ಗದಗ : ಗದಗ ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆಯುತ್ತಿದ್ದ ಸೀನಿಯರ್ ಸೆಕೆಂಡರಿ ನೇರ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪರೀಕ್ಷಾ ಕೊಠಡಿಗಳ ಬಾಗಿಲು ಬಂದ್ ಮಾಡಿ ಪರೀಕ್ಷೆ ನಡೆಸುವುದು, ಚಿಕ್ಕ ಕೊಠಡಿಗಳಲ್ಲಿ ಅಭ್ಯರ್ಥಿಗಳನ್ನು ಕಿಕ್ಕಿರಿದು ಕೂರಿಸುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ನಡೆದಿವೆ.
ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎಜುಕೇಷನ್ ಮಂಡಳಿ, ಬೆಂಗಳೂರು ನಡೆಸುತ್ತಿರುವ ಈ ಪರೀಕ್ಷೆಗೆ ಗದಗ ನಗರದ ಕಳಸಾಪುರ ರಸ್ತೆಯ ಆರ್ಯಭಟ ಸ್ವತಂತ್ರ ಪದವಿ ಪೂರ್ವ ಕಾಲೇಜನ್ನು ಪರೀಕ್ಷಾ ಕೇಂದ್ರವಾಗಿ ಬಳಸಲಾಗಿದೆ. ಅಭ್ಯರ್ಥಿಗಳಿಂದ ಹಣ ಪಡೆದು ಮನಬಂದಂತೆ ಪರೀಕ್ಷೆ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಪರೀಕ್ಷಾ ಕೇಂದ್ರದಲ್ಲಿರುವ ಚಿಕ್ಕ ಕೊಠಡಿಗಳಲ್ಲಿ ಅಭ್ಯರ್ಥಿಗಳನ್ನು ಕಿಕ್ಕಿರಿದು ಕೂರಿಸಲಾಗಿತ್ತು ಎನ್ನಲಾಗಿದೆ. ಒಂದು ಕೊಠಡಿಯಲ್ಲಿ ಸುಮಾರು 48 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಒಟ್ಟು ಐದು ಕೊಠಡಿಗಳಲ್ಲಿ ಸುಮಾರು 240 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವ ದೃಶ್ಯ ಕಂಡುಬಂದಿದೆ.
ಇಂದು ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದ್ದ ವೇಳೆ ಪರೀಕ್ಷಾ ಕೊಠಡಿಗಳ ಬಾಗಿಲುಗಳನ್ನು ಹೊರಗಿನಿಂದಲೇ ಬಂದ್ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಅಲ್ಲದೆ, ಪರೀಕ್ಷೆಯ ಮೇಲ್ವಿಚಾರಕರು ಕೊಠಡಿಯೊಳಗೆ ಮೊಬೈಲ್ ಬಳಸುತ್ತಿದ್ದರು ಎನ್ನಲಾಗಿದೆ. ಸರ್ಕಾರದ ಪರೀಕ್ಷಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.
ಮಾಧ್ಯಮದವರು ಸ್ಥಳಕ್ಕೆ ತೆರಳಿ ಚಿತ್ರೀಕರಣಕ್ಕೆ ಮುಂದಾದಾಗ ಪರೀಕ್ಷಾ ಕೇಂದ್ರದ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ. ನಿಮಗೆ ಪರವಾನಗಿ ಇಲ್ಲ, ಇಲ್ಲಿ ಬರಬೇಡಿ, 100 ಮೀಟರ್ ದೂರ ನಿಲ್ಲಿ ಎಂದು ಸಿಬ್ಬಂದಿ ವಾಗ್ವಾದ ನಡೆಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಪರೀಕ್ಷಾ ಕೊಠಡಿಗಳ ಬಾಗಿಲು ತೆರೆಯಲಾಯಿತು. ಆಗ ಒಳಗಿನ ವ್ಯವಸ್ಥೆ ಬಹಿರಂಗವಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ, ನಮಗೆ ಯಾವುದೇ ಅಧಿಕಾರಿಗಳು ಸಂಬಂಧಿಸುವುದಿಲ್ಲ. ನಾವು ಮತ್ತು ನಮ್ಮ ಇನ್ಸ್ಟಿಟ್ಯೂಟ್ ಸುಪ್ರೀಂ ಇಲ್ಲಿ ಎಂದು ಸಿಬ್ಬಂದಿ ಹೇಳಿರುವ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ : ರಾಮ ಮಂದಿರ ದೇಣಿಗೆ ಅಕ್ರಮ; ಸಿಎಂ ಯೋಗಿ ಯಾರನ್ನೂ ಬಿಡಲ್ಲ – ಸಿ.ಟಿ.ರವಿ
