್ ಹೆಲ್ತ್ಕೇರ್ ಇನ್ ಇಂಡಿಯಾ” ಎಂಬ ವಿಷಯದ ಕುರಿತು ಅವರು ನೀಡಿದ ಅತ್ಯಂತ ಸ್ಪೂರ್ತಿದಾಯಕ ಹಾಗೂ ಮನಮೋಹಕ ಉಪನ್ಯಾಸವು ಸಭಿಕರ ಪ್ರಶಂಸೆಗೆ ಪಾತ್ರವಾಯಿತು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಹಾಗೂ ಸಂಸ್ಥೆಗೆ ಅಪಾರ ಕೊಡುಗೆ ನೀಡಿದ ಹಿರಿಯ ಶಸ್ತ್ರಚಿಕಿತ್ಸಕರಾದ ಡಾ. ಜಿ. ಕೆ. ವೆಂಕಟೇಶ್ ಮತ್ತು ಡಾ. ಡಿ. ಆರ್. ಶೇಖರ್ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಡಾ. ಸುನಿಲ್ ಕುಮಾರ್ ವಿ. ಮತ್ತು ಗೌರವಾನ್ವಿತ ಕಾರ್ಯದರ್ಶಿ ಡಾ. ವಿಕ್ರಮ್ ಎಸ್. ಬಿಲಿಗಿರಿ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ, ಡಾ. ರಾಜಶೇಖರ್ ಜಕಾ, ಡಾ. ವೆಂಕಟೇಶ್ ಕೆ. ಎಲ್., ಡಾ. ಹರೀಶ್ ಗೌಡ ಸೇರಿದಂತೆ ಹಲವು ಹಿರಿಯ ವೈದ್ಯರು, ಶಸ್ತ್ರಚಿಕಿತ್ಸಕರು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಇದನ್ನೂ ಓದಿ :ವಂಡರ್ಲಾ ರೆಸಾರ್ಟ್ನಲ್ಲಿರೋ ‘ಕೈ’ ಶಾಸಕರನ್ನು ಕರೆತರಲು ಬಸ್ಗಳ ವ್ಯವಸ್ಥೆ..!
