ಬೆಂಗಳೂರು : ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ ವಿರೋಧಿಸಿ ಜೆಡಿಎಸ್ ಪಕ್ಷವು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಸರ್ಕಾರದ ಕ್ರಮವನ್ನು “ಗ್ಯಾರಂಟಿ ಮೋಸ” ಎಂದು ಟೀಕಿಸಿದೆ. ಅಲ್ಲದೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಹಲವು ಪ್ರಶ್ನೆಗಳನ್ನು ಕೇಳಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ಎಲ್ಲರಿಗೂ ಉಚಿತ ವಿದ್ಯುತ್, ಯಾವುದೇ ಷರತ್ತು ಇಲ್ಲ ಎಂದು ಭರವಸೆ ನೀಡಿತ್ತು. ಆದರೆ ಈಗ ಗೃಹಜ್ಯೋತಿ ಯೋಜನೆಯನ್ನು ಮರು ಪರಿಶೀಲನೆ ಮಾಡುವ ಮೂಲಕ ಫಲಾನುಭವಿಗಳನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.
ಮನೆ-ಮನೆಗೆ ತೆರಳಿ ಎಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ವಿವಿಧ ದಾಖಲೆಗಳನ್ನು ಕೇಳಿ ಜನರನ್ನು ಆತಂಕಕ್ಕೆ ದೂಡಲಾಗುತ್ತಿದೆ. ದಾಖಲೆಗಳ ಹೆಸರಿನಲ್ಲಿ ಜನರನ್ನು ಅನಗತ್ಯವಾಗಿ ಅಲೆದಾಡಿಸಲಾಗುತ್ತಿದೆ ಎಂದು ಜೆಡಿಎಸ್ ಪಕ್ಷ ಟೀಕಿಸಿದೆ. ಉಚಿತ ವಿದ್ಯುತ್ ಪಡೆಯಲು ಪಾನ್ ಕಾರ್ಡ್ ಯಾಕೆ ಬೇಕು? ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ..? ಕರ್ನಾಟಕದ ನಿವಾಸಿ ಎಂದು ದೃಢೀಕರಿಸಲು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಸಾಕಾಗುವುದಿಲ್ಲವೇ ಎಂದು ಸರ್ಕಾರಕ್ಕೆ ಜೆಡಿಎಸ್ ಪ್ರಶ್ನಿಸಿದೆ.
ಮರು ಪರಿಶೀಲನೆಯ ಹೆಸರಿನಲ್ಲಿ ಹೊಸ ಷರತ್ತುಗಳನ್ನು ಜಾರಿಗೆ ತಂದು, ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ಯೋಜನೆಯಿಂದ ಹೊರಗಿಡುವ ಉದ್ದೇಶ ಸರ್ಕಾರಕ್ಕಿದೆ. ದಿನಕ್ಕೊಂದು ದಾಖಲೆ ಕೇಳಿ ಬಡವರು, ರೈತರು ಹಾಗೂ ಮಧ್ಯಮ ವರ್ಗದ ಜನರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದು ಸರಿಯಲ್ಲ. ಜನರಿಗೆ ನೀಡಿದ್ದ ಭರವಸೆಯನ್ನು ಸರ್ಕಾರ ಉಳಿಸಿಕೊಳ್ಳಬೇಕು ಎಂದು ಪಕ್ಷ ಆಗ್ರಹಿಸಿದೆ. ಇದನ್ನೂ ಓದಿ : ಹಸು, ಕರುಗಳ ವಧೆ ನಿಷೇಧಿಸಿ ಹೈಕೋರ್ಟ್ ಆದೇಶ – ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ ತಮಿಳುನಾಡು ಸರ್ಕಾರ
