ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತೀವ್ರಗೊಂಡಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಡ್ಯಾಂ ನೀರಿನ ಮಟ್ಟ ಶೀಘ್ರದಲ್ಲೇ 100 ಅಡಿ ತಲುಪುವತ್ತ ಧಾವಿಸುತ್ತಿದ್ದು, ಕಾವೇರಿ ನೀರಿಗಾಗಿ ನಡೆಯುತ್ತಿದ್ದ ಹೋರಾಟಗಳಿಗೆ ಪ್ರಕೃತಿಯೇ ತಾತ್ಕಾಲಿಕ ಬ್ರೇಕ್ ಹಾಕಿದಂತಾಗಿದೆ.
ಮಳೆ ಬಿರುಸುಗೊಂಡ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಕೇವಲ ಎರಡು ದಿನಗಳ ಹಿಂದೆ 92 ಅಡಿಯಷ್ಟಿದ್ದ ನೀರಿನ ಮಟ್ಟ, ಇದೀಗ ಭರಪೂರ ಒಳಹರಿವಿನಿಂದಾಗಿ 97 ಅಡಿಗೆ ಏರಿಕೆಯಾಗಿದೆ. ಮೊನ್ನೆ ಡ್ಯಾಂನಲ್ಲಿ 17 ಟಿಎಂಸಿ ಇದ್ದ ನೀರಿನ ಸಂಗ್ರಹ, ಪ್ರಸ್ತುತ 20.477 ಟಿಎಂಸಿಗೆ ಹೆಚ್ಚಳವಾಗಿದೆ.
ಇದೇ ರೀತಿ ಮಳೆ ಆರ್ಭಟ ಮುಂದುವರಿದರೆ, ಇನ್ನು ಕೆಲವೇ ದಿನಗಳಲ್ಲಿ ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ. ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ಜಲಾನಯನ ಪ್ರದೇಶದ ಜನರಲ್ಲಿ ಹರ್ಷ ಮೂಡಿದೆ. ಇದನ್ನೂ ಓದಿ : ಕಬಿನಿ ಡ್ಯಾಮ್ನ ಗೇಟ್ ಓಪನ್; 25 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ..!
