ಬೆಂಗಳೂರು/ಮುಂಬೈ : ಟೀಮ್ ಇಂಡಿಯಾದ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ತರಬೇತಿ ಕೇಂದ್ರವನ್ನು ಮುಂಬೈನಿಂದ ಬೆಂಗಳೂರಿಗೆ ಅಧಿಕೃತವಾಗಿ ಸ್ಥಳಾಂತರಿಸಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ನೂತನ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ತಮ್ಮ ಉಳಿದ ಕ್ರಿಕೆಟ್ ವೃತ್ತಿಜೀವನದ ಖಾಯಂ ತರಬೇತಿ ನೆಲೆಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಈ ಮೂಲಕ ಈ ರೀತಿಯ ಸುದೀರ್ಘ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಪ್ರಮುಖ ಸಕ್ರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುಜರಾತ್ನ ಬರೋಡಾದವರಾದ ಹಾರ್ದಿಕ್ ಪಾಂಡ್ಯ, ಕಳೆದ ಒಂದು ದಶಕದಿಂದ ಮುಂಬೈನ ಲೋವರ್ ಪ್ಯಾರಲ್ನಲ್ಲಿ ನೆಲೆಸಿದ್ದರು. ಆದರೆ ಮುಂಬೈನ ಟ್ರಾಫಿಕ್ ಹಾಗೂ ಪ್ರತಿದಿನ ತರಬೇತಿಗಾಗಿ ಘನ್ಸೋಲಿಯಲ್ಲಿರುವ ಮುಂಬೈ ಇಂಡಿಯನ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್ಗೆ ಪ್ರಯಾಣಿಸುವುದು ಅವರಿಗೆ ಕಷ್ಟಕರವಾಗಿತ್ತು.
ಈ ಕಾರಣಕ್ಕಾಗಿ ಅವರು ಮುಂಬೈ ತೊರೆದು, ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸಮೀಪವೇ ಆಸ್ತಿಯೊಂದನ್ನು ಬಾಡಿಗೆಗೆ ಪಡೆದು ಶಿಫ್ಟ್ ಆಗಿದ್ದಾರೆ. ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿರುವ ಆಟಗಾರರು ಸಾಮಾನ್ಯವಾಗಿ ಗಾಯಗೊಂಡಾಗ ಪುನಶ್ಚೇತನ ಶಿಬಿರಕ್ಕಾಗಿ ಅಥವಾ ಫಿಟ್ನೆಸ್ ಪರೀಕ್ಷೆಗಳಿಗಾಗಿ ಮಾತ್ರ ಬೆಂಗಳೂರಿನ ಈ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಆದರೆ ಹಾರ್ದಿಕ್ ಪಾಂಡ್ಯ, ಇನ್ಮುಂದೆ ತಾವು ಅಂತಾರಾಷ್ಟ್ರೀಯ ಪಂದ್ಯಗಳು ಅಥವಾ ಐಪಿಎಲ್ ಆಡದ ಸಮಯದಲ್ಲಿ ವರ್ಷದ ಸಂಪೂರ್ಣ ಅವಧಿ ಇಲ್ಲೇ ತರಬೇತಿ ನಡೆಸಲಿದ್ದಾರೆ.
ಇತ್ತೀಚೆಗೆ ಸ್ನಾಯು ಸೆಳೆತ ಒಳಗಾಗಿದ್ದರಿಂದ ಹಾರ್ದಿಕ್ ಪಾಂಡ್ಯ ಭಾರತ ತಂಡದ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಮುಂದಿನ 5-6 ವರ್ಷಗಳ ಕಾಲ ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ಸಕ್ರಿಯವಾಗಿರಲು ಯೋಜಿಸಿದ್ದು, ಅದಕ್ಕಾಗಿ ಬೆಂಗಳೂರಿನ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳಲಿದ್ದಾರೆ. ಇದನ್ನೂ ಓದಿ : ಗದಗದಲ್ಲಿ ಪರೀಕ್ಷಾ ಗೋಲ್ಮಾಲ್; ಬಾಗಿಲು ಬಂದ್ ಮಾಡಿ ಒಳಗೆ ಎಕ್ಸಾಮ್ ನಡೆಸಿದ ಸಿಬ್ಬಂದಿ
